40ಸಾವಿರ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ವಿದ್ಯಾಸಿರಿ ಯೋಜನೆ: ಶಾಸಕ ಅಭಯಚಂದ್ರ ಜೈನ್
ಮುಲ್ಕಿ, ಮಾ.5: ಸುಮಾರು 40 ಸಾವಿರ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ವಿದ್ಯಾಸಿರಿ ಯೋಜನೆ ಸದ್ಭಳಕೆಯಾಗುವಂತೆ ಮಾಡಲಾಗುವುದು ಎಂದು ಮುಲ್ಕಿ ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಹಳೆಯಂಗಡಿ ಕದಿಕೆಯಲ್ಲಿ ಶನಿವಾರ ನಡೆದ ಹಝ್ರತ್ ಸೈಯದ್ ಮೌಲಾನಾ ವಲಿಯುಲ್ಲಾಹಿ ದರ್ಗಾ ಶರೀಫ್ನ ಉರೂಸ್ ಸಮಾರೋಪ ಸಮಾರಂಭ ಮತ್ತು ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧಾ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಈ ವರೆಗೆ ಕದಿಕೆ ದರ್ಗಾ ಹಾಗೂ ಮಸೀದಿಗೆ ಸಂಬಂಧಿಸಿದಂತೆ ಬಂದಿರುವ ಎಲ್ಲಾ ಮನವಿಗಳನ್ನು ಸ್ವೀಕರಿಸಿ ಕಾರ್ಯಗತ ಗೊಳಿಸಲಾಗಿದೆ. ಅದರಂತೆ ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಕದಿಕೆ ಕೆಳಗಿನ ಮಸೀದಿಯನ್ನು ಮೂಲ ವಾಸ್ತುವಿಗೆ ಅನುಗುಣವಾಗಿ ನವೀಕರಿಸಲಾಗಿದೆ ಎಂದ ಸಚಿವರು, ಎಲ್ಲಾ ಧರ್ಮಗಳು ಶಾಂತಿ ಸೌಹಾರ್ದತೆಯನ್ನು ಮಾತ್ರ ಭೋದಿಸಿವೆ. ಇದನ್ನು ಅರಿತು ಬಾಳಿದರೆ ಭೂಮಿ ಸ್ವರ್ಗವಾಗುವುದು ಎಂದರು.
ಮುಖ್ಯ ಪ್ರಭಾಷಣಗೈದ ಚೊಕ್ಕಬೆಟ್ಟು ಜುಮಾ ಮಸೀದಿಯ ಖತೀಬ್ ಅಝೀಝ್ ದಾರಿಮಿ, ಹೊಸತನದ ಭರಾಟೆಯಲ್ಲಿ ಒಲಿತಾದ ಕಾರ್ಯಗಳನ್ನು ಕೈಚೆಲ್ಲಿ ಮಾನವೀಯ ವೌಲ್ಯಗಳನ್ನು ಮರೆಯುತ್ತಾ ಧ್ವೇಷದ ಜೀವನದತ್ತ ಸಾಗುತ್ತಿದ್ದೇವೆ. ಜಾತಿ ಧರ್ಮಗಳ ಸಂಕೋಲೆ ಮುರಿದು ಸರ್ವರನ್ನೂ ಪ್ರೀತಿಸುವವರು ಮಾತ್ರ ನೈಜ ಮುಸ್ಲಿಮರಾಗಲು ಸಾಧ್ಯ ಎಂದರು.
ಪ್ರಕೃತಿಯಿಂದ ಒಲಿತು ಬಯಸುವ ಮತ್ತು ಪ್ರಕ್ರತಿಯನ್ನು ಬಳಸಿಕೊಳ್ಳುವ ಮನುಷ್ಯ ಅದರ ನಾಶದತ್ತ ಮುಖ ಮಾಡಿದ್ದಾನೆ ಹೊರತು ಅದನ್ನು ಉಳಿಸುವ ಬಗ್ಗೆ ಚಿಂತಿಸುತ್ತಿಲ್ಲ ಎಂದು ನುಡಿದರು.
