×
Ad

ನೇಮೋತ್ಸವ ಹೆಸರಿನಲ್ಲಿ ಜಾತಿ ನಿಂದನೆ ಆರೋಪ: ಮಾ.8ರಂದು ಅಹೋರಾತ್ರಿ ಪ್ರತಿಭಟನೆಯ ಎಚ್ಚರಿಕೆ

Update: 2017-03-14 15:24 IST

ಮಂಗಳೂರು, ಮಾ.14: ಕುಳಾಯಿ ಚಿತ್ರಾಪುರದ ಮಹಾಂಕಾಳಿ ದೈವಸ್ಥಾನದಲ್ಲಿ ಕೊರಗ ತನಿಯ ಹಾಗೂ ಏಳು ಕೊರಪೊಲುಗಳ ನೇಮೋತ್ಸವದ ಮೂಲಕ ಕೊರಗ ಸಮುದಾಯವನ್ನು ಅವಮಾನಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿರುವ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟವು, ನೇಮೋತ್ಸವ ನಿಲ್ಲಿಸದಿದ್ದರೆ ಮಾ. 18ರಂದು ಬೆಳಗ್ಗಿನಿಂದ 19ರ ಮುಂಜಾನೆವರೆಗೆ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.

 ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎಂ. ಸುಂದರ, ಕೊರಗ ಸಮುದಾಯದ ಜನಸಂಖ್ಯೆ ಹಲವಾರು ಕಾರಣಗಳಿಂದ ಕ್ಷೀಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಮುದಾಯವನ್ನು ಇಂದಿಗೂ ಹಲವಾರು ರೀತಿಯಲ್ಲಿ ಅವಮಾನಿಸುವ ಸಂಪ್ರದಾಯ ಮುಂದುವರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಆಚರಣೆಯಲ್ಲಿಯೇ ಇಲ್ಲದ ಆಚರಣೆಯನ್ನು ಕಟ್ಟು ಕತೆಯ ಮೂಲಕ ಜಾರಿಗೊಳಿಸಿ ಸಮುದಾಯವನ್ನು ಇನ್ನೊಂದು ರೀತಿಯಲ್ಲಿ ಅವಮಾನಿಸುವುದನ್ನು ಖಂಡಿಸುವುದಾಗಿ ಹೇಳಿದರು.

ಏಳು ಕೊರಪೊಲು ಎಂದು ಹೇಳುವುದೇ ಒಂದು ವಿಕೃತ ಮನಸ್ಸು ಈ ಮೂಲಕ ಕೊರಗ ಸಮುದಾಯದಲ್ಲಿ ಜಾರಿಯಲ್ಲೇ ಇಲ್ಲದ ಬಹುಪತ್ನಿತ್ವವನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದು ಸ್ಪಷ್ಟವಾಗಿ ಸ್ತ್ರೀಯರನ್ನು ಅವಮಾನಿಸುವ ಪ್ರತೀಕತವಾಗಿದೆ ಮತ್ತು ಸಮುದಾಯದ ಮಹಿಳೆಯರ ಘನತೆ- ಗೌರವಗಳಿಗೆ ಧಕ್ಕೆ ತರುವಂತದ್ದಾಗಿದೆ ಎಂದು ಎಂ. ಸುಂದರ ಅಸಮಾಧಾನ ವ್ಯಕ್ತಪಡಿಸಿದರು.

ಕರಾವಳಿಯಲ್ಲಿ ಕೊರಗ ತನಿಯನ್ನು ಆರಾಧಿಸಿಕೊಂಡು ಬರಲಾಗುತ್ತಿದೆ. ಈ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಆದರೆ ದಂಪತಿಗೆ ಹುಟ್ಟಿದ ಕೊರಗತನಿಯನ್ನು ಈಶ್ವರ- ಪಾವರ್ತಿ ಮಗ, ಆತನಿಗೆ ಏಳು ಮಡದಿಯರು ಎಂಬುದನ್ನು ಬಿಂಬಿಸಲು ಹೊರಟಿರುವುದನ್ನು ಸಮುದಾಯ ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ಮಾ. 17 ಮತ್ತು 18ರಂದು ನಡೆಸಲುದ್ದೇಶಿಸಿರುವ ನೇಮೋತ್ಸವವನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ, ನೇಮೋತ್ಸವ ನಿಲ್ಲುವವರೆಗೆ ಕೊರಗ ಸಮುದಾಯ ಪ್ರತಿಭಟನೆ ನಡೆಸಲಿದೆ ಎಂದರು.

ಈಗಾಗಲೇ ಕೊರಗಜ್ಜನ ಕೋಲದ ಸಂದರ್ಭದಲ್ಲಿ ಕೆಲವೆಡೆ ಕೋಲ ಕಟ್ಟುವವರು ಅಶ್ಲೀಲ ಪದಗಳನ್ನು ಉಪಯೋಗಿಸುತ್ತಿರುವ ಬಗ್ಗೆ ನಮ್ಮಲ್ಲಿ ದಾಖಲೆ ಇದೆ. ಈಗಾಗಲೇ ಕೋಲದ ಸಂದರ್ಭ ಕೋಲ ನಡೆಯುವ ಮೊದಲೇ ಕೋಲ ಕಟ್ಟುವವರಿಗೆ ಮದ್ಯವನ್ನು ನೀಡುವಂತಹ ಪ್ರಸಂಗಳೂ ಇವೆ. ಈ ಮೂಲಕ ಸಮುದಾಯ ಕುಡಿತವಿಲ್ಲದೆ ಬದುಕಲು ಸಾಧ್ಯವಿಲ್ಲ ಎಂಬುದನ್ನು ಬಿಂಬಿಸುವ ಪ್ರಯತ್ನಗಳೂ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಇದೀ ಮಹಿಳೆಯರನ್ನು ವಿಚಿತ್ರವಾಗಿ ಚಿತ್ರಿಸಲು ಹೊರಟಿರುವುದು ಖಂಡನೀಯ ಎಂದು ಒಕ್ಕೂಟದ ಕಾರ್ಯದರ್ಶಿ ಉಡುಪಿಯ ಗೌರಿ ಆಕ್ಷೇಪಿಸಿದರು.

ಕೊರಗ ಸಮುದಾಯದ ನ್ಯಾಯ ವ್ಯವಸ್ಥೆಯ ಅಧ್ಯಕ್ಷೆ, ಕಾಸರಗೋಡಿನ ಸುಮತಿ, ಒಕ್ಕೂಟದ ಉಪಾಧ್ಯಕ್ಷ ಕೊಗ್ಗ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News