ಮೂಡುಬಿದಿರೆ: ಬಾನುಲಿ ರೈತ ದಿನಾಚರಣೆ

Update: 2017-02-15 18:26 GMT

ಮೂಡುಬಿದಿರೆ, ಫೆ.15: ಕೃಷಿ ಹಾಗೂ ಜ್ಞ್ಞಾನ ನೀಡುವಂತಹ ಮಾಹಿತಿಯುಕ್ತ ವಿಚಾರಗಳನ್ನು ರೈತರು ಮತ್ತು ಜನರಿಗೆ ತಿಳಿಸುವ ಮೂಲಕ ಕೃಷಿಯ ಬೆಳವಣಿಗೆಯಲ್ಲಿ ಆಕಾಶವಾಣಿ ಮಾಧ್ಯಮವು ಪ್ರಮುಖ ಪಾತ್ರವನ್ನು ನಿರ್ವಹಿಸಿದೆ. ಈ ದೇಶ ಹಾಗೂ ಜಗತ್ತು ಬದಲಾವಣೆಯತ್ತ ಸಾಗುತ್ತಿದ್ದು, ಈ ನಿಟ್ಟಿನಲ್ಲಿ ಕೃಷಿಕರು ಕೃಷಿಯಲ್ಲಿ ಆಧುನಿಕತೆಯನ್ನು ಬಳಸಿಕೊಳ್ಳಬೇಕು ಮತ್ತು ತಮ್ಮ ಜ್ಞ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಎಂಸಿಎಸ್ ಬ್ಯಾಂಕ್‌ನ ನಿರ್ದೇಶಕ, ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್ ಹೇಳಿದರು. ಅವರು ಆಕಾಶವಾಣಿ ಮಂಗಳೂರು, ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಹಾಗೂ ಎಂಸಿಎಸ್ ಬ್ಯಾಂಕ್ ಸಹಭಾಗಿತ್ವದಲ್ಲಿ ಬ್ಯಾಂಕ್‌ನ ಕಲ್ಪವೃಕ್ಷ ಸಭಾಂಗಣದಲ್ಲಿ ಬುಧವಾರ ನಡೆದ ಬಾನುಲಿ ರೈತ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. 

ಆಕಾಶವಾಣಿ ಮಂಗಳೂರು ಕೇಂದ್ರದ ಸಹಾಯಕ ನಿರ್ದೇಶಕಿ(ಕಾರ್ಯಕ್ರಮ) ಎಸ್. ಉಷಾಲತಾ ಅಧ್ಯಕ್ಷತೆಯನ್ನು ವಹಿಸಿದ್ದರು.

ದ.ಕ. ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಡಾ. ಎಚ್. ಕೆಂಪೇಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕೃಷಿಕರು ತಮ್ಮ ಕೃಷಿ ಭೂಮಿಯ ಮಣ್ಣನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು, ಉತ್ಪಾದನಾ ವೆಚ್ಚದಲ್ಲಿ ಹಿಡಿತ, ಯಂತ್ರಗಳ ಉಪಯೋಗ, ಮಳೆಯ ಸದ್ಬಳಕೆಯನ್ನು ಸರಿಯಾದ ರೀತಿಯಲ್ಲಿ ಮಾಡಿದಾಗ ಕೃಷಿಕರ ಅಭಿವೃದ್ಧಿ ಸಾಧ್ಯ. ಕೃಷಿಕರು ತಮ್ಮ ಪರಿಶ್ರಮದ ಮೂಲಕ ಪರಿಹಾರಗಳನ್ನು ಹುಡುಕಿಕೊಳ್ಳಬೇಕು. ಹೊಸಹೊಸ ಆವಿಷ್ಕಾರಗಳಿಗೆ ತೆರೆದುಕೊಳ್ಳಬೇಕು. ಆ ಮೂಲಕ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಈ ಸಂದರ್ಭ ಕೃಷಿಕ ಕೊರ್ಡೇಲು ಜಯಚಂದ್ರ ರಾವ್ ದಂಪತಿಯನ್ನು ಸನ್ಮಾನಿಸಲಾಯಿತು. ಮೂಡುಬಿದಿರೆ ಕೃಷಿವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ, ಆಕಾಶವಾಣಿಯ ಉಪನಿರ್ದೇಶಕ ಜಿ.ರಮೇಶ್‌ಚಂದ್ರನ್ ಉಪಸ್ಥಿತರಿದ್ದರು.