ಸಮಾರಂಭವನ್ನು ಸಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ಲಾ ಮದನಿ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಹಳೆಯಂಗಡಿ ಕದಿಕೆ ಜುಮಾ ಮಸೀದಿಯ ಖತೀಬ್ ಕೆ.ಎಚ್. ಅಬ್ದುಲ್ ರಹಿಮಾನ್ ಫೈಝಿ, ಮುಖ್ಯ ಅತಿಥಿಗಳಾದ ರಾಜ್ಯ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜಾ, ಇಸ್ಲಾಮಿಕ್ ಕಲ್ಚರಲ್ ಫೌಡೇಶನ್ನ ಪ್ರಧಾನ ಕಾರ್ಯದರ್ಶಿ ಮಮ್ತಾಝ್ ಅಲಿ, ಮೂಡಾ ಸದಸ್ಯ ವಸಂತ್ ಬೆರ್ನಾರ್ಡ್ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಸಮಾರಂಭದಲ್ಲಿ ಅಸೈಯದ್ ಅಲ್ಹಾದಿ ಮಶ್ಹೂರ್ ತಂಙಳ್ ಕೇರಳ ದುವಾ ಆಶೀರ್ವಚನ ಗೈದರು. ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಅಝ್ಹರ್ ಫೈಝಿ ಬೊಳ್ಳೂರು ಉಸ್ತಾದ್, ಕದಿಕೆ ಮಸೀದಿಯ ಸದರ್ ಮುಅಲ್ಲಿಮ್ ಕೆ.ಎ. ಹಬೀಬ್ ರೆಹ್ಮಾನ್, ಸಂತೆಕಟ್ಟೆ ಜುಮಾ ಮಸೀದಿಯ ಝತೀಬ್ ಇಸ್ಮಾಯೀಲ್ ದಾರೆಇಮಿ, ಇಂದಿರಾನಗರ ಮಸಿದಿಯ ಸದರ್ ಮುಅಲ್ಲಿಮ್ ಹನೀಫ್ ದಾರಿಮಿ ಅಂಕೋಲಾ, ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್ ದಾಸ್, ಸದಸ್ಯ ಉಮೇಶ್ ಪೂಜಾರಿ, ಹಳೆಯಂಗಡಿ ಗ್ರಾ.ಪಂ. ಸದಸ್ಯರಾದ ಬ್ದುಲ್ ಖಾದರ್ ಇಂದಿರಾನಗರ, ಎಂ.ಎಚ್. ಬಶೀರ್ ಸಾಗ್, ಬಶೀರ್ ಸಾಗ್, ಎಚ್.ಎಸ್. ಹಮೀದ್ ಸಾಗ್, ಅಬ್ದುಲ್ ಅಝೀಝ್ ಬೊಳ್ಳೂರು, ಮುಲ್ಕಿ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಉರೂಸ್ ಸಮಿತಿಯ ಅಧ್ಯಕ್ಷ ಬಶೀರ್ ಅಹ್ಮದ್ ಕಲ್ಲಾಪು, ಸಾಹುಲ್ ಹಮೀದ್ ಕದಿಕೆ, ಜಮಾತ್ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಸಾಗ್, ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಹಾಜಿ ಅಬ್ದುಲ್ ರಹಿಮಾನ್ ಕುಡುಂಬೂರು, ಪ್ರಚಾರ ಸಮಿತಿ ಅಧ್ಯಕ್ಷ ಫಾರೂಖ್ ಸಾಗ್, ಕೆ.ಎಚ್ . ಯೂಸುಫ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಬಳಿಕ ನಡೆದ ರಾಜ್ಯ ಮಟ್ಟದ ದಫ್ ಸ್ಪರ್ಧೆಯಲ್ಲಿ ರಾಜ್ಯದ ವಿವಿಧೆಡೆಯ 17 ತಂಡಗಳು ಭಾಗವಹಿಸಿದ್ದವು. ರಿಫಾಯಿಯಾ ದಫ್ ಅಸೋಸೊಯೇಶನ್ ಕೈಕಂಬ ಬಿ.ಸಿ. ರೋಡ್ ಪ್ರಥಮ ಸ್ಥಾನವನ್ನು ಪಡೆಯಿತು.ಹಯಾತುಲ್ ಇಸ್ಲಾಂ ದಫ್ ಸಮಿತಿ ಪುತ್ತೂರು ದ್ವಿತೀಯ ಸ್ಥಾನ ಪಡೆಯಿತು. ಸಿರಾಜುಲ್ ಹುದಾ ದಫ್ ಸಮಿತಿ ಮಜೂರು ಮಲ್ಲಾರ್ ತೃತೀಯ ಹಾಗೂ ಹಿಮಾಯತುಲ್ ಇಸ್ಲಾಂ ದಫ್ ಸಮಿತಿ ಫಕೀರ್ಣಕಟ್ಟೆ ಕಾಪು ಚತುರ್ಥ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಹಳೆಯಂಗಡಿ ಕದಿಕೆ ಹಝ್ರತ್ ಸೈಯದ್ ವೌಲಾನಾ ವಲಿಯುಲ್ಲಾ ದರ್ಗಾ ಶರೀಫ್ ಪ್ರವಾಸಿ ತಾಣವಾಗಿದ್ದು, ಪ್ರತೀ ದಿನ ನೂರಾರು ಪ್ರವಾಸಿಗರು ಭೇಟಿ ನೀಡಿ ಮಹಾತ್ಮರನ್ನು ಸಂದರ್ಶಿಸುತ್ತಾರೆ. ಈ ಸಂದರ್ಭ ಪ್ರವಾಸಿಗರಿಗೆ ತಂಗುವ ಮತ್ತು ಮೂಲ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಸಮಿತಿ ಚಿಂತನೆ ನಡೆಸಿದೆ. ಈ ಬಗ್ಗೆ ಶಾಸಕರು ಸಂಬಂಧ ಪಟ್ಟ ಇಲಾಖೆಯಿಂದ ನೀಡಬಹುದಾದ ಅನುದಾನದ ಹೆಚ್ಚಿನ ಮೊತ್ತವನ್ನು ಕಲ್ಪಿಸಲು ಸಹಕರಿಸಬೇಕೆಂದು ವಿನಂತಿಸಿದ ಉರೂಸ್ ಸಮಿತಿಗೆ ಉತ್ತರಿಸಿದ ಶಾಸಕ ಅಭಯಚಂದ್ರ ಜೈನ್, ಸಂಬಂಧ ಪಟ್ಟ ಇಲಾಖೆಯ ಸಚಿವರೊಂದಿಗೆ ಮಾತುಕತೆ ನಡೆಸಿ ಶೀಘ್ರ ಅನುದಾನ ಬಿಡುಗಡೆ ಮಾಡುವಂತೆ ವಿನಂತಿಸುವ ಮೂಲಕ ಈ ವರ್ಷವೇ ಕಾಮಗಾರಿ ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.