×
Ad

ದೆಹಲಿ ಕರ್ನಾಟಕ ಸಂಘದಿಂದ ಬೊಳುವಾರು ಮುಹಮ್ಮದ್ ಕುಂಞಿಗೆ ಸನ್ಮಾನ

Update: 2017-02-26 22:09 IST

ದೆಹಲಿ, ಫೆ. 26: ಕನ್ನಡ ಬರಹಗಾರ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಬೊಳವಾರು ಮುಹಮ್ಮದ್ ಕುಂಞಿ ಅವರಿಗೆ ಇತ್ತೀಚೆಗೆ ದೆಹಲಿ ಕರ್ನಾಟಕ ಸಂಘದ ವತಿಯಿಂದ  ಅಭಿನಂದಿಸಲಾಯಿತು.

ದಿನಾಂಕ 24.02.2017ರಂದು ಕನ್ನಡದ ಖ್ಯಾತ ಬರಹಗಾರ ಈ ಬಾರಿಯ ಕೇಂದ್ರ ಸಾಹಿತ್ಯ  ಅಕಾಡಮಿ ಪ್ರಶಸ್ತಿ ಪುರಸ್ಕೃತ ಶ್ರೀ ಬೊಳುವಾರು ಮುಹಮ್ಮದ್ ಕುಂಞ ಅವರು ಕರ್ನಾಟಕ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅವರ 'ಸ್ವಾತಂತ್ರದ ಓಟ' ಎಂಬ 1,086ಪುಟಗಳ ಸುದೀರ್ಘವಾದ ಕಾದಂಬರಿಗೆ 2016ರ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಲು ಬಂದ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘವು ಅವರನ್ನು ಸಂಘಕ್ಕೆ ಬರಮಾಡಿಕೊಂಡು ಅವರ ಸಹಿತ ಅವರ ಪತ್ನಿ ಜುಬೇದಾ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಪುಷ್ಪಗುಚ್ಚ ನೀಡಿ ಅಭಿನಂದಿಸಿ ಗೌರಸಲಾಯಿತು.

 ಸಂಘದ ಪದಾಧಿಕಾರಿಗಳೊಂದಿಗಿನ ಮಾತುಕತೆಯ ಸಂದರ್ಭದಲ್ಲಿ ಬೊಳುವಾರು ಅವರು ತಮ್ಮ ಕಾದಂಬರಿಯ ಒಂದು ಸಂಕ್ಷಿಪ್ತ ವಿವರಣೆ ನೀಡಿದರು.

ಜೊತೆಗೆ ದೇಶದಾದ್ಯಂತ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಹಲವಾರು ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಆತಂಕಗಳ ಬಗ್ಗೆ ಪ್ರಸ್ತಾಪಿಸುತ್ತಾ ಸ್ವತಂತ್ರ ಭಾರತದಲ್ಲಿ ಇಂದೂ ಕೂಡಾ ಹಿಂದುಗಳು ಮತ್ತು ಮುಸ್ಲಿಮರು ಪರಸ್ಪರರನ್ನು ಪ್ರೀತಿಸಿ ಗೌರವಿಸಿ ಸಹಬಾಳ್ವೆಯನ್ನು ನಡೆಸುವುದರ ಬದಲಾಗಿ ಒಂದು ರೀತಿಯ ಗೋಡೆ -ಕಂದರ ಏರ್ಪಟ್ಟಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಕನ್ನಡದ ಸೃಜನಶೀಲ ಗದ್ಯ ಸಾಹಿತ್ಯಕ್ಕೆ ಮುಸ್ಲಿಮ್ ಬದುಕನ್ನು ಮೊತ್ತ ಮೊದಲ ಬಾರಿಗೆ ಪರಿಚಯಿಸಿದ ಕರಾವಳಿ ಕರ್ನಾಟಕದ ಬೊಳುವಾರು ಮುಹಮ್ಮದ್ ಕುಂಞಿ (1951) ಸುಮಾರು ಇನ್ನೂರಕ್ಕೂ ಮಿಕ್ಕಿ ಕತೆಗಳಲ್ಲದೆ, ಕಾದಂಬರಿ, ನಾಟಕ, ಪ್ರವಾಸ ಕಥನ, ಅನುವಾದ ಸಾಹಿತ್ಯ ಹಾಗೂ ಮಕ್ಕಳ ಸಾಹಿತ್ಯಗಳನ್ನು ರಚಿಸಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಪರಂಪರೆಯಲ್ಲೇ ಮೊತ್ತ ಮೊದಲ ಬಾರಿಗೆ ತಮ್ಮ ಸೃಜನಶೀಲ ಕೃತಿಗಳಿಗಾಗಿ ಎರಡು ಬಾರಿ ಪ್ರಶಸ್ತಿಗಳನ್ನು ಪಡೆದು ರಾಷ್ಟ್ರೀಯ ದಾಖಲೆ ನಿರ್ಮಿಸಿದವರು.

ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಮೊದಲ ಪ್ರಶಸ್ತಿಯನ್ನು ತಂದುಕೊಟ್ಟ ದಾಖಲೆಗೂ ಪಾತ್ರರಾದರು. ಇವರು ಸಂಪಾದಿಸಿದ ತಟ್ಟು ಚಪ್ಪಾಳೆ ಪುಟ್ಟ ಮಗು ಎಂಬ ಮಕ್ಕಳ ಪದ್ಯಗಳ ಸಂಕಲನದಿಂದಾಗಿ ಇವರು ಕನ್ನಡ ಮಕ್ಕಳ ಸಾಹಿತ್ಯದಲ್ಲೂ ಗುರುತಿಸಿಕೊಂಡಿದ್ದಾರೆ.

ಕರ್ನಾಟಕ ಸಾತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಸಹಿತ ಮೂರು ಬಾರಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಿಂದಲೂ ಸನ್ಮಾನಿತರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ವಹಿಸಿ ಮಾತನಾಡಿ, ಬೊಳುವಾರು ಅವರು ದೆಹಲಿಯಲ್ಲಿದ್ದಾಗ ಸಂಘದ ಜೊತೆಗೆ ಅವರ ಆತ್ಮೀಯ ಒಡನಾಟವನ್ನು ನೆನಪಿಸಿ, ಮುಂದೆ ಕನ್ನಡದ ಸಾರಸತ್ವ ಲೋಕಕ್ಕೆ ಬೊಳುವಾರು ಇನ್ನೂ ಹೆಚ್ಚು ಕೃತಿಯನ್ನು ಕೊಡುವಂತಾಗಲಿ ಎಂದು ಹಾರೈಸಿದರು.

ನಂದಿನಿ ಮಲ್ಯ, ಸಂಘದ ಪದಾಧಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಸಖಾರಾಮ ಉಪ್ಪೂರು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News