ಪಡುಬಿದ್ರಿ: ನಂದಿಕೂರು ಬೆಂಕಿ ಅವಘಡ; ಹಲವಾರು ಎಕರೆ ಬೆಂಕಿಗಾಹುತಿ
Update: 2017-02-28 21:08 IST
ಪಡುಬಿದ್ರಿ, ಫೆ.28: ನಂದಿಕೂರು ಕೈಗಾರಿಕಾ ಪ್ರದೇಶದ ಹತ್ತಿರವಿರುವ 110/11 ಕಿ.ವ್ಯಾ ವಿದ್ಯುತ್ ಪ್ರಸರಣ ಕೇಂದ್ರದಿಂದ ಸಾಗುವ ನಂದಿಕೂರು ಕೇಮಾರು ವಿದ್ಯುತ್ ತಂತಿ ಶಾರ್ಟ್ ಸರ್ಕ್ಯೂಟ್ ಆದ ಕಾರಣ ಸಂಭವಿಸಿದ ಬೆಂಕಿ ಅವಘಡದಲ್ಲಿ ಹಲವಾರು ಎಕರೆ ಕೃಷಿ ಭೂಮಿ ಸಹಿತ ಗಿಡ ಮರಗಳು ಸುಟ್ಟು ಹೋದ ಘಟನೆ ಮಂಗಳವಾರ ನಡೆದಿದೆ.
ನಂದಿಕೂರು ಮುದರಂಗಡಿ ಕ್ರಾಸ್ ಬಳಿಯ ಖಾಸಗಿ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇಡೀ ಪ್ರದೇಶವನ್ನು ಆವರಿಸಿ ಹತ್ತಿರ ಕೃಷಿ ಭೂಮಿಗೆ ಬೆಂಕಿ ಪಸರಿಸಿದ ಕಾರಣ ಮರಗಿಡಗಳು ಸಂಪೂರ್ಣ ಸುಟ್ಟು ಹೋಗಿದ್ದು ಪಕ್ಕದಲ್ಲಿ ನಿವಾಸಿಗಳು ಭಯಭೀತರಾಗಿದ್ದರು.
ತಕ್ಷಣ ಯುಪಿಸಿಎಲ್ ಅದಾನಿ ಸಂಸ್ಥೆ ಮತ್ತು ಉಡುಪಿ ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಶ್ರಮಿಸಿದ್ದಾರೆ.