ಶಿವಾಜಿಯಿಂದ ಸಮಾಜ ಕಲಿಯುವುದು ಬಹಳಷ್ಟಿದೆ: ರಘುನಂದನ್ ಮೂರ್ತಿ

Update: 2017-02-19 14:03 GMT

ಪುತ್ತೂರು, ಫೆ.19: ತನ್ನ ಶಕ್ತಿ ಸಾಮಾರ್ಥ್ಯ ಉಪಯೋಗಿಸಿ ಭಾರತವನ್ನು ಉಳಿಸಲು ಹೋರಾಟ ಮಾಡಿರುವ ವೀರ ಛತ್ರಪತಿ ಶಿವಾಜಿಯಾಗಿದ್ದು, ಆ ಕಾಲದಲ್ಲಿ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದ ಪರಕೀಯರ ವಿರುದ್ಧ ಹೋರಾಟ ಮಾಡುವುದರೊಂದಿಗೆ ಹಿಂದೂ, ಮಸಲ್ಮಾನರನ್ನು ಒಂದಾಗಿ ಕಂಡ ಮಹಾನ್ ವ್ಯಕ್ತಿ. ಆತನನಿಂದ ಸಮಾಜ ಕಲಿಯುವುದು ಬಹಳಷ್ಟಿದೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ರಘುನಂದನ್ ಮೂರ್ತಿ ಅವರು ಹೇಳಿದರು.

ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮರಾಠಿ ಸಮಾಜ ಸೇವಾ ಸಂಘದ ಸಹಭಾಗಿತ್ವದಲ್ಲಿ ರವಿವಾರ ತಾಪಂ ಸಭಾಂಗಣದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಆಚರಣೆಯನ್ನು ಶಿವಾಜಿ ಭಾವ ಚಿತ್ರದ ಎದುರು ದೀಪ ಪ್ರಜ್ವಲನೆ ಮಾಡಿ, ಪುಷ್ಪಾರ್ಚನೆ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ತಾ.ಪಂ ಉಪಾಧ್ಯಕ್ಷೆ ರಾಜೇಶ್ವರಿ ಮಾತನಾಡಿ, ಶಿವಾಜಿ ತನ್ನ ಆಡಳಿತದಲ್ಲಿ ಎಲ್ಲಾ ಧರ್ಮದವರನ್ನು ಸಮಾನವಾಗಿ ನೋಡುತ್ತಿದ್ದ. ಇಂತಹ ಸಂದರ್ಭದಲ್ಲಿ ಆತನ ಆಡಳಿತವನ್ನು ನೋಡಿ ನಮ್ಮಲ್ಲಿನ ಘರ್ಷಣೆ, ಕೋಮು ದ್ವೇಷ ಭಾವನೆ ಬಿಡಬೇಕು. ಎಲ್ಲರೂ ಸ್ವಚ್ಛ ಮನಸ್ಸಿನಿಂದ ಇರಬೇಕು ಎಂದರು.

ಪ್ರಮುಖ ಉಪನ್ಯಾಸ ನೀಡಿದ ಕುಂಬ್ರ ಪ.ಪೂ ಕಾಲೇಜಿನ ಪ್ರಾಂಶುಪಾಲ ಎನ್.ದುಗ್ಗಪ್ಪ ಮಾತನಾಡಿ, ರಾಮಾಯಣದಲ್ಲಿ ಶ್ರೀರಾಮ, ಮಹಾಭಾರತದಲ್ಲಿ ಧರ್ಮರಾಯ, ಶ್ರೀಕೃಷ್ಣ ಪುರಾಣದಲ್ಲಿ ಪ್ರಸಿದ್ಧಿ ಪಡೆದಿದ್ದರೆ. ಇತಿಹಾಸ ಪುಟದಲ್ಲಿ ಭಾರತ ಪರಕೀಯರ ಆಳ್ವಿಕೆಗೆ ಒಳಪಟ್ಟು ಹಿಂದೂ ಸಾಮ್ರಾಜ್ಯ ನಶಿಸುವ ಸಂದರ್ಭದಲ್ಲಿ ಮತ್ತೊಮ್ಮೆ ಹಿಂದೂ ಸಾಮ್ರಾಜ್ಯದ ಕನಸು ಕಂಡ ಮತ್ತು ಅದನ್ನು ಕೇವಲ 50 ವರ್ಷಗಳಲ್ಲಿ ಸಾಧಿಸಿದ ಅಪ್ರತಿಮ ವೀರ ಛತ್ರಪತಿ ಶಿವಾಜಿ ಮಹಾರಾಜ್ ಎಂದರು.

ಆತನಲ್ಲಿ ಸ್ವಾಭಿಮಾನದ ಮನೋಸ್ಥೈರ್ಯವಿತ್ತು. ನ್ಯಾಯಪರ, ಪ್ರಾಮಾಣಿಕತೆ, ಸ್ತ್ರೀಯರ ಕುರಿತು ಗೌರವ ಸೇರಿದಂತೆ ಎಲ್ಲಾ ತರದ ಅರ್ಹತೆ ಪಡೆದ ಯೋಗ್ಯ ರಾಜ ಎಂದು ಹೆಸರು ಪಡೆದಿದ್ದ. ಈತನ ಕಾಲದಲ್ಲಿ ಹಿಂದೂ ದೇವಸ್ಥಾನ, ಮಸೀದಿಗಳಿಗೆ ಪ್ರಾಧಾನ್ಯತೆ ಕೊಡುವ ಮೂಲಕ ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದರು ಎಂದು ಹೇಳಿದರು.

ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಮತ್ತು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಸಮಯೋಚಿತವಾಗಿ ಮಾತನಾಡಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್, ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಾರಾಡಿ ವಸತಿ ನಿಲಯದ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಉಪತಹಶೀಲ್ದಾರ್ ಶ್ರೀಧರ್ ಕೆ. ಸ್ವಾಗತಿಸಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಾರ್ಯದರ್ಶಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News