ಮಾ.16ರಂದು ಅಂಚೆ ನೌಕರರಿಂದ ಮುಷ್ಕರ
ಉಡುಪಿ, ಮಾ.14: ಏಳನೆ ವೇತನ ಆಯೋಗದ ಶಿಫಾರಸ್ಸುಗಳಲ್ಲಿರುವ ನ್ಯೂನತೆಗಳ ಪುನರ್ಪರಿಶೀಲನೆಗಾಗಿ ಕೇಂದ್ರ ಸರಕಾರದ ಗಮನ ಸೆಳೆ ಯಲು ಅಂಚೆ ನೌಕರರು ಸೇರಿದಂತೆ ಕೇಂದ್ರ ಸರಕಾರಿ ನೌಕರರ ಸಂಘ ಮಾ.16ರಂದು ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದು, ಈ ಪ್ರಯುಕ್ತ ಬೆಳಗ್ಗೆ 8ಗಂಟೆಯಿಂದ ಉಡುಪಿಯ ಪ್ರಧಾನ ಅಂಚೆ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಅಂಚೆ ನೌಕರರ ಸಂಘ ಗ್ರೂಪ್ ಸಿ ಇದರ ಕಾರ್ಯದರ್ಶಿ ಸುರೇಶ್ ಕೆ. ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಅಂಚೆ ನೌಕರರನ್ನು ಖಾಯಂ ನೌಕರರಂತೆ ಪರಿಗಣಿಸಿ ವೇತನ ಹಾಗೂ ಎಲ್ಲ ಭತ್ಯೆಗಳನ್ನು ನೀಡಬೇಕು. ಮನೆ ಬಾಡಿಗೆ ಭತ್ಯೆಯನ್ನು ಶೇ.30, ಶೇ.20 ಹಾಗೂ ಶೇ.10ರಷ್ಟು ಉಳಿಸಿಕೊಂಡು ಸಂಚಾರ ಭತ್ಯೆಯನ್ನು ಹೆಚ್ಚಿಸ ಬೇಕು. 7ನೆ ವೇತನ ಆಯೋಗದ ಶಿಫಾರಸ್ಸಿನಿಂದ ಆಗಿರುವ ಎಲ್ಲ ರೀತಿಯ ತಾರತಮ್ಯಗಳನ್ನು ಸಮಯ ಪರಿಮಿತಿಯೊಳಗೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಪಿಎಫ್, ಆರ್ಡಿಎ ಕಾಯ್ದೆ, ಹೊಸ ಪಿಂಚಣಿ ಪದ್ಧತಿಯನ್ನು ರದ್ದು ಗೊಳಿಸಿ ಎಲ್ಲ ಕೇಂದ್ರ ಸರಕಾರಿ ನೌಕರರಿಗೂ ಒಂದೇ ರೀತಿಯ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ನೀಡಬೇಕು. ದಿನಗೂಲಿ, ಗುತ್ತಿಗೆ, ಹಂಗಾಮಿ ನೌಕರರನ್ನು ಖಾಯಂಗೊಳಿಸಿ ಅವರಿಗೆ ಸಮಾನ ವೇತನ ಹಾಗೂ ಸೌಲಭ್ಯಗಳನ್ನು ನೀಡಬೇಕು. ಸರಕಾರಿ ಕೆಲಸಗಳನ್ನು ಹೊರಗುತ್ತಿಗೆ ಕೊಡು ವುದನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಚ್.ಕೆ.ಭಾಸ್ಕರ್ ಶೆಟ್ಟಿ, ಕಾರ್ಯ ದರ್ಶಿ ರಾಜೇಶ್ ಎಂ.ಕೆ., ಬಿ.ವಿಜಯ ನಾಯರಿ, ಜನಾರ್ದನ್ ಉಪಸ್ಥಿತರಿದ್ದರು.