ಮಂಗಳೂರಿನಲ್ಲಿ ರಂಗಾಯಣ ಕೇಂದ್ರ ಸ್ಥಾಪನೆಗೆ ಆಗ್ರಹ

Update: 2017-02-13 13:23 GMT

ಮಂಗಳೂರು, ಫೆ.13: ಕರಾವಳಿ ಕರ್ನಾಟಕದ ರಂಗಭೂಮಿ ಮತ್ತು ಸಾಂಸ್ಕೃತಿಕ ವಲಯವು ಇನ್ನಷ್ಟು ಸಮೃದ್ಧ ಹಾಗೂ ಪ್ರಭಾವಿಯಾಗಲು ಇಲ್ಲಿನ ಸಂಸ್ಕೃತಿ, ಕಲೆ, ಮತ್ತು ಭಾಷೆಗಳ ಸೊಗಡು ರಾಜ್ಯದ ಬೇರೆ ಕಡೆಗೆ ಪರಿಣಾಮಕಾರಿಯಾಗಿ ಪಸರಿಸಲು ಮೈಸೂರಿನ ರಂಗಾಯಣದ ಮಾದರಿಯಲ್ಲಿ ಮಂಗಳೂರಿನಲ್ಲಿ ರಂಗಾಯಣದ ಕೇಂದ್ರ ಸ್ಥಾಪನೆಯಾಗಬೇಕು. ಇದಕ್ಕಾಗಿ ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಬೇಕೆಂದು ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಅಗ್ರಹಿಸಿದ್ದಾರೆ.

  ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಇತ್ತೀಚೆಗೆ ಅವರ ‘ಕೃಷ್ಣ’ ನಿವಾಸ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಅರ್ಪಿಸಿದ ಪಿ.ವಿ.ಮೋಹನ್, ಈ ಭಾಗದ ಸಂಸ್ಕೃತಿಯು ವೈವಿಧ್ಯಮಯವಾಗಿದೆ. ಇಲ್ಲಿಯ ಧಾರ್ಮಿಕ ಸಮನ್ವಯ, ಐಕ್ಯ, ಪರಸ್ಪರ ನಂಬಿಕೆ, ಸೌಹಾರ್ದಕ್ಕೆ ಇತಿಹಾಸವಿದೆ. ಆದರೆ ಈಗ ಇಲ್ಲಿ ಸಾಂಸ್ಕೃತಿಕ ಪ್ರಕ್ಷುಬ್ದತೆ ಹಾಗೂ ಸಾಮಾಜಿಕ ಅಭದ್ರತೆಯ ವಾತಾವರಣವಿದೆ. ಈ ಹಿನ್ನಲೆಯಲ್ಲಿ ರಂಗಾಯಣದ ಸ್ಥಾಪನೆಯು ಅತೀ ಅಗತ್ಯವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಇಲ್ಲಿಯ ಮೌಖಿಕ ಪರಂಪರೆಯ ಜನಪದ ಸಾಹಿತ್ಯ ಶಿಥಿಲಗೊಳ್ಳುತ್ತಿದೆ. ಮೂಲ ದ್ರಾವಿಡ ಸಂಸ್ಕೃತಿಗೆ ಸೇರಿದ ಇಲ್ಲಿಯ ಕೊರಗ, ಪರವ, ಪಂಬದ, ನಲಿಕೆ, ಮಲೆಕುಡಿಯ ಮುಂತಾದ ಸಮುದಾಯಗಳ ವೈವಿಧ್ಯಮಯ ಆಡುನುಡಿಗಳು, ನುಡಿಕಟ್ಟುಗಳು ಅಪಾರ ಶಬ್ದ ಸಂಪತ್ತು ಎಲ್ಲವು ರಂಗಾಯಣದ ಸ್ಥಾಪನೆಯನ್ನು ಸಾರ್ಥಕಗೊಳಿಸಲಿದೆ. ಪಾಡ್ದನಗಳಿಂದ ಹಿಡಿದು ಯಕ್ಷಗಾನಗಳವರೆಗಿನ ಸಾಂಸ್ಕೃತಿಕ ಪ್ರಬೇಧಗಳು ರಂಗಭೂಮಿಯನ್ನು ರೂಪಿಸಲು, ಪರಿವರ್ತಿಸಲು, ಶ್ರೀಮಂತಗೊಳಿಸಲು ಬೇಕಾದಷ್ಟು ವಸ್ತು ವಿಷಯಗಳನ್ನು, ಸಾಂಸ್ಕೃತಿಕ ಸಾಮಾಗ್ರಿಗಳನ್ನು ನೀಡಲಿವೆ ಎಂದು ಪಿ.ವಿ.ಮೋಹನ್ ಅಭಿಪ್ರಾಯಪಟ್ಟಿದ್ದಾರೆ.

ಇದರೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೆಹರು ಚಿಂತನಾ ಕೇಂದ್ರದ ಸ್ಥಾಪನೆಗೆ ಸಂಬಂಧಿಸಿ ಬಿಡುಗಡೆಯಾಗಬೇಕಾಗಿರುವ 3 ಕೋ.ರೂ.ಇನ್ನೂ ಆರ್ಥಿಕ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿರುವುದನ್ನು ಮುಖ್ಯಮಂತ್ರಿಗಳ ಗಮನ ತಂದು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News