ಸೃಜನಶೀಲತೆಯ ಬೆಳವಣಿಗೆಗೆ ನಾಟಕಗಳು ಪೂರಕ: ಮುಸ್ತಫಾ ಹಾಜಿ
ಕಾಸರಗೋಡು, ಫೆ.22: ಶಿಕ್ಷಣ ಎನ್ನುವುದು ಕೇವಲ ಓದುವಿಕೆಗೆ ಮಾತ್ರಾ ಸೀಮಿತವಲ್ಲ. ಹಾಡು, ನಾಟಕ, ಆಟ, ಚಿತ್ರಕಲೆ ಇತ್ಯಾದಿಗಳೆಲ್ಲವನ್ನೂ ಆರ್ಜಿಸಿಕೊಂಡು ನಾವು ನಮ್ಮ ಜ್ಞಾನ ಸಂಪತ್ತನ್ನು ವೃದ್ಧಿಗೊಳಿಸಬೇಕು. ತಾಂತ್ರಿಕತೆಯ ನಾಗಾಲೋಟದಲ್ಲಿ ಮಾಯವಾಗುತ್ತಿರುವ ನಮ್ಮ ಕಲೆ, ಸಂಸ್ಕೃತಿ, ಆಚಾರ ವಿಚಾರಗಳು, ಕಲಾರೂಪಗಳು ಇತ್ಯಾದಿಗಳನ್ನು ಉಳಿಸಿ ಬೆಳೆಸಲು, ಅವುಗಳ ಮಹತ್ವವನ್ನು ಪುಟಾಣಿಗಳಿಗೆ ತಿಳಿಸಲು ಇಂತಹ ಶಿಬಿರಗಳು ಉತ್ತಮ ವೇದಿಕೆಗಳಾಗಿವೆ, ಇವು ಸೃಜನಶೀಲತೆಯನ್ನು ಬೆಳೆಸುತ್ತವೆ ಎಂದು ದೇಲಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮುಸ್ತಫಾ ಹಾಜಿ ಅಭಿಪ್ರಾಯಪಟ್ಟರು.
ಜಿ. ಎಚ್. ಎಸ್. ಎಸ್. ಪಾಂಡಿಯಲ್ಲಿ ನಡೆಯುವ ಕುಂಬಳೆ ಉಪಜಿಲ್ಲಾ ಮಟ್ಟದ ದ್ವಿದಿನ ನಾಟಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ದೇಲಂಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಉಷಾ ಕುಮಾರಿಯವರು ಮಾತನಾಡುತ್ತಾ ಮೌಲ್ಯಯುತ ಶಿಕ್ಷಣದ ಬೆಳವಣಿಗೆಗೆ ಸಹಾಯಕವಾಗುವ ಇಂತಹ ಶಿಬಿರಗಳು ಮಕ್ಕಳಿಗೆ ನಿರಂತರವಾಗಿ ಸಿಗುತ್ತಿರಬೇಕು ಎಂದರು.
ದೇಲಂಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಕ್ಷೇಮ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರತನ್ ಕುಮಾರ್ ರವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
ಕುಂಬಳೆ ಉಪಜಿಲ್ಲಾ ಸಮೂಹ ಸಂಪನ್ಮೂಲ ಕೇಂದ್ರದ ಸಂಯೋಜಕರಾದ ಎನ್. ವಿ. ಕುಂಞಿಕೃಷ್ಣನ್ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಿಬಿರದ ಅಗತ್ಯ ಮತ್ತು ಉದ್ಧೇಶಗಳನ್ನು ತಿಳಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ದಿವಾಕರನ್ ಬಿ. ಮತ್ತು ಎಸ್ ಎಂ ಸಿ ಅಧ್ಯಕ್ಷರಾದ ತೋಟ್ಟಂ ಅಬ್ದುಲ್ಲರವರು ಶುಭ ಹಾರೈಸಿದರು.
ಎರಡು ದಿನಗಳ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸಿದ್ಧ ನಾಟಕಕಾರ ಉದಯ್ ಸಾರಂಗ್ ಪೆರ್ಲ, ಶರತ್ ಕುಮಾರ್, ವಿಜಯನ್ ಶಂಕರಪ್ಪಾಡಿ, ರಂಜಿತ್ ಪೆರ್ಲ, ರೋಹಿತ್ ಮಾಟೆಬಯಲು ಹಾಗು ಶಾಲಾ ಅಧ್ಯಾಪಕ ವೃಂದದವರು ಸಹಕರಿಸುತ್ತಿದ್ದಾರೆ.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ದ್ವಿದಿನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಅಶೋಕ್ ನಾಯ್ಕ್ ರವರು ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ನಾರಾಯಣ ದೇಲಂಪಾಡಿಯವರು ಧನ್ಯವಾದವನ್ನು ಸಮರ್ಪಿಸಿದರು. ಶಾಲಾ ಶಿಕ್ಷಕ ಸುಭಾಷ್ ಮಾಸ್ತರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.