ಮಹಿಳಾ ರಾಜಕಾರಣಕ್ಕೆ ಅಡಚಣೆ ಹೆಚ್ಚು- ಲಕ್ಷ್ಮೀ ಹೆಬ್ಬಾಳ್ಕರ್
ಪುತ್ತೂರು, ಮಾ.1: ಮಹಿಳೆಯರಿಗೆ ಇನ್ನೊಂದು ಹೆಸರು ಸಂಘರ್ಷ, ಆಕೆ ಹುಟ್ಟಿನಿಂದಲೇ ಸಂಘರ್ಷವನ್ನು ಅನುಭವಿಸಿಕೊಂಡು ಬಂದಿದ್ದು, ಮಹಿಳಾ ರಾಜಕಾರಣಕ್ಕೆ ಒಳಗೂ ಹೊರಗೂ ಅಡಚಣೆ ಹೆಚ್ಚು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಮಹಿಳಾ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಶಾಸಕಿ ಶಕುಂತಳಾ ಶೆಟ್ಟಿ ಅವರ 70ರ ಸಂಭ್ರಮ, ಶಾಸಕಿಯವರ ಸಾಧನಾ ಕೈಪಿಡಿ ಬಿಡುಗಡೆ ಮತ್ತು ಮಹಿಳಾ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆ ಶಾರೀರಿಕವಾಗಿ ದುರ್ಬಲವಾಗಿದ್ದರೂ ಮಾನಸಿಕವಾಗಿ 15 ಪುರುಷರಿಗೆ ಸಮಾನಳಾಗಿದ್ದಾಳೆ. ಮಹಿಳೆಯ ಸಾಧನೆಗೆ ಅಡ್ಡಿಪಡಿಸುತ್ತಿರುವರಿಗೆ ಹೆದರದೆ ಅವರ ಟೀಕೆಯನ್ನೇ ಮೆಟ್ಟಿಲಾಗಿಸಿ ಮಹಿಳೆಯರು ಮುಂದುವರಿಯಬೇಕು ಎಂದರು.
ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ಮತ್ತು ತುಳಿತಕ್ಕೆ ಒಳಗಾದವರ ಏಳಿಗೆಗಾಗಿ ಕೆಲಸ ಮಾಡುತ್ತಿದೆ. ನೆಹರೂ , ಇಂದಿರಾ, ರಾಜೀವ್ ಗಾಂಧಿ ಅವರ ತ್ಯಾಗ ಬಲಿದಾನದ ಮೂಲಕ ಬೆಳೆದಿರುವ ಪಕ್ಷವನ್ನು ಇದೀಗ ಮೋದಿಯವರು ತನ್ನ ಬೂಟಾಟಿಕೆಯ ಮಾತುಗಳಿಂದ ಅವರ ತ್ಯಾಗವನ್ನು ವ್ಯಂಗ್ಯವಾಗಿ ಮಾತನಾಡುತ್ತಿರುವುದು ಅವರ ವಿಕೃತ ಮನಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಬ್ಯಾಂಕ್ನಿಂದ ಜನರಿಗೆ ಸಾಲ ನೀಡುವ ವ್ಯವಸ್ಥೆ ಮಾಡಿದ್ದರೆ. ಮೋದಿಯವರು ಜನರ ಹಣವನ್ನು ಬ್ಯಾಂಕ್ಗೆ ಕಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ರಾಮಮಂದಿರ ನಿರ್ಮಿಸುವ ಹೆಸರಿನಲ್ಲಿ ರಾಜಕಾರಣ ಮಾಡಿದ್ದ ಬಿಜೆಪಿ ಅಧಿಕಾರ ಸಿಕ್ಕಿದ ಬಳಿಕ ಅದನ್ನು ಮರೆತು ಬಿಟ್ಟಿದೆ. ಮಂದಿರಕ್ಕೆ ಮುಕ್ತಿ ನೀಡಿಲ್ಲ ಎಂದು ದೂರಿದರು.
ರಾಜ್ಯ ಯುವಜನ ಕ್ರೀಡಾ ಸೇವಾ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ಮಹಿಳೆಯರು ರಾಜಕಾರಣದಲ್ಲಿ ಮುಂದೆ ಬರುವುದು ಮುಳ್ಳಿನ ಹಾದಿಯಂತೆ, ಅದನ್ನು ಎದುರಿಸುವ ದಿಟ್ಟತನ ಅವರಲ್ಲಿ ಇರಬೇಕಾಗಿದೆ. ಆ ಶಕ್ತಿ ಶಕುಂತಳಾ ಶೆಟ್ಟಿ ಅವರಲ್ಲಿದೆ. ಪುತ್ತೂರು ಕ್ಷೇತ್ರದ ಜನತೆಗಾಗಿ ಶಕುಂತಳಾ ಶೆಟ್ಟಿ ಅವರು ಬಿಕ್ಷುಕರಾಗಿ ಕಾಡಿ ಬೇಡಿ ಅನುದಾನದ ಮಹಾಪೂರವನ್ನೇ ಹರಿಸಿದ್ದಾರೆ ಎಂದರು.