ಸುಭಾಶ್ಚಂದ್ರ ಚೌಟ ಸ್ವಾಗತಿಸಿದರು. ಕಾರ್ಯಕ್ರಮದ ಸಮನ್ವಯಾಕಾರಿ ಸದಾನಂದ ಹೊಳ್ಳ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಕೃಷಿ ವಿಚಾರ ವಿನಿಮಯ ಕೇಂದ್ರದ ಕಾರ್ಯದರ್ಶಿ ಜಿನೇಂದ್ರ ಸನ್ಮಾನಿತರ ಪತ್ರ ವಾಚಿಸಿದರು. ಎಂಸಿಎಸ್ ಬ್ಯಾಂಕ್‌ನ ಕಾರ್ಯನಿರ್ವಹಣಾಕಾರಿ ಚಂದ್ರಶೇಖರ ಮತ್ತು ಕೃಷಿ ವಿಚಾರ ವಿನಿಮಯ ಕೇಂದ್ರದ ಕೋಶಾಕಾರಿ ಆಲ್ವೀನ್ ಮಿನೇಜಸ್, ಸುಜಾತ ರಮೇಶ್ ಸಹಕರಿಸಿದರು. ಟಿ.ಎಸ್.ಪ್ರಸಾದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಭಾಕಾರ್ಯಕ್ರಮದ ನಂತರ ನಡೆದ ವಿಚಾರ ಸಂಕಿರಣದ ಮೊದಲ ಗೋಷ್ಠಿ ಕೃಷಿ ಉತ್ಪಾದನೆ ದ್ವಿಗುಣಗೊಳಿಸುವ ತಂತ್ರಜ್ಞಾನದಲ್ಲಿ ತರಕಾರಿ ಬೆಳೆ ಉತ್ಪಾದನಾ ತಂತ್ರಜ್ಞಾನದ ಬಗ್ಗೆ ಡಾ.ಬಿ. ಧನಂಜಯ, ಕಾಳು ಮೆಣಸು ಕೃಷಿ ತಂತ್ರಜ್ಞಾನದ ಬಗ್ಗೆ ಡಾ. ಎಚ್.ಎಸ್. ಚೈತನ್ಯ, ಹಣ್ಣುಗಳ ಸಂಸ್ಕರಣೆ ಮತ್ತು ವೌಲ್ಯ ವರ್ಧನೆಯ ಬಗ್ಗೆ ಶ್ಯಾಮಲಾ ಶಾಸಿ ಮಾತನಾಡಿದರು.

2ನೆ ಗೋಷ್ಠಿಯಲ್ಲಿ ಉಡುಪಿಯ ಕುದಿ ಶ್ರೀನಿವಾಸ ಭಟ್ ಕೋಳಿ ಸಾಕಾಣೆಯ ಬಗ್ಗೆ, ಮಾಣಿಲ ಬೈಕುಂಜದ ರಾಜೇಶ್ ಶಂಕರ್ ಕೊಕ್ಕೊ ಕೃಷಿಯ ಬಗ್ಗೆ, ಪುತ್ತೂರು ಗಣೇಶ್ ನಿಡ್ವಣ್ಣಾಯ ಭತ್ತದ ಕೃಷಿಯ ಬಗ್ಗೆ ಅನಿಸಿಕೆ ಹಂಚಿಕೊಂಡರು.

3ನೆ ಗೋಷ್ಠಿಯಲ್ಲಿ ಮೂಡುಬಿದಿರೆ ತಾಕೋಡೆಯ ಎಡ್ವರ್ಡ್ ರೆಬೆಲ್ಲೋ, ಕಾರ್ಕಳ ಕಾಡುಹೊಳೆಯ ರತ್ನಾಕರ ಪೈ ಹಾಗೂ ಪುತ್ತೂರು ಈಶ್ವರ ಮಂಗಲದ ಪೂರ್ಣಾತ್ಮರಾವ್ ರೇಡಿಯೊ ಕೃಷಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News