ಡಾ.ರಾಘವ ನಂಬಿಯಾರ್ಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ
ಉಡುಪಿ, ಮಾ.14: ಯಕ್ಷಗಾನ ವಿದ್ವಾಂಸ, ಹಿರಿಯ ಪತ್ರಕರ್ತ, ಲೇಖಕ ಡಾ.ಕೆ.ಎಂ.ರಾಘವ ನಂಬಿಯಾರ್ ಅವರನ್ನು 2017ನೇ ಸಾಲಿನ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಣಿಪಾಲ ವಿವಿ ಆಡಳಿತ ಕ್ಕೊಳಪಟ್ಟ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ವರದೇಶ ಹಿರೇಗಂಗೆ ತಿಳಿಸಿದ್ದಾರೆ.
ಯಕ್ಷಗಾನದಲ್ಲಿ ಕಳೆದ 50 ವರ್ಷಗಳಿಂದ ಅರ್ಥಗಾರಿಕೆ, ಚೆಂಡೆಮದ್ದಳೆ ವಾದನ, ಭಾಗವತಿಕೆ, ಪ್ರಸಂಗರಚನೆ, ರಂಗದ ಪುನರುಜ್ಜೀವನದ ಪ್ರಯತ್ನ, ದೀವಟಿಕೆ ಬೆಳಕಿನ ಆಟ ಇತ್ಯಾದಿಗಳಿಂದ ಪರಿಚಿತರಾದ ಡಾ.ರಾಘವ ನಂಬಿಯಾರ್, ಮೂರು ದಶಕಗಳಿಗೂ ಅಧಿಕ ಕಾಲ ಪತ್ರಕರ್ತರಾಗಿ ಕನ್ನಡ ಭಾಷೆ ಸಂಸ್ಕೃತಿಗಳಿಗೆ ಸೇವೆ ಸಲ್ಲಿಸಿದವರು.
ಯಕ್ಷಗಾನ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸುಮಾರು 22 ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಡಾ.ಜಿ.ಶಂ.ಪ ಪ್ರಶಸ್ತಿ, ಮಂಗಳೂರು ವಿವಿ ಯಕ್ಷಮಂಗಳ ಕೃತಿ ಪ್ರಶಸ್ತಿ ಲಭಿಸಿವೆ. ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನ ಹಾಗು ಮುಂಬೈ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಅಧ್ಯತೆಯ ಗೌರವಗಳು ಇವರಿಗೆ ಲಭಿಸಿವೆ.