ಮಂಗಳೂರು : ಬೋಟ್ ಮುಳುಗಡೆ - 6 ಮೀನುಗಾರರು ಪಾರು
ಮಂಗಳೂರು, ಫೆ.14: ಬಂದರ್ ದಕ್ಕೆಯಿಂದ ಮೀನುಗಾರಿಕೆಗೆ ತೆರಳಿದ್ದ ‘ಸೀ-ಪರ್ಲ್’ ಎಂಬ ಹೆಸರಿನ ಬೋಟ್ಗೆ ‘ಅಲ್-ರಮೀಝ್’ ಎಂಬ ಹೆಸರಿನ ಮತ್ತೊಂದು ಬೋಟ್ ಢಿಕ್ಕಿ ಹೊಡೆದ ಘಟನೆ ಮಂಗಳವಾರ ಮುಂಜಾನೆ ಮಲ್ಪೆಯಿಂದ ಸುಮಾರು 21 ನಾಟಿಕಲ್ ದೂರದಲ್ಲಿ ನಡೆದಿದೆ. ಇದರಿಂದ ‘ಸೀ-ಪರ್ಲ್’ ಬೋಟ್ಗೆ ಭಾಗಶ: ಹಾನಿಯಾಗಿದ್ದು, ಇದರಲ್ಲಿದ್ದ 6 ಮಂದಿ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿವರ: ಉಳ್ಳಾಲ ಅಕ್ಕರಕೆರೆಯ ರಿಯಾಝ್ ಅಹ್ಮದ್ ಎಂಬವರಿಗೆ ಸೇರಿದ ‘ಸೀ-ಪರ್ಲ್’ ಬೋಟ್ ಫೆ.10ರಂದು ಸಂಜೆ ಮೀನುಗಾರಿಕೆಗೆ ತೆರಳಿತ್ತು. ಮಂಗಳವಾರ ಮುಂಜಾನೆ ಸುಮಾರು 6 ಗಂಟೆಯ ವೇಳೆಗೆ ಈ ಬೋಟ್ಗೆ ‘ಅಲ್-ರಮೀಝ್’ ಬೋಟ್ ಢಿಕ್ಕಿ ಹೊಡೆದಿತ್ತು. ಇದರಿಂದ ‘ಸೀ-ಪರ್ಲ್’ ಬೋಟ್ಗೆ ಹಾನಿಯಾಗಿ ನೀರು ನುಗ್ಗಿತ್ತು. ಅಪಾಯದ ಮುನ್ಸೂಚನೆ ಅರಿತ ತಕ್ಷಣ ‘ಅಲ್- ರಮೀಝ್’ ಬೋಟ್ನವರು ‘ಸೀ-ಪರ್ಲ್’ನ ಬೋಟ್ನವರನ್ನು ರಕ್ಷಿಸಿದರು. ಅಲ್ಲದೆ ಸುಮಾರು 1 ಗಂಟೆಗಳ ಕಾಲ ‘ಸೀ-ಪರ್ಲ್’ ಬೋಟನ್ನು ಎಳೆದು ಸಮುದ್ರದ ದಡ ಸೇರಿಸಲು ಪ್ರಯತ್ನಿಸಿದರು. ಆದರೆ ರೋಪ್ ತುಂಡಾದ ಪರಿಣಾಮ ಬೋಟನ್ನು ಎಳೆದು ದಡ ಸೇರುವ ಪ್ರಯತ್ನ ಕೈಗೂಡಲಿಲ್ಲ ಎನ್ನಲಾಗಿದೆ.
‘ಸೀ-ಪರ್ಲ್’ ಬೋಟ್ನಲ್ಲಿದ್ದ ಶಿರೂರಿನ ಅನ್ಸಾರ್, ಮುಹಮ್ಮದ್ ಗೌಸ್, ಹುಸೈನ್, ಉಮರ್, ಮುಜೀಬ್ ಹಾಗು ಕುಮಟಾದ ಬುದ್ದಿವಂತ ಎಂಬವರು ಇದೀಗ ಸುರಕ್ಷಿತವಾಗಿ ಮಂಗಳೂರು ದಕ್ಕೆ ಸೇರಿದ್ದಾರೆ.
ಬೋಟ್ನಲ್ಲಿದ್ದ ಮೀನುಗಳು ಕೂಡ ಮತ್ತೆ ಸಮುದ್ರ ಪಾಲಾಗಿದೆ. ಈ ಘಟನೆಯಿಂದ ಸುಮಾರು 25 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಮುಂಜಾನೆ 6 ಗಂಟೆಯ ಹೊತ್ತಿಗೆ ನಾವು ಬಲೆ ಹಾಕಿ ಕಾಯುತ್ತಿದ್ದೆವು. ಅಷ್ಟರಲ್ಲಿ ‘ಅಲ್-ರಮೀಝ್’ ಬೋಟ್ ನಮ್ಮ ಬೋಟ್ಗೆ ಢಿಕ್ಕಿ ಹೊಡೆದಿದೆ. ಇದರಿಂದ ಬೋಟ್ ಒಡೆದು ನೀರು ಒಳಗೆ ನುಗ್ಗಿದೆ. ಹೆದರಿದ ನಾವು ಪ್ರಾಣ ರಕ್ಷಣೆಗಾಗಿ ಬೊಬ್ಬೆ ಹೊಡೆದೆವು. ತಕ್ಷಣ ನಮ್ಮನ್ನು ‘ಅಲ್-ರಮೀಝ್’ ಬೋಟ್ನವರು ರಕ್ಷಿಸಿದರು. ಐದು ನಿಮಿಷದೊಳಗೆ ನಾವಿದ್ದ ಬೋಟ್ ಭಾಗಶ: ಮುಳುಗಿತ್ತು ಎಂದು ಮುಹಮ್ಮದ್ ಗೌಸ್ ‘ವಾರ್ತಾಭಾರತಿ’ಗೆ ತಿಳಿಸಿದರು.
‘ನಾವು ಕಳೆದ 8 ವರ್ಷದಿಂದ ಬೋಟ್ನಲ್ಲಿ ಮೀನುಗಾರಿಕೆ ಮಾಡುತ್ತಿದ್ದೇವೆ. ಈ ಬೋಟ್ನಲ್ಲಿ 3 ವರ್ಷದಿಂದ ಕೆಲಸ ಮಾಡುತ್ತಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಇಂತಹ ದುರ್ಘಟನೆ ನಡೆದಿದೆ. ನಾವು ಎಚ್ಚರದಲ್ಲಿದ್ದ ಕಾರಣ ನಮ್ಮ ಬೋಟ್ ಮುಳುಗಡೆಯಾದರೂ ಢಿಕ್ಕಿ ಹೊಡೆದ ಬೋಟ್ಗೆ ಹತ್ತಿ ಪಾರಾಗಿ ಬಂದೆವು. ಒಂದು ವೇಳೆ ನಾವು ನಿದ್ದೆ ಮಾಡುತ್ತಿದ್ದರೆ ಜೀವಂತವಾಗಿ ಮರಳಿ ಬರುತ್ತಿರಲಿಲ್ಲವೋ ಏನೋ?’ ಎಂದು ಮುಹಮ್ಮದ್ ಗೌಸ್ ಆತಂಕ ವ್ಯಕ್ತಪಡಿಸಿದರು.