ಕಮರಿದ ಬದುಕಿಗೆ ಕವಿತೆಯೇ ಸಾಂತ್ವನ : ಪ್ರೊ. ಟಿ. ಎಲ್ಲಪ್ಪ
ಮೂಡುಬಿದಿರೆ, ಫೆ.19: ಸಾಹಿತ್ಯಕ್ಕೆ ಜಾತಿ, ಮತ, ಅಂತಸ್ತುಗಳನ್ನು ಮೀರಿ ನಿಲ್ಲುವ ಸಾಮರ್ಥ್ಯವಿದೆ. ಈ ಕಾರಣದಿಂದಾಗಿಯೇ ಜೀತದ ಸುಳಿಯಲ್ಲಿ ಕಮರಿದ್ದ ನನ್ನ ಬದುಕನ್ನು ಶಕ್ತಿಯುತ ಸಂವಹನ ಸಾಮರ್ಥ್ಯವಿರುವ ಕವಿತೆ ಈ ಎತ್ತರಕ್ಕೆ ತಂದು ನಿಲ್ಲಿಸಿದೆಎಂದು ಕವಿ ಪ್ರೊ. ಟಿ. ಎಲ್ಲಪ್ಪ ಹೇಳಿದರು.
ಕಾಂತಾವರ ಕನ್ನಡ ಸಂಘದ ವತಿಯಿಂದ ರವಿವಾರ ಕನ್ನಡ ಭವನದಲ್ಲಿ ನಡೆದ ಮುದ್ದಣ ಸಾಹಿತ್ಯೋತ್ಸವ 20017, ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ, ಪುಸ್ತಕಗಳ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ತಮ್ಮ 'ಕಣ್ಣ ಪಾಪೆಯ ಬೆಳಕು' ಹಸ್ತಪ್ರತಿಗೆ 2016ನೇ ಸಾಲಿನ 42ನೆಯ ಮುದ್ದಣ ಕಾವ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಅದಾನಿ ಉಡುಪಿ ಪವರ್ ಕಾರ್ಪೊರೇಶನ್ ಲಿ.ನ ಉಪಾಧ್ಯಕ್ಷ ಕಿಶೋರ್ ಆಳ್ವ ಕಾರ್ಯಕ್ರಮ ಉದ್ಘಾಟಿಸಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ನ ಅಧ್ಯಕ್ಷ ಕೆ.ಎಂ. ಉಡುಪ ಅಧ್ಯಕ್ಷತೆ ವಹಿಸಿದ್ದರು.
ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಹದಿನಾಲ್ಕು ಕೃತಿಗಳು ಲೋಕಾರ್ಪಣೆಗೊಂಡವು. ಗ್ರಂಥಮಾಲೆಯ ಸಂಪಾದಕ ಡಾ. ಬಿ. ಜನಾರ್ಧನ ಭಟ್, ನುಡಿಹಾರದ ಸಂಪಾದಕ ಡಾ. ಎಸ್.ಆರ್.ಅರುಣಕುಮಾರ್ ವಿವರ ನೀಡಿದರು.
ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿದರು. ಬಾಬು ಶೆಟ್ಟಿ ನಾರಾವಿ, ವಿಠಲ ಬೇಲಾಡಿ ಕಾರ್ಯಕ್ರಮ ನಿರ್ವಹಿಸಿದರು.