ಸೌಜನ್ಯಳ ಮಾವ ವಿಠಲ ಗೌಡರ ತನಿಖೆಗೊಳಪಡಿಸಿ: ಶಂಕಿತ ಆರೋಪಿಗಳ ಆಗ್ರಹ
ಮಂಗಳೂರು, ಫೆ.16: ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಹತ್ಯೆಯ ಸತ್ಯಾಂಶ ಹೊರ ಬೀಳಬೇಕಾದರೆ ಆಕೆಯ ಮಾವ ವಿಠಲ ಗೌಡರನ್ನು ತನಿಖೆಗೊಳಪಡಿಸಬೇಕು ಎಂದು ಶಂಕಿತ ಆರೋಪಿಗಳನ್ನೆಲಾದ ಮಲ್ಲಿಕ್ ಜೈನ್, ಉದಯ್ ಜೈನ್. ಧೀರಜ್ ಕೆಲ್ಲ ಆಗ್ರಹಪಡಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈ ಮೂವರು, ಸೌಜನ್ಯಾಳ ಹತ್ಯೆಗೆ ಸಂಬಂಧಿಸಿ ಪೊಲೀಸ್ ಇಲಾಖೆಯಲ್ಲಿ ನಮ್ಮ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಕೊಲೆ ನಡೆದ ಒಂದು ವರ್ಷದ ಬಳಿಕ ನಮ್ಮ ಮೇಲೆ ಕೆಲವು ವ್ಯಕ್ತಿಗಳು ಮತ್ತು ಸಂಘಟನೆಯವರು ಆರೋಪ ಹೊರಿಸಿದ್ದಾರೆ. ಆ ಹಿನ್ನೆಲೆಯಲ್ಲಿ ನಾವು 2014ರಲ್ಲೇ ‘ಕಾನೂತ್ತೂರು ದೇವಾಲಯ’ಕ್ಕೆ ದೂರು ನೀಡಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೆ ನಮ್ಮನ್ನು ಬೆಳ್ತಂಗಡಿ ಮತ್ತು ಬೆಂಗಳೂರಿನಲ್ಲಿ ಸಿಒಡಿ ಪೊಲೀಸರು ತನಿಖೆ ನಡೆಸಿದ್ದಾರೆ. ನಮ್ಮ ಮೊಬೈಲ್ ಲೋಕೇಶನ್ ಪತ್ತೆ ಹಚ್ಚಿದ್ದಾರೆ. ಯಾರ ಜೊತೆ ಸಂಪರ್ಕದಲ್ಲಿದ್ದೆವು ಎಂಬುದನ್ನು ಪರಿಶೀಲಿಸಿದ್ದಾರೆ. ಆ ಬಳಿಕ ಸಿಐಡಿ ಪೊಲೀಸರೂ ತನಿಖೆ ನಡೆಸಿದ್ದಾರೆ. ನಮ್ಮ ರಕ್ತ ಪರೀಕ್ಷೆ ನಡೆಸಲಾಗಿದೆ, ಡಿಎನ್ಎ ಮತ್ತು ಮಂಪರು ಪರೀಕ್ಷೆಯನ್ನೂ ಮಾಡಲಾಗಿದೆ. ಎಲ್ಲದಕ್ಕೂ ನಾವು ಸಹಕಾರ ನೀಡಿದ್ದೇವೆ. ಮುಂದೆಯೂ ನೀಡುತ್ತೇವೆ. ಒಟ್ಟಿನಲ್ಲಿ ನಮ್ಮ ಮೇಲಿನ ಕಳಂಕ ತಪ್ಪಬೇಕು ಮತ್ತು ತಪ್ಪಿತಸ್ಥ ಯಾರು ಎಂಬುದು ಬಹಿರಂಗಗೊಳ್ಳಬೇಕು ಎಂದರು.
ಸೌಜನ್ಯಾಳ ಹೆತ್ತವರ ಪರವಾಗಿ ಮೊನ್ನೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ನೀಡಿದ ಹೇಳಿಕೆಯು ಸಿಬಿಐನ ಮುಂದುವರಿದ ತನಿಖೆಯ ದಾರಿ ತಪ್ಪಿಸುವಂತಾಗಿದೆ. ಹಾಗಾಗಿ ಸೌಜನ್ಯಾಳ ಮಾವ ವಿಠಲ ಗೌಡರನ್ನು ತನಿಖೆಗೊಳಪಡಿಸಬೇಕು. ಅವರ ಮಂಪರು ಪರೀಕ್ಷೆಯನ್ನೂ ಮಾಡಿಸಬೇಕು ಎಂದು ಮಲ್ಲಿಕ್ ಜೈನ್, ಉದಯ್ ಜೈನ್, ಧೀರಜ್ ಕೆಲ್ಲ ಹೇಳಿದರು.
ಪ್ರತಿದಿನ ನಾನು ಸೌಜನ್ಯಾಳಿಗೆ ಹೊಟೇಲ್ನಲ್ಲಿ ತಿಂಡಿಕೊಟ್ಟು ಮನೆಗೆ ನನ್ನ ವಾಹನದಲ್ಲೇ ಬಿಟ್ಟು ಬರುತ್ತಿದ್ದೆ. ನಾಪತ್ತೆಯಾದ ದಿನ ಆಕೆ ಒಬ್ಬಳೆ ಮನೆಗೆ ಹೋಗಿದ್ದಾಳೆ ಎಂದು ವಿಠಲ ಗೌಡ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು. ಅಂದು ಮಳೆ ಸುರಿದಿದ್ದರೂ ವಿಠಲ ಗೌಡ ಯಾಕೆ ಸೌಜನ್ಯಾಳನ್ನು ತನ್ನ ವಾಹನದಲ್ಲಿ ಮನೆಗೆ ಬಿಡಲಿಲ್ಲ. ಆಕೆಗೆ 6 ಗಂಟೆಗೆ ತಿಂಡಿಕೊಟ್ಟವರು ಯಾರು? ನಾವು ಹತ್ಯೆ ಮಾಡಿದವರರಾದರೆ ನಮ್ಮ ಕೈಯಿಂದ ಆಕೆ ತಿಂಡಿ ತೆಗೆದುಕೊಳ್ಳಲು ಸಾಧ್ಯವೇ? ಹಾಗಾಗಿ ವಿಠಲ ಗೌಡರನ್ನು ತನಿಖೆ ನಡೆಸಲೇಬೇಕು ಎಂದು ಮಲ್ಲಿಕ್ ಜೈನ್, ಉದಯ್ ಜೈನ್. ಧೀರಜ್ ಕೆಲ್ಲ ಒತ್ತಾಯಿಸಿದರು.