ತ್ರಾಲ್ ಎನ್ ಕೌಂಟರ್: ಮೂವರು ಉಗ್ರರನ್ನು ಸದೆ ಬಡಿದ ಸೇನೆ ; ಓರ್ವ ಪೊಲೀಸ್ ಬಲಿ
ಶ್ರೀನಗರ, ಮಾ.5: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್ ನಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನೆ ಮತ್ತು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಸದೆಬಡಿಯಲಾಗಿದ್ದು, ಇದೇ ವೇಳೆ ಓರ್ವ ಪೊಲೀಸ್ ಹುತಾತ್ಮರಾಗಿದ್ದಾರೆ ಆರ್ಮಿ ಮೇಜರ್ ಸೇರಿದಂತೆ ಐವರು ಯೋಧರು ಮತ್ತು ಓರ್ವ ಪೊಲೀಸ್ ಪೇದೆ ಗಂಭೀರ ಗಾಯಗೊಂಡಿದ್ದಾರೆ.
ಎನ್ ಕೌಂಟರ್ಗೆ ಬಲಿಯಾದ ಮೂವರು ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆಂದು ತಿಳಿದುಬಂದಿದೆ. ಈ ಪೈಕಿ ಇಬ್ಬರನ್ನು ಬುರ್ಹಾನ್ ವಾನಿ ರೈಟ್ ಹ್ಯಾಂಡ್ ಸಬ್ಜರ್ ಭಟ್ ಮತ್ತು ಮತ್ತೊಬ್ಬ ಉಗ್ರ ಅಕ್ವಿಬ್ ಎಂದು ಗುರುತಿಸಲಾಗಿದೆ. ಪೊಲೀಸ್ ಪೇದೆ ಮನ್ಸೂರ್ ಅಹ್ಮದ್ ನಾಯ್ಕ್ ಹುತಾತ್ಮರಾಗಿದ್ದಾರೆ. ಮೇಜರ್ ರಿಶಿ, ಪೊಲೀಸ್ ಗುಲ್ಜಾರ್ ಅಹ್ಮದ್ , ಸಿಆರ್ ಪಿಎಫ್ ಸಿಬ್ಬಂದಿ ರಾಮ್ ಸಿಂಗ್ ಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ದಕ್ಷಿಣ ಕಾಶ್ಮೀರದ ಪುಲ್ಮಾಮ ಜಿಲ್ಲೆಯ ತ್ರಾಲ್ ಎಂಬಲ್ಲಿ ಉಗ್ರರು ಅಡಗಿ ಕುಳಿತಿರುವ ಖಚಿತ ವರ್ತಮಾನದ ಮೇರೆಗೆ ಸೇನೆ ಮತ್ತು ಪೊಲೀಸರು ನಿನ್ನೆ ರಾತ್ರಿ ಕಾರ್ಯಾಚರಣೆ ಆರಂಭಿಸಿತ್ತು. ೪೨ ರಾಷ್ಟ್ರೀಯ ರೈಫಲ್ ಸೇರಿದಂತೆ ಭದ್ರತಾ ಪಡೆಗಳು, ಸಿಆರ್ ಪಿಎಫ್ ಹಾಗೂ ಎಸ್ ಒಜಿ ಜಂಟಿ ಕಾರ್ಯಾಚರಣೆಗೆ ಸ್ಥಳೀಯರು ಅಡ್ಡಿಪಡಿಸಿದ್ದರು. ಈ ವೇಳೆ ಸ್ಥಳೀಯರು ಸೇನಾಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಪರಿಸ್ಥಿತಿಯ ನಿಯಂತ್ರಣಕ್ಕೆ ಸೆಕ್ಷನ್ 144ಜಾರಿ ಮಾಡಲಾಗಿತ್ತು. ಕೆಲ ಸಮಯಗಳ ಕಾಲ ಮೊಬೈಲ್ ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.