ಉಡುಪಿ: ಫೆ.28ಕ್ಕೆ ಬ್ಯಾಂಕ್ ಅಧಿಕಾರಿಗಳು, ನೌಕರರಿಂದ ಒಂದು ದಿನದ ಮುಷ್ಕರ
ಉಡುಪಿ, ಫೆ.27: ಬ್ಯಾಂಕ್ಗಳನ್ನು ಲೂಟಿ ಮಾಡಿದ ದೊಡ್ಡ ಮೊತ್ತದ ಸುಸ್ತಿದಾರರ ವಿರುದ್ಧ ಕ್ರಮವೂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್ ಅಧಿಕಾರಿಗಳು ಹಾಗೂ ನೌಕರ ಸಂಘಟನೆಗಳ ಜಂಟಿ ಸಮಿತಿಯ ವತಿಯಿಂದ ನಾಳೆ ಒಂದು ದಿನದ ಮುಷ್ಕರ ನಡೆಯಲಿದೆ.
ನಾಳಿನ ಮುಷ್ಕರದಲ್ಲಿ ಬ್ಯಾಂಕಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸುವುದರಿಂದ ಯಾವುದೇ ಬ್ಯಾಂಕ್ ಶಾಖೆ ಕಾರ್ಯನಿರ್ವಹಿಸುವುದಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.
ಮುಷ್ಕರದ ಪ್ರಯುಕ್ತ ನಾಳೆ ಬೆಳಗ್ಗೆ 10 ಗಂಟೆಗೆ ಉಡುಪಿ ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿ ಬಳಿ ಬ್ಯಾಂಕ್ ಅಧಿಕಾರಿಗಳು ಹಾಗೂ ನೌಕರರಿಂದ ಪ್ರತಿಭಟನೆ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಹಾಗೂ ಅಧಿಕಾರಿಗಳ ಸಂಘಟನೆಗಳ ಜಂಟಿ ಸಮಿತಿಯ ಪರವಾಗಿ ಹೆರಾಲ್ಡ್ ಡಿಸೋಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರಕಾರ ನೋಟುಗಳ ಅವೌಲ್ಯೀಕರಣ ಮಾಡಿದ ಸಂದರ್ಭದಲ್ಲಿ ದೇಶಾದ್ಯಂತ ಬ್ಯಾಂಕ್ ನೌಕರರು ದಿನವಿಡಿ ಗ್ರಾಹಕರ ಬವಣೆ ನೀಗಲು ಪಟ್ಟ ಪರಿಶ್ರಮ ಹಾಗೂ ಅದಕ್ಕಾಗಿ ಮಾಡಿದ ವೆಚ್ಚವನ್ನು ಮರುಪಾವತಿಸಲು ಕೇಂದ್ರ ಸರಕಾರ ಮುಂದಾಗದಿರುವುದು, ಕುಟುಂಬ ಪಿಂಚಣಿ ಯೋಜನೆಯನ್ನು ಎಲ್ಲರಿಗೂ ಅನ್ವಯಿಸುವುದು, ಪ್ರಸ್ತಾವಿತ ಬ್ಯಾಂಕ್ ವಿಲೀನಿಕರಣ ಪ್ರಯತ್ನವನ್ನು ಕೈಬಿಡುವುದು ತಮ್ಮ ಬೇಡಿಕೆಗಳಲ್ಲಿ ಸೇರಿವೆ ಎಂದವರು ತಿಳಿಸಿದ್ದಾರೆ.