ಮಂಗಳೂರು: ಬೊಂಡಾಲ ಪ್ರಶಸ್ತಿ ಪ್ರದಾನ
ಮಂಗಳೂರು, ಫೆ.21: ಯಕ್ಷಗಾನ ಕರಾವಳಿಯ ಮಹತ್ವಪೂರ್ಣ ಕಲೆ. ಜಗತ್ತಿನಾದ್ಯಂತ ಇದರ ಅಭಿಮಾನಿಗಳಿದ್ದಾರೆ. ಇದರಿಂದಾಗಿ ಕಲಾವಿದರಿಗೂ ಒಂದು ನಿರ್ದಿಷ್ಟ ನೆಲೆ-ಬೆಲೆ ಸಿಕ್ಕಿದಂತಾಗಿದೆ. ಹಿಂದಿನ ಕಷ್ಟದ ದಿನಗಳು ಮಾಯವಾಗಿವೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಶಂಭೂರು ಗ್ರಾಮದ ಬೊಂಡಾಲದಲ್ಲಿ ಇತ್ತೀಚೆಗೆ ಜರಗಿದ ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ದಿ. ಬೊಂಡಾಲ ರಾಮಣ್ಣ ಶೆಟ್ಟಿ ಸಂಸ್ಮರಣಾ ಸಮಾರಂಭದಲ್ಲಿ 'ಬೊಂಡಾಲ ಪ್ರಶಸ್ತಿ ಪ್ರದಾನ' ಮಾಡಿ ಅವರು ಮಾತನಾಡಿದರು.
ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡಿದರು.
ಈ ಸಂದರ್ಭ ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಕಟೀಲು ಮೇಳದ ಭಾಗವತ ಪದ್ಯಾಣ ಗೋವಿಂದ ಭಟ್ ಮತ್ತು ಪ್ರಸಾಧನ ಕಲಾವಿದ ಮೋನಪ್ಪಗೌಡ ಕಿನ್ನಿಕೊಡಂಗೆ ಅವರಿಗೆ 2016-17 ನೇ ಸಾಲಿನ 'ಬೊಂಡಾಲ ಪ್ರಶಸ್ತಿ' ನೀಡಿ ಸನ್ಮಾನಿಸಲಾಯಿತು. ನಿವೃತ್ತ ಅಬಕಾರಿ ಇನ್ಸ್ಪೆಕ್ಟರ್ ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು.
ದಿ. ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ಅವರ ಪುತ್ರ ದಿ. ಬೊಂಡಾಲ ರಾಮಣ್ಣ ಶೆಟ್ಟಿಯ ಸಾಧನೆಯನ್ನು ಸ್ಮರಿಸಿ ಪೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣಾ ಭಾಷಣ ಮಾಡಿದರು.
ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ ಶೆಟ್ಟಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್ ಪಂಜಿಕಲ್ಲು, ಜಿಪಂ ಸದಸ್ಯ ತುಂಬೆ ಚಂದ್ರ ಪ್ರಕಾಶ್ ಶೆಟ್ಟಿ ಮತ್ತು ಹಿರಿಯ ಅರ್ಥಧಾರಿ ರಾಯಸ ಶೀನಿವಾಸ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.
ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿದರು. ಸಂಸ್ಮರಣಾ ಸಮಿತಿಯ ಗೌರವಾಧ್ಯಕ್ಷ ಬೊಂಡಾಲ ಸೀತಾರಾಮ ಶೆಟ್ಟಿ ವಂದಿಸಿದರು.