ಕಸ್ತೂರಿ ರಂಗನ್ ವರದಿ ವಿರುದ್ಧ ರಾಜ್ಯದ ಸಂಸದರು ಧ್ವನಿಯೆತ್ತಲಿ: ಐವನ್
Update: 2017-03-08 13:08 IST
ಮಂಗಳೂರು, ಮಾ.8: ಕಸ್ತೂರಿ ರಂಗನ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸದಂತೆ ಕೇಂದ್ರ ಸರಕಾರವನ್ನು ಈಗಾಗಲೇ ರಾಜ್ಯ ಒತ್ತಾಯಿಸಿದೆ. ಈ ಬಗ್ಗೆ ರಾಜ್ಯದ ಸಂಸದರು ಕೂಡಾ ಧ್ವನಿಯೆತ್ತಲಿ ಎಂದು ವಿಧಾನ ಪರಿಷತ್ ಸಚೇತಕ ಐವನ್ ಡಿಸೋಜ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಜಾರಿಯಾದರೆ ರಾಜ್ಯದ ಬಹಳಷ್ಟು ಜನರು ಸಂಕಷ್ಟಕ್ಕೆ ಸಿಲುಕುವರು. ಆದ್ದರಿಂದ ವರದಿಯ ಯಥಾವತ್ ಜಾರಿಗೆ ರಾಜ್ಯವು ಆಕ್ಷೇಪವನ್ನು ಈಗಾಗಲೇ ಸಲ್ಲಿಸಿದೆ. ಆದರೆ ಕೇರಳ ಸರಕಾರ ಸಲ್ಲಿಸಿರುವ ಆಕ್ಷೇಪವನ್ನು ಮಾತ್ರ ಕೇಂದ್ರ ಸರಕಾರ ಪರಿಗಣಿಸಿದೆ. ರಾಜ್ಯದ ಮನವಿಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದರು.
ಈ ವರದಿ ಬಗ್ಗೆ ಸಂಸದರಾದ ನಳಿನ್ ಕುಮಾರ್, ಶೋಭಾ ಕರಂದ್ಲಾಜೆ ಚಕಾರವೆತ್ತುತ್ತಿಲ್ಲ. ಕೇಂದ್ರ ಪ್ರತಿನಿಧಿಸುವವರು ಯಾವುದೇ ಕೆಲಸ ಮಾಡದೆ ತೊಂದರೆಗೀಡು ಮಾಡಿದ್ದಾರೆ. ಸಂಸದರು ಕೂಡಲೇ ಪ್ರಧಾನಮಂತ್ರಿಗೆ ನಿಯೋಗ ಹೋಗಬೇಕು ಎಂದು ಒತ್ತಾಯಿಸಿದ್ದಾರೆ.