ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ : ಪಶ್ಚಿಮ ವಲಯ ಐಜಿಪಿ ಕಠಿಣ ಕ್ರಮದ ಎಚ್ಚರಿಕೆ
ಮಂಗಳೂರು, ಫೆ.13: ಸಮಾಜಘಾತುಕ ವ್ಯಕ್ತಿಗಳು ಫೇಸ್ಬುಕ್, ಟ್ವಿಟರ್, ವಾಟ್ಸ್ ಆ್ಯಪ್, ಇನ್ಸ್ಟಾಗ್ರಾಮ್, ವಿ-ಚಾಟ್, ಸ್ಕೈಪ್ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಸುಳ್ಳು ಸಂದೇಶಗಳನ್ನು ಬಿತ್ತರಿಸಿ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಕೆಲಸಗಳನ್ನು ಮಾಡುತ್ತಿರುವುದು ಕಂಡುಬಂದಿದೆ. ಈ ರೀತಿ ಸಾಮಾಜಿಕ ಜಾಲತಾಣಗಳು ಹಾಗೂ ಬರವಣಿಗೆಗಳ ಮುಖಾಂತರ ಸಂದೇಶಗಳನ್ನು ಕಳುಹಿಸುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ಪಿ. ಹರಿಶೇಖರನ್ ತಿಳಿಸಿದ್ದಾರೆ.
ವಿವಿಧ ಗುಂಪುಗಳ ನಡುವೆ ಮತ, ಮೂಲವಂಶ, ಜನ್ಮಸ್ಥಳ, ನಿವಾಸ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ದ್ವೇಷವನ್ನು ಉಂಟುಮಾಡುವುದು ಮತ್ತು ಸೌಹಾರ್ದಕ್ಕೆ ಬಾಧಕವಾಗುವ ಕೃತ್ಯಗಳನ್ನು ಮಾಡುವುದು ಮತ್ತು ಆಡಿದ ಮಾತುಗಳಿಂದ ಇಲ್ಲವೆ ಬರೆದ ಶಬ್ದಗಳಿಂದ ಅಥವಾ ಸಂಜ್ಞೆಗಳಿಂದ ಅಥವಾ ದೃಶ್ಯ ನಿರೂಪಣೆಗಳಿಂದ ಅಥವಾ ಬೇರೆ ರೀತಿಯಲ್ಲಿ ಮತ, ಮೂಲವಂಶ, ಜನ್ಮಸ್ಥಳ, ನಿವಾಸ, ಭಾಷೆ, ಜಾತಿ, ಕೋಮು ಅಥವಾ ಇತರ ಯಾವುದೇ ಪ್ರಾದೇಶಿಕ ಗುಂಪುಗಳ ನಡುವೆ ಅಥವಾ ಕೋಮುಗಳ ನಡುವೆ ಸೌಹಾರ್ದ ಕೆಡಿಸುವ ಅಥವಾ ವೈರ, ದ್ವೇಷ ಅಥವಾ ವೈಮನಸ್ಸಿನ ಭಾವನೆಗಳನ್ನು ಹೆಚ್ಚಿಸಿದರೆ ಅಥವಾ ಹೆಚ್ಚಿಸಲು ಪ್ರಯತ್ನಿಸಿದರೆ ಅಥವಾ ವಿವಿಧ ಮತೀಯ, ಮೂಲವಂಶೀಯ, ಭಾಷಿಕ ಅಥವಾ ಪ್ರಾದೇಶಿಕ ಗುಂಪುಗಳ ನಡುವಣ ಅಥವಾ ಜಾತಿ ಅಥವಾ ಕೋಮುಗಳ ನಡುವಣ ಸೌಹಾರ್ದಕ್ಕೆ ಭಾಧಕವಾಗುವ ಯಾವುದೇ ಕೃತ್ಯವನ್ನು ಮಾಡಿದರೆ ಮತ್ತು ಅದರಿಂದ ಸಾರ್ವಜನಿಕ ನೆಮ್ಮದಿಯನ್ನು ಕದಡಿದರೆ ಅಥವಾ ಕದಡುವ ಸಂಭವವಿದ್ದರೆ, ಅಂತಹ ವ್ಯಕ್ತಿಗಳಿಗೆ 3 ವರ್ಷಗಳ ಅವಧಿಯವರೆಗಿನ ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡರಿಂದಲೂ ಶಿಕ್ಷೆಗೊಳಿಸಲು ಅವಕಾಶವಿದೆ ಎಂದು ಐಜಿಪಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಸುಳ್ಳು ಸಂದೇಶಗಳನ್ನು ಬಿತ್ತರಿಸಿ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಕೆಲಸಗಳನ್ನು ಮಾಡಿದರೆ ಐಪಿಸಿ ಕಲಂ 153(ಎ) ಹಾಗೂ ಕಲಂ 66(ಎ) ಐ.ಟಿ. ಕಾಯ್ದೆಯ ಪ್ರಕಾರ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಐಜಿಪಿ ಎಚ್ಚರಿಸಿದ್ದಾರೆ.