ರಾಜ್ಯದಲ್ಲಿ ಜೆಡಿಎಸ್ ಬಹುಮತದೊಂದಿಗೆ ಅಧಿಕಾರ ಪಡೆಯಲಿದೆ : ಎಚ್.ಡಿ.ಕುಮಾರ ಸ್ವಾಮಿ
ಮಂಗಳೂರು,ಫೆ.12:ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯದಲ್ಲಿ 131 ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಿ ಪ್ರಬಲ ಪ್ರಾದೇಶಿಕ ಪಕ್ಷವಾಗಿ ರಾಜ್ಯದಲ್ಲಿ ಅಧಿಕಾರಕ್ಕೇರಲಿದೆ ಎಂದು ಎಚ್.ಡಿ.ಕುಮಾರ ಸ್ವಾಮಿ ತಿಳಿಸಿದರು.
ನಗರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಈ ಕಲೆಕ್ಷನ್ ಸಂಸ್ಕೃತಿಯನ್ನು ಕೊನೆಗೊಳಿಸಲಿದೆ.ರಾಜ್ಯದಲ್ಲಿ ಕಾಂಗ್ರೆಸ್ -ಬಿಜೆಪಿ ಅಧಿಕಾರದಿಂದ ಬೇಸತ್ತ ಜನ ಪ್ರಾದೇಶಿಕ ಪಕ್ಷದ ಬಗ್ಗೆ ಒಲವು ಹೊಂದಿದ್ದಾರೆ.ಇದರಿಂದ ಮುಂದಿನ ಚುನಾವಣೆ ಜೆಡಿಎಸ್ಗೆ ಪೂರಕವಾಗಲಿದೆ.ಬೆಂಗಳೂರಿನ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮಂಗಳೂರಿನ ಬಂದರು ಅಭಿವೃದ್ಧಿಗೆ ಜೆಡಿಎಸ್ ಯೋಜನೆ ರೂಪಿಸಲಿದೆ ಎಂದು ಕುಮಾರ ಸ್ವಾಮಿ ತಿಳಿಸಿದರು.
ಬರ ಪರಿಹಾರಕ್ಕೆ ಕೇಂದ್ರದಿಂದ ಕನಿಷ್ಟ ಮೊತ್ತ ಬಿಡುಗಡೆ: ರಾಜ್ಯದಲ್ಲಿ ಬರ ತಲೆ ದೋರಿದ್ದರೂ ಕೇಂದ್ರ ಸರಕಾರ 450 ಕೋಟಿ ರೂಗಳ ಕನಿಷ್ಟ ಮೊತ್ತವನ್ನು ಮಾತ್ರ ಬಿಡುಗಡೆ ಮಾಡಿದೆ.ಕೇಂದ್ರ ಸರಕಾರ ಬಿಡುಗಡೆ ಮಾಡುತ್ತೇವೆ ಎಂದು ಹಣವನ್ನು ಬಿಡಿಗಡೆ ಮಾಡಿಲ್ಲ ಏಕೆಂದರೆ ಕೇಂದ್ರದ ಬಳಿಯೂ ಹಣದ ಕೊರತೆ ಇದೆ ಹೀಗಿರುವಾಗ ರಾಜ್ಯದಲ್ಲಿರುವ ಆಲಸ್ಯದಿಂದ ಕೂಡಿರುವ ಭಂಡ ಸರಕಾರ ಬರಪರಿಹಾರದ ಬಗ್ಗೆ ತುರ್ತು ಕ್ರಮ ಕೈಗೊಳ್ಳುವ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ಕುಮಾರ ಸ್ವಾಮಿ ತಿಳಿಸಿದ್ದಾರೆ.
ಎತ್ತಿನಹೊಳೆ ಯೋಜನೆ ವಿರೊಧಿಸಲು ಬಿಜೆಪಿ ಮುಖಂಡರಿಗೆ ನೈತಿಕ ಹಕ್ಕಿಲ್ಲ: ಎತ್ತಿನ ಹೊಳೆ ಯೋಜನೆಯ ಬಗ್ಗೆ ಶಿಲಾನ್ಯಾಸ ನಡೆಸಿ ಹಣ ಬಿಡುಗಡೆ ಮಾಡಿ ಒಂದು ವರುಷದೊಳಗೆ ಕೋಲಾರಕ್ಕೆ ನೀರು ನೀಡುತ್ತೇವೆ ಎಂದ ಆಗಿನ ಮುಖ್ಯ ಮಂತ್ರಿ ಸದಾನಂದ ಗೌಡ ಯೋಜನೆಯ ಮುಖ್ಯ ರೂವಾರಿ.ವೀರಪ್ಪ ಮೊಯ್ಲಿಯವರು ಅಲ್ಲಿದ್ದರು, ಆಗ ದಕ್ಷಿಣ ಕನ್ನಡ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಇಷ್ಟು ದಿನ ಏಕೆ ವೌನವಹಿಸಿ ಈಗ ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ.ಇದೊಂದು ಹಣ ಹೊಡೆಯಲು ಮಾಡಿದ ಯೋಜನೆ.ಜೆಡಿಎಸ್ ಅಧಿಕಾರಕ್ಕೆ ಬಂದರೆ ಈ ಬಗ್ಗೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಕುಮಾರ ಸ್ವಾಮಿ ತಿಳಿಸಿದರು.
ಕೋಲಾರದ ಜನರಿಗೆ ನೀರು ನೀಡಲು ಜೆಡಿಎಸ್ ಪರ್ಯಾಯ ಯೋಜನೆಯನ್ನು ಹೊಂದಿದೆ.ಅಧಿಕಾರಕ್ಕೆ ಬಂದ ತಕ್ಷಣ ಅದನ್ನು ಕೈ ಗೆತ್ತಿಕೊಳ್ಳುತ್ತೇವೆ.ನಮ್ಮ ನೆರೆಯ ಆಂಧ್ರಪ್ರದೇಶ ತೆಲುಗು-ಗಂಗಾ ಯೋಜನೆಯ ಮೂಲಕ ತಮ್ಮ ನೀರಿನ ಬವಣೆ ನೀಗಿಸಿ ಕೊಂಡಿದ್ದಾರೆ ಎಂದು ಕುಮಾರ ಸ್ವಾಮಿ ತಿಳಿಸಿದ್ದಾರೆ.