ಮನೆಯೊಳಗೆ ಗುಂಪುಗಳಾಗಿ ಜಗಳವಾಡುತ್ತಿದ್ದರೆ ಆ ಮನೆ ಯಾವತ್ತೂ ಉದ್ದಾರವಾಗಲಾರದು. ಅದರಂತೆ ದೇಶದೊಳಗೆ ಪ್ರಜೆಗಳನ್ನು ವಿಂಗಡಿಸಿ ಜಾತಿ ಧರ್ಮದ ಹೆಸರಿನಲ್ಲಿ ಜಗಳಾಡಿಸಿದೆ ಆ ದೇಶ ಉದ್ದಾರವಾಗಲು ಸಾಧ್ಯವಿಲ್ಲ. ಎಲ್ಲರೂ ಒಟ್ಟಾಗಿದ್ದರೆ ಮಾತ್ರ ಪ್ರಪಂಚದಲ್ಲಿ ನಂಬರ್ 1 ಆಗಲು ಸಾಧ್ಯ ಎಂದರು.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಶಾಸಕಿಯವರ ಸಾಧನಾ ಕೈಪಿಡಿ ಬಿಡುಗಡೆಗೊಳಿಸಿದರು. ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಸರ್ಕಾರದ ಮುಖ್ಯ ಸಚೇತಕ ಐವನ್ ಡಿಸೋಜ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ರುದ್ರಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಜಿ ನಿರ್ದೇಶಕ ನವೀನ್ ಭಂಡಾರಿ, ಕೆಪಿಸಿಸಿ ಸದಸ್ಯ ಎಂ.ಎಸ್. ಮಹಮ್ಮದ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಝೊಹರಾ ನಿಸಾರ್ ಅಹ್ಮದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎ.ಬಿ. ವೇಗಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಲ್ಮಾ ಗೋನ್ಸಾಲ್ವಿಸ್, ತಾ.ಪಂ. ಸದಸ್ಯರಾದ ಉಷಾ ಅಂಚನ್, ಪಿ.ಪಿ. ವರ್ಗೀಸ್, ಫಝಲ್ ಕೋಡಿಂಬಾಳ, ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪಕ್ಕಳ ಮತ್ತಿತತರು ಉಪಸ್ಥಿತರಿದ್ದರು.
ಈ ಸದಂರ್ಭದಲ್ಲಿ ಶಕುಂತಳಾ ಶೆಟ್ಟಿ ಅವರ ಹುಟ್ಟು ಹಬ್ಬದ ನೆನಪಿಗಾಗಿ ಹೈನುಗಾರಿಕೆ ಮತ್ತು ಪಶುಸಂಗೋಪನೆ, ಹಳ್ಳಿ ವೈದ್ಯರು, ದೇಶ ರಕ್ಷಕರ ಕುಟುಂಬ, ಸಮಾಜ ಸೇವೆ ಮತ್ತು ಮಹಿಳಾ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 9 ಮಂದಿ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.
ಸುಮಾರು ರೂ. 3ಲಕ್ಷ ಮೌಲ್ಯದ ಅಕ್ವಾ ಶುದ್ಧ ಕುಡಿಯುವ ನೀರಿನ ಫಿಲ್ಟರ್ ಹಾಗೂ ಬೆಟ್ಟಂಪಾಡಿಯಲ್ಲಿನ ಬಡ ವಿಧವೆ ಮಹಿಳೆಯ ಮನೆಗೆ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ನೀಡಲಾದ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಹಸ್ತಾಂತರ ಮಾಡಲಾಯಿತು.
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಮೊಯ್ದೀನ್ ಅರ್ಶದ್ ದರ್ಬೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುರಳೀಧರ ಮಠಂತಬೆಟ್ಟು, ಹರೀಣಾಕ್ಷಿ ಜೆ.ಶೆಟ್ಟಿ ಮತ್ತು ಸಾಹಿರಾ ಜುಬೇರ್ ನಿರೂಪಿಸಿದರು.