ಕೇರಳದ ಯೋಧ ಮ್ಯಾಥ್ಯೂ ಶವ ಪಡೆಯಲು ಕುಟುಂಬದ ನಿರಾಕರಣೆ
ತಿರುವನಂತಪುರ,ಮಾ.4: ಮಹಾರಾಷ್ಟ್ರದ ನಾಸಿಕ್ ಬಳಿಯ ದೇವಲಾಲಿ ದಂಡುಪ್ರದೇಶದಲ್ಲಿನ ಬ್ಯಾರಕ್ವೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಯೋಧ ರಾಯ್ ಮಾಥ್ಯೂ ಅವರ ಮೃತದೇಹವನ್ನು ಸ್ವೀಕರಿಸಲು ಅವರ ಕುಟುಂಬವು ಶನಿವಾರ ನಿರಾಕರಿಸಿದೆ. ಮತ್ತೊಮ್ಮೆ ಶವದ ಮರಣೋತ್ತರ ಪರೀಕ್ಷೆ ನಡೆಯಬೇಕೆಂದು ಅದು ಆಗ್ರಹಿಸಿದೆ.
ನಮ್ಮ ಹಲವಾರು ಪ್ರಶೆಗಳಿಗೆ ಉತ್ತರ ಸಿಕ್ಕಿಲ್ಲ. ಮೃತದೇಹ ಗುರುತು ಹಿಡಿಯಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ. ಮೃತದೇಹದ ಜೊತೆಯಲ್ಲಿದ್ದ ಅಧಿಕಾರಿಗಳು ಮ್ಯಾಥ್ಯೂ ಪತ್ನಿ ಸೇರಿದಂತೆ ನಿಕಟ ಬಂಧುಗಳಿಗೂ ಅದನ್ನು ತೋರಿಸಲು ನಿರಾಕರಿಸಿದ್ದಾರೆ ಎಂದು ಮೃತದೇಹ ತಿರುವನಂತಪುರಕ್ಕೆ ಆಗಮಿಸಿದಾಗ ಸ್ಥಳದಲ್ಲಿ ಉಪಸ್ಥಿತರಿದ್ದ ಬಂಧು ವೋರ್ವರು ಹೇಳಿದರು.
214 ರಾಕೆಟ್ ರೆಜಿಮೆಂಟ್ನಲ್ಲಿ ಗನ್ನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಯ್ ಮಾಥ್ಯೂ(33) ನಾಸಿಕ್ನ ಸ್ಥಳಿಯ ಮರಾಠಿ ಟಿವಿ ಚಾನೆಲ್ಲೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸೇನೆಯಲ್ಲಿನ ಬ್ರಿಟಿಷರ ಕಾಲದ ಅಮಾನವೀಯ ಆರ್ಡರ್ಲಿ ವ್ಯವಸ್ಥೆಯನ್ನು ಬಯಲಿಗೆಳೆದಿದ್ದಲ್ಲದೆ, ಹಿರಿಯ ಅಧಿಕಾರಿಗಳಿಂದ ಕಿರುಕುಳಗಳ ಬಗ್ಗೆ ದೂರಕೊಂಡಿದ್ದರು. ಸೋಮವಾರ ಈ ಕಾರ್ಯಕ್ರಮ ಪ್ರಸಾರಗೊಂಡಿತ್ತು. ಅದಕ್ಕೂ ಮುನ್ನಾದಿನ ಕೇರಳದ ಕೊಲ್ಲಂನಲ್ಲಿರುವ ಪತ್ನಿ ಫಿನಿ ಮ್ಯಾಥ್ಯೂಜೊತೆ ದೂರವಾಣಿಯಲ್ಲಿ ಮಾತನಾಡಿದ್ದ ಮ್ಯಾಥ್ಯೂ ಬಳಿಕ ಕರ್ತವ್ಯಕ್ಕೂ ಹಾಜರಾಗದೆ ನಾಪತ್ತೆಯಾಗಿದ್ದರು. ಗುರುವಾರ ಸೇನಾ ಶಿಬಿರದ, ಬಳಕೆಯಲ್ಲಿಲ್ಲದ ಬ್ಯಾರಕ್ವೊಂದರಲಿ ತೀವ್ರ ಕೊಳೆತಿದ್ದ, ನೇಣು ಬಿಗಿದ ಸ್ಥಿತಿಯಲ್ಲಿದ್ದ ಅವರ ಮೃತದೇಹ ಪತ್ತೆಯಾಗಿತ್ತು.
ತನ್ನ ಗುರುತನ್ನು ರಹಸ್ಯವಾಗಿಡುವುದಾಗಿ ಚಾನೆಲ್ ಭರವಸೆ ನೀಡಿತ್ತಾದರೂ ತನ್ನ ಹಿರಿಯ ಅಧಿಕಾರಿಗಳಿಗೆ ವಿಷಯ ಗೊತ್ತಾಗಿದೆ ಎಂದು ಮ್ಯಾಥ್ಯೂ ಪತ್ನಿಗೆ ತಿಳಿಸಿದ್ದರು. ರವಿವಾರದ ಕರೆಯ ಬಳಿಕ ಅವರು ಮತ್ತೆ ಪತ್ನಿಯ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಸೇನೆಯು ಹೇಳಿದೆಯಾದರೂ, ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಮ್ಯಾಥ್ಯೂ ಕುಟುಂಬವು ಅವರ ಸಾವಿಗೆ ಕಾರಣವಾದ ಸಂದರ್ಭಗಳ ಕುರಿತು ತನಿಖೆಗೆ ಒತ್ತಾಯಿಸಿದೆ.
ಸೇನಾ ಶಿಬಿರದಲ್ಲಿನ ಗುಲಾಮಗಿರಿಯ ಬಗ್ಗೆ ಮ್ಯಾಥ್ಯೂ ಆಗಾಗ್ಗೆ ಪತ್ನಿಯ ಬಳಿ ದೂರಿಕೊಂಡಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಕೆಳಮಟ್ಟದ ನೌಕರರನ್ನು ಅಧಿಕಾರಿಗಳ ಮನೆಗಳಲ್ಲಿ ಬಲವಂತದಿಂದ ದುಡಿಸಿಕೊಳ್ಳಲಾಗುತ್ತಿದೆ ಎಂದೂ ಮ್ಯಾಥ್ಯೂ ತಿಳಿಸಿದ್ದರು.
ಸಶಸ್ತ್ರ ಪಡೆಗಳಲ್ಲಿ ಕಳಪೆ ಕೆಲಸದ ವಾತಾವರಣ ಮತ್ತು ಯೋಧರಿಗೆ ಕಿರುಕುಳ ಕುರಿತು ಸರಣಿ ಆರೋಪಗಳ ನಡುವೆಯೇ ಈ ನಿಗೂಢ ಸಾವು ಸಂಭವಿಸಿದೆ.