ಉಡುಪಿ: ಗಿರೀಶ್ ಕಾಸರವಳ್ಳಿಗೆ "ಬಿಂದುಶ್ರೀ" ಪ್ರಶಸ್ತಿ
ಉಡುಪಿ, ಜ.17: ಬೈಂದೂರಿನ ಸಾಂಸ್ಕೃತಿಕ ಸಂಘಟನೆ ಸುರಭಿ ಜೈಸಿರಿ ತನ್ನ 17ನೇ ವರ್ಷದ ಸಂಭ್ರಮದೊಂದಿಗೆ ಫೆ.25ರಿಂದ 27ರವರೆಗೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಸುರಭಿ ಜೈಸಿರಿ ಹಾಗೂ ಬಿಂದುಶ್ರೀ ಪ್ರಶಸ್ತಿ ಸಮಾರಂಭ ವನ್ನು ಆಯೋಜಿಸಿದೆ ಎಂದು ಸಂಸ್ಥೆಯ ನಿರ್ದೇಶಕ ಸುಧಾಕರ ಪಿ.ಬೈಂದೂರು ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.25ರಂದು ಸಂಜೆ 6:30ಕ್ಕೆ ಲೇಖಕಿ ಹಾಗೂ ಕಿರುತೆರೆ ಕಲಾವಿದೆ ಬೆಂಗಳೂರಿನ ದೀಪಾ ರವಿಶಂಕರ್ ಅವರು ಸುರಭಿ ಜೈಸಿರಿಗೆ ಚಾಲನೆ ನೀಡಲಿದ್ದಾರೆ. ಹಾಸನದ ಸಾಹಿತಿ ಜಯಶಂಕರ್ ಬೆಳಗುಂಬ ಮುಖ್ಯ ಅತಿಥಿಯಾಗಿರುವರು. ಕರ್ನಾಟಕ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಕೊಳಲು ವಾದಕ ಭುಜಂಗ ಕೊರಗ ಮರವಂತೆ ಅವರನ್ನು ಸನ್ಮಾನಿಸಲಾಗುವುದು. ಅಂದು ರಂಗಸುರಭಿ ಕಲಾವಿದರಿಂದ ಱನಮ್ಮ ನಿಮ್ಮಾಳಗೊಬ್ಬೞನಾಟಕ ಪ್ರದರ್ಶನವಿದೆ ಎಂದರು.
ಫೆ.26ರಂದು ಚಿತ್ರ ಕಲಾವಿದ ಮಂಜುನಾಥ ಮಯ್ಯ ಉಪ್ಪುಂದರನ್ನು ಸನ್ಮಾನಿಸಲಾಗುವುದು. ಅಂದು ನಾಟ್ಯ ಸುರಭಿ ಕಲಾವಿದರಿಂದ ವಿದ್ವಾನ್ ಚಂದ್ರಶೇಖರ ನಾವಡ ನಿರ್ದೇಶನದಲ್ಲಿ ಱನೃತ್ಯಾಂಕುರೞನೃತ್ಯ ಸಂಜೆ ಹಾಗೂ ನೃತ್ಯ ರೂಪಕ ನಡೆಯಲಿದೆ.
ಫೆ.28ರ ಮಂಗಳವಾರ ಸಂಜೆ ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ 2017ನೇ ಸಾಲಿನ ಱಬಿಂದುಶ್ರೀೞ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯೊಂದಿಗೆ ಚಿನ್ನದ ಪದಕ, 10,000ರೂ.ನಗದು ಹಾಗೂ ಸ್ಮರಣಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಪ್ರದಾನ ಮಾಡುವರು. ಶಾಸಕ ಹಾಗೂ ಕೆಎಸ್ಸಾರ್ಟಿಸಿ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸುವರು ಎಂದರು.
ಬಿಂದುಶ್ರೀ ಪ್ರಶಸ್ತಿಯನ್ನು ಸಂಸ್ಥೆ ಕಳೆದ ಮೂರು ವರ್ಷಗಳಿಂದ ನೀಡುತಿದ್ದು, ಇದುವರೆಗೆ ಚುಟುಕು ಕವಿ ದುಂಡಿರಾಜ್, ಸಾಹಿತಿ ಜಯಂತ ಕಾಯ್ಕಿಣಿ ಹಾಗೂ ವಿಮರ್ಶಕ ಈಶ್ವರಯ್ಯ ಅವರಿಗೆ ನೀಡಲಾಗಿದೆ. ಸುರಭಿ ಜೈಸಿರಿ ಕಳೆದ 17 ವರ್ಷಗಳಿಂದ ಪರಿಸರದ ವಿದ್ಯಾರ್ಥಿಗಳಿಗೆ ನೃತ್ಯ, ಸಂಗೀತ, ನಾಟಕ, ಯಕ್ಷಗಾನ, ಚಿತ್ರಕಲೆ, ಜಾದೂ, ತಬಲಾ ಮುಂತಾದ ಸೃಜನಶೀಲ ಕಲೆಗಳ ತರಬೇತಿಯನ್ನು ಅನುಭವಿ ಗುರುಗಳ ಮೂಲಕ ನೀಡುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಗಣಪತಿ ಹೋಬಳಿದಾರ ತೆಗ್ಗರ್ಸೆ, ಅಧ್ಯಕ್ಷ ಶಿವರಾಮ ಕೊಠಾರಿ ಯಡ್ತರೆ, ಮಂಜುನಾಥ ನಾಯ್ಕ ಶಿರೂರು, ಸುನಿಲ್ ಬೈಂದೂರು ಉಪಸ್ಥಿತರಿದ್ದರು.