×
Ad

94ಸಿ, 94ಸಿಸಿ ಹಕ್ಕುಪತ್ರಗಳಿಗೆ ಶೀಘ್ರವೇ ಆದೇಶ: ಸಚಿವ ಕಾಗೋಡು

Update: 2017-03-09 21:38 IST

ಉಡುಪಿ, ಮಾ.9: ಸಾಗುವಳಿ ಭೂಮಿ ಮತ್ತು ಮನೆ ನಿವೇಶನಕ್ಕೆ ಸಂಬಂಧಿಸಿದಂತೆ 94ಸಿ ಮತ್ತು 94ಸಿಸಿಯಡಿ ಅರ್ಹರಿಗೆ ಹಕ್ಕುಪತ್ರಗಳನ್ನು ನೀಡಲು ಕಂದಾಯ ಇಲಾಖೆಯಿಂದ ಸೂಕ್ತ ಆದೇಶವನ್ನು ನೀಡಲಾಗುವುದು. ಈ ಆದೇಶದಿಂದಾಗಿ ಶೀಘ್ರದಲ್ಲೇ ಜನಪರವಾಗಿ ಕೆಲಸ ಮಾಡಲು ಅನುಕೂಲ ವಾಗಲಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಗುರುವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಮೂನೆ 50, 53 ಹಾಗೂ 94ಸಿ ಮತ್ತು 94ಸಿಸಿ ಪ್ರಕರಣಗಳ ವಿಲೆವಾರಿ ಪ್ರಗತಿಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಜಮೀನಿನ ವಿಶೇಷ ಹಕ್ಕು ಕಾಯಿದೆಯಡಿ ಸರಕಾರಿ ಜಾಗವನ್ನು ಗುರುತಿಸಿ ಅರ್ಹರಿಗೆ ಭೂಮಿಯನ್ನು ಹಂಚಲಾಗುವುದು ಎಂದರು.

ಗೋಮಾಳಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಆದೇಶ ಹೊರಡಿಸಲಾಗಿದ್ದು, ಈ ಆದೇಶ ಬಂದಿರುವುದಾಗಿ ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ಕುಮ್ಕಿ ಮತ್ತು ಡೀಮ್ಡ್ ಪಾರೆಸ್ಟ್ ಸಂಬಂಧ ಕ್ಯಾಬಿನೆಟ್ ಉಪಸಮಿತಿಯು ಪರಿಶೀಲಿಸು ತ್ತಿದ್ದು, 15 ದಿನಗಳೊಳಗಾಗಿ ನಿರ್ಣಯ ತೆಗೆದುಕೊಂಡು ಆದೇಶ ಹೊರಡಿಸಲಾಗುವುದು ಎಂದು ಕಾಗೋಡು ತಿಮ್ಮಪ್ಪ ನುಡಿದರು.

ಕುಮ್ಕಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಇದನ್ನು ಸರಕಾರಿ ಜಮೀನು ಎಂದು ಆದೇಶ ನೀಡಿದ್ದು, ಈ ಬಗ್ಗೆ ಸುತ್ತೋಲೆ ಕಳುಹಿಸಲಾಗುವುದು. ಈ ಸುತ್ತೋಲೆಯನ್ನು ಅನುಷ್ಠಾನಕ್ಕೆ ತನ್ನಿ ಎಂದು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಅರಣ್ಯ ಹಕ್ಕು ಕಾಯಿದೆಯಡಿ ಸಂಬಂಧಪಟ್ಟ ಗ್ರಾಮ ಅರಣ್ಯ ಸಮಿತಿಗೆ ಇಂದೂ ಅರ್ಜಿ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಗೋಮಾಳ ವಿರಹಿತ ಗೊಳಿಸಲು ಈಗಾಗಲೇ ಸುತ್ತೋಲೆ ಕಳುಹಿಸಲಾಗಿದ್ದು ಸುತ್ತೋಲೆಗಳನ್ನು ತಹಶೀಲ್ದಾರ್‌ಗಳು ಸ್ಪಷ್ಟವಾಗಿ ಓದಿ ಅನುಷ್ಠಾನಕ್ಕೆ ತನ್ನಿ ಎಂದು ಸಚಿವರು ಸ್ಪಷ್ಟ ಸೂಚನೆ ನೀಡಿದರು.

ಪ್ರಸಕ್ತ ಪರಿಸ್ಥಿತಿಯಲ್ಲೂ ಅಜ್ಞಾನದಿಂದಾಗಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸದಿದ್ದರೆ ಅರ್ಜಿಯನ್ನು ಈಗಲೂ ಸ್ವೀಕರಿಸಿ ಎಂದು ತಹಶೀಲ್ದಾರ್‌ಗಳಿಗೆ ಹೇಳಿದ ಸಚಿವರು, ಬಾಪೂಜಿ ಸೇವಾ ಕೇಂದ್ರದಲ್ಲಿ ನೀಡುವ ಸೇವೆಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು. ಬರ, ಕುಡಿಯುವ ನೀರು, ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಹಣಕ್ಕೆ ಕೊರತೆ ಇಲ್ಲ. ಅಂದಾಜುಪಟ್ಟಿ ತಯಾರಿಸಿ ಕಳುಹಿಸಿಕೊಡಲು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಸೂಚನೆ ನೀಡಿದರು.

ಅರಣ್ಯ ಹಕ್ಕು ಸಮಿತಿ ಶಿವಮೊಗ್ಗ ಮಾದರಿಯನ್ನು ಅನುಸರಿಸಿದರೆ ಭೂಮಿ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಯಲಿದೆ ಎಂದರು. ಈ ಸಂಬಂಧ ಅರಣ್ಯ ಸಚಿವರೊಂದಿಗೆ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಪ್ರತ್ಯೇಕ ಸಭೆ ನಡೆಸುವುದಾಗಿಯೂ ಸಚಿವರು ಭರವಸೆ ನೀಡಿದರು.

ಪೋಡಿ ಮುಕ್ತ ಗ್ರಾಮ, ಪಿಂಚಣಿ ಅದಾಲತ್, ಸಾಮಾಜಿಕ ದ್ರತಾ ಯೋಜನೆಗಳ ಬಗ್ಗೆ, ಸರ್ವೇಯರ್ ಬಗ್ಗೆ, ಹುದ್ದೆ ಮಂಜೂರಾತಿ ಬಗ್ಗೆ, ವಿದ್ಯಾರ್ಥಿ ನಿಲಯಗಳಿಗೆ ಭೂಮಿ ಕಾಯ್ದಿರಿಸುವಿಕೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಗ್ರಾಪಂಗಳು ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸ ಬೇಕು ಎಂದ ಸಚಿವರು, ಕಳುಹಿಸಿದ ಸುತ್ತೋಲೆಗಳನ್ನು ಓದಿ ಜನರಿಗೆ ಮಾಹಿತಿ ಕೊಡಿ ಎಂದು ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕರಾದ ವಿನಯ ಕುಮಾರ್ ಸೊರಕೆ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಗೋಪಾಲ್ ಪೂಜಾರಿ ಅಕ್ರಮ ಸಕ್ರಮ ಬೈಠಕ್ ಹಾಗೂ ತಮ್ಮ ವ್ಯಾಪ್ತಿಯ ಜನರ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.

ಅಪರ ಜಿಲ್ಲಾಧಿಕಾರಿ ಅನುರಾಧ, ಸಹಾಯಕ ಆಯುಕ್ತರಾದ ಶಿಲ್ಪಾನಾಗ್, ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರ್‌ಗಳು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News