ಉಪ್ಪಿನಂಗಡಿ: ಖಾಸಗಿ ಬಸ್ ಸಂಚಾರ ಸ್ಥಗಿತ

Update: 2017-02-25 18:48 GMT

ಉಪ್ಪಿನಂಗಡಿ, ೆ.25: ಖಾಸಗಿ ಬಸ್‌ಗಳು ಸ್ಥಗಿತಗೊಂಡಿರುವುದು ಬಿಟ್ಟರೆ ಉಪ್ಪಿನಂಗಡಿಯಲ್ಲಿ ಬಂದ್ ಪರಿಣಾಮ ಅಷ್ಟೇನೂ ತಟ್ಟಿಲ್ಲ. ರಿಕ್ಷಾ, ಜೀಪು, ಟೆಂಪೋ ಹಾಗೂ ಕೆಎಸ್ಸಾರ್ಟಿಸಿ ಬಸ್‌ಗಳು ಎಂದಿನಂತೆ ಸಂಚಾರ ನಡೆಸಿದ್ದವು. ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಮಡಂತ್ಯಾರು, ಕಕ್ಕೆಪದವು, ಬಂದಾರು, ಪದ್ಮುಂಜ, ತಣ್ಣೀರುಪಂಥ, ಕರಾಯ ಹೀಗೆ ಬೆಳ್ತಂಗಡಿ ತಾಲೂಕಿನ ಕೆಲಭಾಗಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಸಮಸ್ಯೆಗೆ ಸಿಲುಕುವಂತಾಯಿತು.

ಕೆಎಸ್ಸಾರ್ಟಿಸಿ ಬಸ್‌ಗಳು ಇತ್ತಾದರೂ, ಅವುಗಳು ಎಂದಿನಂತೆ ಸಂಚರಿಸುತ್ತಿರಲಿಲ್ಲ. ಕೆಲವು ಅಂಗಡಿಗಳನ್ನು ಬೆಳಗ್ಗೆಯಿಂದಲೇ ಮುಚ್ಚಿದ್ದರೆ, ಮಧ್ಯಾಹ್ನವಾಗುತ್ತಲೇ ಹೆಚ್ಚಿನ ಅಂಗಡಿ ಮಾಲಕರು ಅಂಗಡಿಗಳಿಗೆ ಬಾಗಿಲೆಳೆದು ತೆರಳಿದರು. ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲೂ ದೂರ ಸಂಚಾರ ಮಾಡುವ ಲಾರಿ ಸೇರಿದಂತೆ ಘನ ವಾಹನಗಳ ಪ್ರಯಾಣ ಇಳಿಮುಖವಾಗಿತ್ತು.

ಉಪ್ಪಿನಂಗಡಿ-ಪುತ್ತೂರು ರಸ್ತೆಯ ಬೇರಿಕೆ ಎಂಬಲ್ಲಿ ಕಿಡಿಗೇಡಿಗಳು ಕೆಎಸ್ಸಾರ್ಟಿಸಿ ಬಸ್‌ಗೆ ಕಲ್ಲು ಹೊಡೆಯಲಾಗಿತ್ತು. ಪೆರಿಯಡ್ಕ, ಕಲ್ಲೇರಿ ಹಾಗೂ ಗಾಂಪಾರ್ಕ್ ಬಳಿ ರಸ್ತೆಯಲ್ಲಿ ಟಯರ್‌ಗೆ ಬೆಂಕಿ ಹಾಕಲಾಗಿತ್ತು. ಉಪ್ಪಿನಂಗಡಿಯ ಶ್ರೀಸಹಸ್ರ ಲಿಂಗೇಶ್ವರ-ಮಹಾಕಾಳಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಖೆ ಜಾತ್ರೆ ಶುಕ್ರವಾರ ಆರಂಭವಾಗಿದ್ದು, ಶನಿವಾರ ಬೆಳಗ್ಗೆ ರಥೋತ್ಸವ ನಡೆಯಿತು. ಇಲ್ಲೂ ಎಂದಿನ ಜನಸ್ತೋಮ ಇಲ್ಲದಿದ್ದರೂ, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಅಲ್ಲಲ್ಲಿ ಬಿಗು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News