ಬ್ರಹ್ಮಾವರ: ವಿದ್ಯುತ್ ಶಾಕ್ ನಿಂದ ಓರ್ವ ಮೃತ್ಯು

Update: 2017-03-13 16:59 GMT

ಬ್ರಹ್ಮಾವರ, ಮಾ.13: ಮಾವಿನ ಮರದಿಂದ ಕಾಯಿ ಕೊಯ್ಯುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ಓರ್ವ ಮೃತಪಟ್ಟು, ಇನ್ನೋರ್ವ ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ 9:30ರ ಸುಮಾರಿಗೆ ಚಾಂತಾರು ಗ್ರಾಮದ ಕಲ್ಲುರಾಶಿ ಎಂಬಲ್ಲಿ ನಡೆದಿದೆ.

 ಚಾಂತಾರಿನ ಜಯಂತ(25) ಎಂಬವರು ಮೃತಪಟ್ಟಿದ್ದು, ನಾಗರಾಜ್ (27) ಎಂಬವರು ಗಾಯಗೊಂಡಿದ್ದಾರೆ.

ಇವರಿಬ್ಬರು ಮತ್ತು ಶಿವ, ದಿನೇಶ್ ಎಂಬವರು ಮಟಪಾಡಿ-ಕುಂಜಾಲು ರಸ್ತೆಯ ಬಳಿಯ ಸರಕಾರಿ ಜಾಗದಲ್ಲಿ ರುವ ಮಾವಿನ ಮರದ ಮಿಡಿಗಳನ್ನು ಕೊಯ್ಯಲು ಹೋಗಿದ್ದು, ಅಲ್ಲೇ ಪಕ್ಕದಲ್ಲಿರುವ ಬೇಲಿಗೆ ಹಾಕಿರುವ ತಂತಿಯನ್ನು ತುಂಡು ಮಾಡಿ ಅದನ್ನು ಮಾವಿನ ಮಿಡಿಯನ್ನು ಕೆಳಗೆ ಇಳಿಸಲು ಬಳಸಿಕೊಂಡಿದ್ದರು.

 ಜಯಂತ್ ಮಿಡಿಯನ್ನು ಕೊಯ್ದು ತಂತಿಗೆ ಕಟ್ಟಿ ಕೆಳಗೆ ಇಳಿಸುವಾಗ ತಂತಿಯು ಆಕಸ್ಮಿಕವಾಗಿ ಮಾವಿನ ಮರದ ಸಮೀಪದಲ್ಲಿರುವ ಹೈ-ಟೆನ್ಶನ್ ವಿದ್ಯುತ್ ತಂತಿಗೆ ತಗಲಿತೆನ್ನಲಾಗಿದೆ. ಇದರಿಂದ ವಿದ್ಯುತ್ ಆಘಾತಕ್ಕೆ ಒಳಗಾದ ಜಯಂತ್ ಮರದಿಂದ ಕೆಳಗೆ ಬಿದ್ದು ಮೃತಪಟ್ಟರು. ಇವರನ್ನು ರಕ್ಷಿಸಲು ಹೋದ ನಾಗರಾಜ್ಗೂ ವಿದ್ಯುತ್ ಆಘಾತ ಆಗಿ ಮರದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News