ಜಿಡಿಪಿ ಕುಸಿದಿದ್ದರೂ ಮತ್ತೆ ಪುಟಿದೇಳಲಿದೆ: ಆರ್ಬಿಐ ಗವರ್ನರ್ ವಿಶ್ವಾಸ
ಹೊಸದಿಲ್ಲಿ,ಫೆ.17: ಹಳೆಯ 500 ಮತ್ತು 1000 ರೂ.ನೋಟುಗಳ ರದ್ದತಿಯ ಬಳಿಕ ಭಾರತದ ಆರ್ಥಿಕ ಬೆಳವಣಿಗೆಯು ತೀವ್ರ ಚೇತರಿಕೆಯನ್ನು ಕಾಣಲಿದೆ ಎಂದು ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತಕ್ಕೆ ಮುಕ್ತ ವ್ಯಾಪಾರದಿಂದ ಲಾಭವಾಗಿರುವುದರಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದಡಿ ಸ್ವಹಿತ ಸಂರಕ್ಷಣಾವಾದಕ್ಕೆ ಹೆಚ್ಚಿನ ಒತ್ತು ಇದ್ದರೂ ಜಾಗತೀಕರಣದ ಜೊತೆಗೆ ಮುಂದುವರಿಯುವುದನ್ನು ಅವರು ಬಲವಾಗಿ ಪ್ರತಿಪಾದಿಸಿದರು.
ಸಿಎನ್ಬಿಸಿ-ಟಿವಿ 18ಕ್ಕೆ ನೀಡಿದ ಸಂದರ್ಶನದಲ್ಲಿ ಪಟೇಲ್ ಅವರು, ಅಲ್ಪ ಅವಧಿಗೆ ನಮ್ಮ ಜಿಡಿಪಿಯು ಕುಸಿದಿದ್ದರೂ ಅದು ಉತ್ತಮ ಚೇತರಿಕೆಯನ್ನು ಕಾಣಲಿದೆ ಎಂದು ಹೆಚ್ಚುಕಡಿಮೆ ಪ್ರತಿಯೊಬ್ಬರೂ ಒಪ್ಪುತ್ತಿದ್ದಾರೆ. ನೋಟು ರದ್ದತಿ ಪ್ರಕ್ರಿಯೆ ಅತ್ಯಂತ ತ್ವರಿತವಾಗಿ ನಡೆದಿದ್ದರೂ, ಅದು ಯೋಜನೆಯ ಭಾಗವಾಗಿತ್ತು ಎಂದರು.
ಭಾರತವು ಶೇ.9ರ ಬೆಳವಣಿಗೆ ದರವನ್ನು ಯಾವಾಗ ಸಾಧಿಸಲಿದೆ ಎಂಬ ಪ್ರಶ್ನೆಗೆ, ಸುಸ್ಥಿರ ಬೆಳವಣಿಗೆ ದರಗಳ ಬಗ್ಗೆ ಭವಿಷ್ಯ ನುಡಿಯುವುದು ಕಠಿಣ ಎಂದು ಅವರು ಉತ್ತರಿಸಿದರು.