ಮಹಿಳೆಯರಿಗೆ ನೈತಿಕ ಸ್ಥೈರ್ಯ ನೀಡಲು ಮಹಿಳಾ ಠಾಣೆ ಸಹಕಾರಿ : ಸಚಿವ ರಮಾನಾಥ ರೈ

Update: 2017-03-11 09:28 GMT

ಪುತ್ತೂರು,ಮಾ.11: ಮಹಿಳೆಯರು ಪುರುಷರಿಂದ ಹೆಚ್ಚು ಪ್ರಾಮಾಣಿಕರಾಗಿದ್ದು, ಅವರಿಗೆ ಹೆಚ್ಚಿನ ಸಂರಕ್ಷಣೆ ಮತ್ತು ಪ್ರಾಶಸ್ತ್ಯ ನೀಡುವುದು ಇಂದಿನ ಅನಿವಾರ್ಯತೆಯಾಗಿದೆ. ಮಹಿಳೆಯರಿಗೆ ನೈತಿಕ ಸ್ಥೈರ್ಯ ನೀಡಲು ಮಹಿಳಾ ಠಾಣೆ ಸಹಕಾರಿಯಾಗಿದೆ ಎಂದು ರಾಜ್ಯ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಅವರು ಶನಿವಾರ ಪುತ್ತೂರಿನ ಸಂಚಾರಿ ಪೊಲೀಸ್ ಠಾಣಾ ಆವರಣದಲ್ಲಿ ನೂತನ ಮಹಿಳಾ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಮಾತನಾಡಿದರು. ಮೀಸಲಾತಿಯ ಮೂಲಕ ಮಹಿಳೆಯರಿಗೆ ಸಾಕಷ್ಟು ಅಧಿಕಾರ ಸ್ಥಾನಮಾನಗಳನ್ನು ನೀಡಲಾಗಿದೆ. ಮಹಿಳೆಯರಲ್ಲಿ ಸ್ವಾಭಿಮಾನ ಬೆಳೆಯಲು, ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಲು, ಹೆಣ್ಣು ಮಕ್ಕಳಲ್ಲಿ ಶಕ್ತಿ ತುಂಬಲು ಅವರಿಗೆ ನೈತಿಕ ಬೆಂಬಲ ಬೇಕಾಗಿದೆ. ಅತ್ಯಾಚಾರ, ಅನಾಚಾರ ಹೆಚ್ಚಾಗುತ್ತಿರುವ ಇಂದಿನ ಸಮಾಜದಲ್ಲಿ ಮಹಿಳೆಯ ಸರ್ವತೋಮುಖ ರಕ್ಷಣೆ ಪೊಲೀಸರ ಮೇಲಿದೆ ಎಂದರು.

ಪೊಲೀಸ್ ಯಂತ್ರಕ್ಕೆ ಸವಾಲಾಗಿರುವ ಸಮಾಜ ಕಂಠಕ ಶಕ್ತಿಗಳ ಕೆಲಸಕ್ಕೆ ಕಡಿವಾಣ ಹಾಕುವ ಕೆಲಸವನ್ನು ಇಲಾಖೆ ಯಾವುದೇ ಮರ್ಜಿಗೆ ಒಳಗಾಗದೆ ನಡೆಸಬೇಕು ಎಂದ ಅವರು ಪೊಲೀಸರ ಬೆತ್ತಕ್ಕೆ ಮಾನವ ಹಕ್ಕು ಅಡ್ಡಿಯಾಗುತ್ತದೆ ಆದರೆ ಪೆನ್ನು ಕೆಲಸ ಮಾಡಿದ್ರೆ ಅನ್ಯಾಯವನ್ನು ತಡೆಯಬಹುದು. ಬೆತ್ತಕ್ಕೆ ಕೆಲಸ ಕೊಡುವ ಬದಲು ಪೆನ್ನಿಗೆ ಕೆಲಸ ನೀಡಿ ಎಂದರು. ಪೊಲೀಸರು ಎಂದೂ ಜಾತಿ, ಧರ್ಮ, ಕೋಮುವಾದ, ಮತೀಯ ಭಾವನೆಗೆ ಮನ್ನಣೆ ನೀಡದೆ ಎಲ್ಲಾ ಸಮಾಜದ ವಿಶ್ವಾಸ ಗಳಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ತಾನು 2014ರಲ್ಲಿಯೇ ಮಹಿಳಾ ಠಾಣೆಗೆ ಹಾಗೂ ಇಲಾಖೆಯಲ್ಲಿ 20% ಮಹಿಳೆಯರನ್ನು ನೇಮಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಅದರಂತೆ ನಿರ್ಣಯ ಅಂಗೀಕಾರವಾಗಿತ್ತು. ನಮ್ಮ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರಸಭೆ, ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರೇ ಪ್ರತಿನಿಧಿಸುತ್ತಿದ್ದು ಇದೀಗ ಮಹಿಳಾ ಠಾಣೆ ಮಂಜೂರುಗೊಂಡಿರುವುದು ಮಹಿಳೆಯರು ಹೆಮ್ಮೆ ಪಡುವ ವಿಚಾರವಾಗಿದೆ. ಇಲ್ಲಿ ಎಲ್ಲಾ ಮಹಿಳೆಯರಿಗೂ ನ್ಯಾಯ, ನೆಮ್ಮದಿಯ ಬದುಕು ಸಿಗುವಂತಾಗಲಿ ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ತಾ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ್ ಕೌಶಲ್ ಶೆಟ್ಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಸಿ.ಬಿ. ವೇದಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಪ್ರೊ. ಬಿ.ಜೆ.ಸುವರ್ಣ ಕಾರ್ಯಕ್ರಮ ನಿರೂಪಸಿ ಸ್ವಾಗತಿಸಿದರು. ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಭೂಷಣ್ ಗುಲಾಬ್‌ರಾವ್ ಬೊರಸೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News