ಕಾಡೂರು ಕಿಂಡಿ ಅಣೆಕಟ್ಟೆಯಲ್ಲಿ ನೀರು ಸೋರಿಕೆ: ಉಡುಪಿ ತಾಪಂ ಸಭೆಯಲ್ಲಿ ದುರಸ್ತಿಗೆ ಒತ್ತಾಯ
ಉಡುಪಿ, ಫೆ.27: ಕಾಡೂರು ಗ್ರಾಪಂ ವ್ಯಾಪ್ತಿಯ ಕೋಟಂಬೈಲು ಎಂಬಲ್ಲಿ ಸೀತಾನದಿಗೆ ನಿರ್ಮಿಸಿರುವ ಕಿಂಡಿಅಣೆಕಟ್ಟೆಯ ಹಲಗೆಯಲ್ಲಿ ನೀರು ಸೋರಿಕೆ ಯಾಗುತ್ತಿದ್ದು, ಅದನ್ನು ಈವರೆಗೆ ದುರಸ್ತಿ ಮಾಡದ ಕುರಿತು ಸೋಮವಾರ ನಡೆದ ಉಡುಪಿ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.
ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಭುಜಂಗ ಶೆಟ್ಟಿ, ಹಲವು ತಿಂಗಳು ಗಳಿಂದ ಕಿಂಡಿ ಅಣೆಕಟ್ಟೆಗೆ ಹಾಕಿರುವ ಹಲಗೆಯಲ್ಲಿ ನೀರು ಸೋರಿಕೆಯಾಗುತ್ತಿದ್ದು, ಇದರಿಂದ ಸುತ್ತಲಿನ ಐದು ಗ್ರಾಮಗಳ ಕೃಷಿಕರಿಗೆ ಸಮಸ್ಯೆ ಹಾಗೂ ಸಮೀಪದ ಮನೆಯ ಬಾವಿಯಲ್ಲಿ ನೀರಿನ ಕೊರತೆ ಎದುರಾಗಿದೆ. ಈ ಕುರಿತು ಸ್ಥಳೀಯರು ಮನವಿ ನೀಡಿದ್ದು, ಇದಕ್ಕೆ ಈವರೆಗೆ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿ ಅಧಿಕಾರಿ, ಈ ಬಗ್ಗೆ ಗುತ್ತಿಗೆದಾರರಿಗೆ ನೋಟೀಸ್ ಜಾರಿ ಮಾಡಲಾಗಿದ್ದು, ಅದನ್ನು ಒಂದು ತಿಂಗಳೊಳಗೆ ದುರಸ್ತಿ ಮಾಡುವು ದಾಗಿ ಅವರು ಹೇಳಿದ್ದಾರೆ ಎಂದು ತಿಳಿಸಿದರು. ಎರಡು ದಿನಗಳ ಒಳಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲನೆ ಮಾಡಿ ಕೂಡಲೇ ದುರಸ್ತಿ ಮಾಡ ಬೇಕೆಂದು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ಮದಗದಲ್ಲಿ ಮೀನುಗಾರಿಕೆಗೆ ವಿರೋಧ:
ಸದಸ್ಯ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿ, ಚಾಂತಾರು ಗ್ರಾಮದಲ್ಲಿ ರುವ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ಮದಗದಲ್ಲಿ ಮೀನುಗಾರಿಕೆ ಇಲಾಖೆಯವರು ಟೆಂಡರ್ ಕರೆದು ಮೀನು ಸಾಕಾಣಿಕೆಗೆ ಅವಕಾಶ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಈ ಮೀನುಗಳನ್ನು ಹಿಡಿಯಲು ಬಂದ ಗುತ್ತಿಗೆದಾರರ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಇವರು ಮೀನು ಹಿಡಿಯುವುದರಿಂದ ಮದಗ ನೀರು ಸಂಪೂರ್ಣ ಕಲುಷಿತಗೊಂಡಿದೆ ಎಂದು ದೂರಿದರು.
ಇದೇ ಮದಗದಿಂದ ಸಮೀಪದ ಮೂರು ಗ್ರಾಮಗಳಿಗೆ ನೀರು ಸರಬ ರಾಜು ಮಾಡುವುದರಿಂದ ಅಲ್ಲೆಲ್ಲಾ ನೀರಿನ ಸಮಸ್ಯೆ ಉಂಟಾಗಿದೆ. ಆದುದ ರಿಂದ ಮಳೆಗಾಲ ಆರಂಭವಾಗುವವರೆಗೆ ಇಲ್ಲಿ ಮೀನುಗಾರಿಗೆ ನಡೆಸಲು ಅವಕಾಶ ನೀಡಬಾರದು ಎಂದು ಅವರು ಆಗ್ರಹಿಸಿದರು. ಈ ಕುರಿತು ಅಧ್ಯಕ್ಷರು ಸಭೆಯಲ್ಲಿ ಹಾಜರಿದ್ದ ಮೀನುಗಾರಿಕಾ ಇಲಾಖೆಯ ಅಧಿಕಾರಿ ಯಿಂದ ಮಾಹಿತಿ ಪಡೆದರು.
