ಹಿರಿಯಡ್ಕ ವೀರಭದ್ರ ದೇವಸ್ಥಾನ ಜೀಣೋದ್ಧಾರಕ್ಕೆ ನೆರವು:ಪ್ರಮೋದ್
ಉಡುಪಿ, ಫೆ.16: ಹಿರಿಯಡ್ಕ ಶ್ರೀ ವೀರಭದ್ರ ದೇವಸ್ಥಾನದ ಜೀರ್ಣೋದ್ದಾರಕ್ಕೆ ಸರಕಾರದಿಂದ ಗರಿಷ್ಠ ಆರ್ಥಿಕ ನೆರವು ದೊರಕಿಸಿ ಕೊಡಲು ಪ್ರಯತ್ನಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಗುರುವಾರ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿಯನ್ನು ವೀಕ್ಷಿಸಿ ಅವರು ಮಾತನಾಡಿ, ಭಕ್ತಾದಿಗಳ ಕಲ್ಪನೆಯಂತೆ ದೇವಸ್ಥಾನವನ್ನು ಜೀಣೋದ್ಧಾರಗೊಳಿಸಲಾಗುತ್ತಿದ್ದು, ಸರಕಾರದಿಂದ ಆರ್ಥಿಕ ನೆರವು ದೊರಕಿಸುವ ಕುರಿತಂತೆ ಶಾಸಕರಾದ ವಿನಯ ಕುಮಾರ್ ಸೊರಕೆ ಅವರ ಜೊತೆ ಚರ್ಚಿಸಿ ಗರಿಷ್ಠ ನೆರವು ದೊರಕಿಸಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ, ಹಿರಿಯಡ್ಕ ಗ್ರಾಪಂ ಅಧ್ಯಕ್ಷೆ ಮಾಲತಿ ಆಚಾರ್ಯ, ಜಿಪಂ ಸದಸ್ಯೆ ಚಂದ್ರಿಕಾ, ನಗರಸಭೆ ಸದಸ್ಯ ರಮೇಶ್ ಕಾಂಚನ್, ಸ್ಥಳೀಯ ಗ್ರಾಪಂ ಮತ್ತು ತಾಪಂ ಜನಪ್ರತಿನಿಧಿಗಳು, ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಗೋವರ್ಧನ್ ದಾಸ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.