×
Ad

ಯುಪಿಸಿಎಲ್‌ನಿಂದ ಹೆಚ್ಚಿದ ಬಿಸಿಲ ತಾಪ: ಸೊರಕೆ ಆತಂಕ

Update: 2017-03-06 21:09 IST

ಪಡುಬಿದ್ರಿ, ಮಾ.6: ಯುಪಿಸಿಎಲ್‌ನ 1200 ಮೆ.ವಾ. ಯೋಜನೆಯಿಂದ ಈಗಾಗಲೇ ಬಿಸಿಲ ತಾಪ ಹೆಚ್ಚಾಗಿದೆ ಎಂದು ಶಾಸಕ ವಿನಯಕುಮಾರ್ ಸೊರಕೆ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆಯಡಿ ಮುದರಂಗಡಿಯಲ್ಲಿ ನೂತನವಾಗಿ ನಿರ್ಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು ಈ ಯೋಜನೆ ಇನ್ನೂ 3,800 ಮೆ.ವಾ. ಯೋಜನೆ ನಿರ್ಮಾಣವಾದಲ್ಲಿ ಈ ಭಾಗದಲ್ಲಿ ಕುಳಿತುಕೊಳ್ಳಲು ಅಸಾಧ್ಯವಾಗಲಿದೆ.

ಕಾಪು ಕ್ಷೇತ್ರದ ಪಾದೂರಿನಲ್ಲಿ ಐಎಸ್‌ಪಿಆರ್‌ಎಲ್, ಎಲ್ಲೂರಿನಲ್ಲಿ ಯುಪಿಸಿಎಲ್ ಮತ್ತು ಪಡುಬಿದ್ರಿಯಲ್ಲಿ ಸುಜ್ಲಾನ್ ಯೋಜನೆಗಳು ಕಾರ್ಯಗತವಾಗಿವೆ. ಜನಜೀವನ ಅಸ್ತವ್ಯಸ್ತವಾಗಿದೆ. ಬೃಹತ್ ಉದ್ದಿಮೆಗಳು ಜನರ ಆರೋಗ್ಯ ಕೆಡಿಸಿ ನಂತರ ಆರೋಗ್ಯ ವಿಮೆ ಮಾಡುವುದರ ಮೊದಲೇ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು. ಕೇಂದ್ರ ಸರಕಾರ ಕಸ್ತೂರಿರಂಗನ್ ವರದಿಗೆ ಒಪ್ಪಿಗೆ ಸೂಚಿಸಲು ಮುಂದಾಗಿರುವುದರಿಂದ ಆ ಭಾಗದ ಜನರು ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ. ಸಾಮಾಜಿಕ ಅರಣ್ಯ ಹಾಗೂ 200 ಹಾಸಿಗೆ ಸಾಮಾರ್ಥ್ಯದ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಯುಪಿಸಿಎಲ್‌ಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ರಾಜ್ಯ ಬಜೆಟ್‌ನಲ್ಲಿ ಪಶ್ಚಿಮವಾಹಿನಿ ಯೋಜನೆಯಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗೆ ರೂ. 300 ಕೋಟಿ ಮೀಸಲಿರಿಸಲಾಗುವುದು. ಈ ಯೋಜನೆ ಮೂಲಕ ನದಿಗಳಿಗೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ನೀರು ಸಂಗ್ರಹಣೆಗೆ ಒತ್ತು ನೀಡಲಾಗುವುದು ಎಂದರು.

 ಶಾಂಭವಿ ನದಿಯಿಂದ 10 ಗ್ರಾಮಗಳಿಗೆ ಶಾಶ್ವತ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ರೂ. 58 ಕೋಟಿಯ ಯೋಜನೆಗೆ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಟೆಂಡರು ಹಂತದಲ್ಲಿದೆ. ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್) ಮೂಲಕ ಶಿರ್ವ-ಮುದರಂಗಡಿ ರಸ್ತೆ ವಿಸ್ತರಣೆ ಮಾಡಲಾಗುತ್ತದೆ. ಮುಂದಿನ ಹಂತದಲ್ಲಿ ಮುದರಂಗಡಿ-ನಂದಿಕೂರು ರಸ್ತೆಯನ್ನು ವಿಸ್ತರಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಿರ್ವ-ಪಿಲಾರು ರಸ್ತೆಯನ್ನು ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದ ಅವರು, ಕೇಂದ್ರಿಯ ರಸ್ತೆ ನಿಧಿಯಿಂದ ರೂ. 50 ಕೋಟಿ ಮಂಜೂರಾಗಿದೆ. ಎರಡನೇ ಹಂತದಲ್ಲಿಯೂ ಹಲವು ರಸ್ತೆ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿವಿಧ ಯೋಜನೆಗಳ ಮೂಲಕ ಸುಮಾರು ರು. 400 ಕೋಟಿ ಅನುದಾನವನ್ನು ಕಾಪು ಕ್ಷೇತ್ರಕ್ಕೆ ವಿನಿಯೋಗಿಸಲಾಗುವುದು ಎಂದು ನುಡಿದರು.

ಗ್ರಾಮೀಣ ಪ್ರದೇಶಗಳ ಪ್ರತಿ ಗ್ರಾಮದಲ್ಲಿ ಮನೆ-ಶಾಲೆ ಇದ್ದಂತೆ ಆಸ್ಪತ್ರೆಗಳೂ ಅಗತ್ಯವಾಗಿದೆ. ವೈದ್ಯ ವೃತ್ತಿ ಪವಿತ್ರವಾಗಿದ್ದು, ವೃತ್ತಿಯನ್ನು ದುರುಪಯೋಗ ಮಾಡದೆ ರೋಗಿಗಳ ಕಷ್ಟ ಸುಖಗಳಲ್ಲಿ ಸ್ಪಂದಿಸಿ ಉತ್ತಮ ಸೇವೆ ನೀಡಿ ಎಂದು ಜಿ.ಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ ಹಾರೈಸಿದರು.

ಕಟ್ಟಡ ನಿರ್ಮಾಣದ ಗುತ್ತಿಗೆದಾರ ಜಗದೀಶ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಶಿಲ್ಪಾ ಸುವರ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಸದಸ್ಯರಾದ ಮೈಕಲ್ ರಮೇಶ್ ಡಿಸೋಜ, ದಿನೇಶ್ ಕೋಟ್ಯಾನ್, ಕೇಶವ ಮೊಯಿಲಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಡೇವಿಡ್ ಡಿಸೋಜ, ಜಿತೇಂದ್ರ ಪುಟಾರ್ಡೋ, ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆ ಸಹಾಯಕ ಎಂಜಿನಿಯರ್ ರಘುಚಂದ್ರ ಹೆಬ್ಬಾರ್, ಡಿಎಚ್‌ಒ ಡಾ. ರೋಹಿಣಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ನಾಗರತ್ನ, ಮುದರಂಗಡಿ ಪಿಎಚ್‌ಸಿ ವೈದ್ಯಾಧಿಕಾರಿ ಸುಬ್ರಹ್ಮಣ್ಯ ಪ್ರಭು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News