ಕುಡಿಯುವ ನೀರಿಗೆ ಸಮಸ್ಯೆಯಾಗುವುದರಿಂದ ಕೂಡಲೇ ಮದಗದಲ್ಲಿ ನಡೆಸುವ ಮೀನುಗಾರಿಕೆಯನ್ನು ಮಳೆಗಾಲದವರೆಗೆ ಸ್ಥಗಿತಗೊಳಿಸಬೇಕು. ಈ ಬಗ್ಗೆ ಸಂಬಂಧಪಟ್ಟವರಿಗೆ ತಾಪಂ ಹಾಗೂ ಗ್ರಾಪಂನಿಂದ ನೋಟೀಸ್ ನೀಡ ಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ನಾಯಿ ಕಾಟ ನಿಯಂತ್ರಣ:
ನಾಯಿಗಳ ಕಾಟದ ಬಗ್ಗೆ ಧನಂಜಯ ಕುಂದರ್ ಸಭೆಯಲ್ಲಿ ಪ್ರಸ್ತಾಪಿಸಿದಾಗ ಅಧ್ಯಕ್ಷರು, ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ನಾಯಿ ಕಾಟ ನಿಯಂತ್ರಿಸಲು ಕೂಡಲೇ ಸುತ್ತೋಲೆ ಹೊರಡಿ ಸಲಾಗುವುದು ಎಂದು ಹೇಳಿದರು.
ಐರೋಡಿ ಗ್ರಾಪಂ ಸಾಮಾನ್ಯ ಸಭೆಯನ್ನು ಅಧ್ಯಕ್ಷರು ಹಾಗೂ ಅಕೌಂಟ್ ಆಫೀಸರ್ ಒಟ್ಟಾಗಿ ನಡೆಸಿದ್ದು, ಇದನ್ನು ಆಕ್ಷೇಪಿಸಿದವರಿಗೆ ಅಧ್ಯಕ್ಷರು ತೀರಾ ಕಟುವಾದ ಶಬ್ದಗಳಿಂದ ಬೈದಿದ್ದಾರೆ. ಆದುದರಿಂದ ಈ ಸಭೆಯ ನಿರ್ಣಯ ವನ್ನು ರದ್ದುಗೊಳಿಸುವಂತೆ ನೋಟೀಸ್ ಜಾರಿ ಮಾಡಬೇಕು ಎಂದು ಸದಸ್ಯೆ ವಸಂತಿ ಪೂಜಾರಿ ಸಭೆಯಲ್ಲಿ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ತಾಪಂ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ, ಈ ಬಗ್ಗೆ ಐರೋಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ಮಾಹಿತಿ ಪಡೆದುಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷೆ ನೀತಾ ಗುರುರಾಜ್ ಉಪಸ್ಥಿತರಿದ್ದರು.
ಸದಸ್ಯರಿಗೆ ಮಾನಸಿಕ ಸಮಸ್ಯೆ ಬಗ್ಗೆ ಮಾಹಿತಿ:
ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ತಾಪಂ ಸದಸ್ಯರುಗಳಿಗೆ ಮಾನಸಿಕ ಆರೋಗ್ಯದ ಕುರಿತು ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಲಾಯಿತು.ಮನೋರೋಗ ತಜ್ಞ ಡಾ.ಮಾನಸ್ ಮಾತನಾಡಿ, ಭಾರತದ ಒಟ್ಟು ಜನ ಸಂಖ್ಯೆಯಲ್ಲಿ ಶೇ.13.5ರಷ್ಟು ಮಂದಿ ವಿವಿಧ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದೇ ಕಾರಣದಿಂದ ಆತ್ಮಹತ್ಯೆ ಕೂಡ ಹೆಚ್ಚಾಗುತ್ತಿದೆ. ಕಳೆದ ವರ್ಷ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 1.30ಲಕ್ಷ ಮಂದಿ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಇಂದು ಯುವಜನತೆ ವಾಟ್ಸಪ್, ಫೇಸ್ಬುಕ್, ಸೆಲ್ಫಿ ಎಂಬ ಹೊಸ ರೀತಿಯ ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿದರು.