ದೇರಳಕಟ್ಟೆ: ಚಿಲ್ಲರೆ ನಾಣ್ಯ ಕೋಡುತ್ತೇನೆಂದು ಎರಡುವರೆ ಸಾವಿರ ಪಂಗನಾಮ ಹಾಕಿದ ಖದೀಮ !
ಕೊಣಾಜೆ, ಮಾ.7: ದೇರಳಕಟ್ಟೆ ಜಂಕ್ಷನ್ಗೆ ಮಂಗಳವಾರ ಬಂದ ಅಪರಿಚಿತನೊಬ್ಬ ಪಕ್ಕದಲ್ಲಿದ್ದ ಜ್ಯೂಸ್ ಅಂಗಡಿಗೆ ತೆರಳಿ ಕಬ್ಬಿನ ಜ್ಯೂಸ್ ಕುಡಿದು, ದೇವಸ್ಥಾನದಲ್ಲಿರುವ ನಾಣ್ಯ ಕೊಡುತ್ತೇನೆಂದು ಹೇಳಿ ಎರಡುವರೇ ಸಾವಿರ ರೂಪಾಯಿ ಎಗರಿಸಿ ಪರಾರಿಯಾದ ಘಟನೆ ನಡೆದಿದೆ.
ದೇರಳಕಟ್ಟೆಯಲ್ಲಿರುವ ದೇವಸ್ಥಾನದ ಹೆಸರು ಹೇಳಿ ಅಪರಿಚಿತ ವ್ಯಕ್ತಿ ಬಂದಾಗ ದೇವಭಕ್ತನೆಂದು ಅಂಗಡಿ ಮಾಲೀಕ ರಝಾಕ್ ನಂಬಿದರು. ಅಪರಿಚಿತ ಆರೋಪಿಯು ದೇವಸ್ಥಾನದಲ್ಲಿ ಎರಡು ಸಾವಿರ ಮೊತ್ತದ ಒಂದು ಮತ್ತು ಎರಡು ರೂಪಾಯಿ ನಾಣ್ಯಗಳಿವೆ ಬೇಕಾದರೆ ಹೇಳಿ ಎಂದಿದ್ದ. ತನಗೆ ಐನೂರು ರೂಪಾಯಿಯ ನಾಣ್ಯಗಳು ಬೇಕೆಂದು ರಝಾಕ್ ತಿಳಿಸಿದ್ದಾರೆ.
ಅದಕ್ಕೆ ಒಪ್ಪದ ಖದೀಮ ಎರಡು ಸಾವಿರದ ಕಟ್ಟಿದೆ ಎಂದು ನೋಟು ಪಡೆದು ದೇವಸ್ಥಾನಕ್ಕೆ ಕರೆದೊಯ್ದಿದ್ದಾನೆ. ಒಂದು ಬಾರಿ ಒಳಗೆ ಹೋಗಿ ಬಂದ ಖದೀಮ ಎರಡೂವರೆ ಸಾವಿರದ ಕಟ್ಟಿದೆ ಎಂದು ಮತ್ತೆ ಐನೂರು ರೂಪಾಯಿ ಪಡೆದು ಎರಡನೇ ಬಾರಿ ಒಳ ಹೋಗಿದ್ದಾನೆ.
ಇತ್ತ ಹೊರಗಡೆ ನಿಂತು ರಝಾಕ್ ಕಾಯುತ್ತಿದ್ದಾಗ ಸ್ಥಳೀಯ ಪರಿಚಯಸ್ಥರೊಬ್ಬರು ಪ್ರಶ್ನಿಸಿದ್ದಾರೆ. ಈ ಸಂದರ್ಭ ರಝಾಕ್ ನಡೆದ ವಿಷಯ ತಿಳಿಸಿದ್ದಾರೆ.
ದೇವಸ್ಥಾನದೊಳಗೆ ಯಾರೂ ಇಲ್ಲದ್ದನ್ನು ಗಮನಿಸಿ ಹುಡುಕಾಡಿದಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ದೇವಸ್ಥಾನದ ಹೆಸರು ಹೇಳಿ ಬಂದ ವ್ಯಕ್ತಿಯನ್ನು ನಂಬಿದ್ದ ರಝಾಕ್ ಎರಡೂವರೇ ಸಾವಿರ ರೂಪಾಯಿ ಕಳೆದುಕೊಳ್ಳುವಂತಾಗಿದೆ.