ಪುತ್ತೂರಿನಿಂದ ಬೆಂಗಳೂರಿಗೆಂದು ತೆರಳಿದ್ದ ವ್ಯಕ್ತಿ ನಾಪತ್ತೆ
ಪುತ್ತೂರು, ಫೆ.27: ಉದ್ಯೋಗದ ಹಿನ್ನಲೆಯಲ್ಲಿ ಬೆಂಗಳೂರಿಗೆ ತೆರಳಿದ್ದ ಪುತ್ತೂರು ನಗರದ ಹೊರವಲಯದ ಪರ್ಲಡ್ಕ ಸಮೀಪದ ತೆಂಕಿಲದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಕುರಿತು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.
ಪುತ್ತೂರು ನಗರದ ಹೊರವಲಯದಲ್ಲಿರುವ ಪರ್ಲಡ್ಕ ತೆಂಕಿಲ ನಿವಾಸಿ ನಾರಾಯಣ ನಾಯ್ಕ ಅವರ ಪುತ್ರ ಮಹೇಶ್ (35) ನಾಪತ್ತೆಯಾದವರು. ಮಹೇಶ್ ಅವರು ನಾಪತ್ತೆಯಾಗಿರುವ ಕುರಿತು ಅವರ ತಂದೆ ನಾರಾಯಣ ನಾಯ್ಕ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹೇಶ್ ಕಳೆದ 15 ವರ್ಷಗಳಿಂದ ಬೆಂಗಳೂರಿನ ಟಾಟಾ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ. ಈ ನಡುವೆ ಮೂರು ವರ್ಷದ ಹಿಂದೆ ವಿವಾಹವಾಗಿ ಬಳಿಕ ಹೆಂಡತಿಯೊಂದಿಗೆ ಬೆಂಗಳೂರಿಗೆ ತೆರಳಿ ಅಲ್ಲಿ ಕೆಲಸ ಮಾಡಿಕೊಂಡಿದ್ದ. ಕಳೆದ ಆರು ತಿಂಗಳ ಹಿಂದೆ ಪತ್ನಿಯೊಂದಿಗೆ ಊರಿಗೆ ಬಂದಾತ ಇಲ್ಲೇ ಮೂರು ತಿಂಗಳು ಕೆಲಸ ಮಾಡಿಕೊಂಡಿದ್ದ.
ಇಲ್ಲಿ ಸರಿಯಾದ ಕೆಲಸ ಸಿಗದ ಕಾರಣ ಮತ್ತೆ ಬೆಂಗಳೂರಿಗೆ ತೆರಳಿದ್ದ ಮಹೇಶ್ ಕಳೆದ 15 ದಿನಗಳಿಂದ ತನ್ನ ಹಾಗೂ ಆತನ ಪತ್ನಿಯ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಣೆಯಾಗಿರುವ ಮಹೇಶ್ ಅವರ ಮಾಹಿತಿ ಇದ್ದಲ್ಲಿ ಜಿಲ್ಲಾ ಎಸ್ಪಿ 0824-2220503, ಅಥವಾ ಪುತ್ತೂರು ನಗರ ಠಾಣೆಯ ಪೊಲೀಸರಿಗೆ 08251-230555 ಅಥವಾ 948080536 ಗೆ ಮಾಹಿತಿ ನೀಡುವಂತೆ ಪುತ್ತೂರು ನಗರ ಪೊಲೀಸರು ವಿನಂತಿಸಿಕೊಂಡಿದ್ದಾರೆ.