×
Ad

ಕೇಸರಿ ಶಾಲು ಧರಿಸದ ವಿದ್ಯಾರ್ಥಿಯ ಮೇಲೆ ಹಲ್ಲೆ; ನಾಲ್ವರು ಸಂಘಪರಿವಾರ ಬೆಂಬಲಿತ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು

Update: 2017-03-01 23:58 IST

ಭಟ್ಕಳ, ಮಾ.1: ಇಲ್ಲಿನ ರಂಗೀಕಟ್ಟೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಎರಡು ಮೂರು ವಾರಗಳಿಂದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತಿದ್ದು, ಬುಧವಾರ ಕೇಸರಿ ಶಾಲು ಧರಿಸದೆ ಕಾಲೇಜಿಗೆ ಬಂದ ವಿದ್ಯಾರ್ಥಿಯೊಬ್ಬನ ಮೇಲೆ ನಾಲ್ವರು ಕೇಸರಿ ಶಾಲುಧಾರಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದು ಪ್ರಕರಣ ಪೊಲೀಸ್ ಮೆಟ್ಟಿಲೇರಿದೆ.

ನಾಲ್ವರು ಮುಸ್ಲಿಮ್ ಅತಿಥಿ ಉಪನ್ಯಾಸಕಿಯರು ಬುರ್ಖಾ ಧರಿಸಿ ಕಾಲೇಜಿಗೆ ಬರುತ್ತಿರುವುದನ್ನು ವಿರೋಧಿಸುತ್ತ ಬಂದಿರುವ ಸಂಘಪರಿವಾರ ಬೆಂಬಲಿತ ವಿದ್ಯಾರ್ಥಿಗಳು ಕಳೆದ ಎರಡು ಮೂರು ವಾರಗಳಿಂದ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತಿದ್ದರು. ಈ ಮಧ್ಯೆ ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆ ಮತ್ತು ನಾಮಧಾರಿ ಸಮಾಜದ ಮುಖಂಡರು ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿ ಮನವೊಲಿಸುವ ಪ್ರಯತ್ನಪಟ್ಟರೂ ಯಾರ ಮಾತಿಗೂ ಜಗ್ಗದ ವಿದ್ಯಾರ್ಥಿಗಳು ಮುಸ್ಲಿಮ್ ಉಪನ್ಯಾಸಕಿಯರು ಕಾಲೇಜಿಗೆ ಬುರ್ಖಾ ತೆಗೆದು ಬರುವವರೆಗೂ ತಾವು ಕೇಸರಿ ಶಾಲು ಧರಿಸುವುದನ್ನು ನಿಲ್ಲಿಸುವುದಿಲ್ಲ ಎಂದು ತಗಾದೆ ತೆಗೆದಿದ್ದರು.

ಈ ಕುರಿತು ಕಾಲೇಜು ವಸ್ತ್ರ ಸಂಹಿತೆಯಲ್ಲಿ ಇಂತಹದ್ದೆ ವಸ್ತ್ರಗಳನ್ನು ಉಡಬೇಕು ಎಂಬ ನಿಯಮ ಇರದ ಕಾರಣ ಸಹಾಯಕ ಆಯುಕ್ತ ಎಂ.ಎನ್. ಮಂಜುನಾಥ್ ಅವರವ ಇಷ್ಟದ ಪ್ರಕಾರ ವಸ್ತ್ರಗಳನ್ನು ಉಡಬಹುದು ಎಂದು ತಿಳಿಸಿದ್ದರು. ಆದರೆ ಯಾವುದೇ ಕಾರಣಕ್ಕೂ ಶಾಂತತ ಭಂಗಕ್ಕೆ ಪ್ರಯತ್ನಪಟ್ಟರು ಪರಿಣಾಮ ನೆಟ್ಟಗಿರುವುದಿಲ್ಲ ಎಂಬ ಎಚ್ಚರಿಕೆಯ ಮಾತುಗಳನ್ನು ಆಡಿದ್ದರು.

ಆದರೆ ಬುಧವಾರ ಪ್ರಕರಣ ಬೇರೆ ಹಾದಿ ಹಿಡಿದಿದ್ದು ಕೇಸರಿ ಶಾಲು ಧರಿಸಲು ಒಪ್ಪದ ವಿದ್ಯಾರ್ಥಿಗಳಿಗೂ ಬಲವಂತವಾಗಿ ಕೇಸರಿ ಶಾಲು ಹಾಕುವಂತೆ ಎಚ್ಚರಿಕೆ ನೀಡಿದ್ದು, ಕೇಸರಿ ಶಾಲು ಧರಿಸದೆ ಕಾಲೇಜಿಗೆ ಬಂದ ಬಿ.ಎ. ನಾಲ್ಕನೇ ಸೆಮಿಷ್ಟರ್ ನಲ್ಲಿ ಓದುತ್ತಿರುವ ಜಯಂತ್ ನಾಯ್ಕ ಎಂಬಾತನ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿಗಳಾದ ರಾಘವೇಂದ್ರ, ಜೀವನ್, ಸಂದೀಪ್ ಹಾಗೂ ಅಭಿಷೇಕ್ ಎಂಬುವವರ ಹಲ್ಲೆ ಮಾಡಿದ್ದು ಈಗ ಪ್ರಕರಣ ಪೊಲೀಸ್ ಬಳಿ ಬಂದಿದೆ.

ನಾಲ್ವರ ವಿರುದ್ಧ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News