×
Ad

ವೈಕಮ್ ಬಶೀರ್‌ ‘ಗೋಡೆಗಳು’ ಕಥೆಯಾಧಾರಿತ ನಾಟಕ ಪ್ರದರ್ಶನ

Update: 2017-03-14 22:10 IST

ಮಂಗಳೂರು.ಮಾ,13:ಮಲಯಾಳಂ ಭಾಷೆಯ ಖ್ಯಾತ ಕತೆಗಾರ ವೈಖಂ ಮುಹಮ್ಮದ್ ಬಶೀರ್‌ರವರ ಕಥೆಯನ್ನಾಧರಿಸಿದ ‘ಗೋಡೆಗಳು ’ ನಾಟಕ ಪ್ರದರ್ಶನ ನಗರದ ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಸಭಾಂಗಣದಲ್ಲಿ ನಗರದ ಸಹಮತ ತಂಡದಿಂದ ಇಂದು ಪ್ರದರ್ಶನಗೊಂಡಿತು.

   ವೈಕಂ ಮುಹಮ್ಮದ್ ಬಶೀರರ ಮಲಯಾಳಂ ಭಾಷೆಯ ಕತೆಯನ್ನು ಎಸ್.ಗಂಗಾಧರ ಯ್ಯನವರು ಕನ್ನಡಕ್ಕೆ ಅನುವಾದಿಸಿದ್ದು.ಈ ಕಥೆಯನ್ನು ಬಳಸಿಕೊಂಡು ಸಹಮತದ ಐವನ್ ಡಿ ಸಿಲ್ವ ,ನಾದ ಮಣಿ ನಾಲ್ಕೂರು,ಶ್ರೀನಿವಾಸ ಕುಪ್ಪಿಲ,ಮಯೂರಿ ಬೋಳಾರ,ರಾಜೇಶ್ ಕೆ,ರಕ್ಷಿತ್ ಬಂಗೇರಾ,ಕಿಟ್ಟು ಬಂಬಿಲ,ಪ್ರತಿಭಾ ಕುಡ್ತಡ್ಕ,ನಾಗೇಶ್ ಎಮ್‌ರವರನ್ನೊಳಗೊಂಡ ಗೋಡೆಗಳು ನಾಟಕ ಪ್ರದರ್ಶಿಸಿದೆ.

     ಜೈಲಿನ ಗಂಟೆಯ ಸದ್ದಿನೊಂದಿಗೆ ಮಂದ ಬೆಳಕಿನ ನಡುವೆ ಆರಂಭವಾಗುವ ನಾಟಕ ದೇಶದ ಸ್ವಾತಂತ್ರ ಸಮರದ ಹೊತ್ತಿನಲ್ಲಿ ಕ್ರಾಂತಿಕಾರಿ ಬರಹ,ರಾಜದ್ರೋಹ ಅಪಾದನೆಯಲ್ಲಿ ರಾಜಕೀಯ ಖೈದಿಯಾಗಿ ಜೈಲು ಸೇರುವ ಬಶೀರ್,ಸೆಂಟ್ರಲ್ ಜೈಲಿನ ಅಸಹನೀಯ ಬದುಕಿನ ನಡುವೆಯೂ ಗುಲಾಬಿ ಗಿಡಗಳನ್ನು ನೆಟ್ಟು ತನ್ನ ಸುತ್ತ ಸಹನೀಯವಾದ ವಾತವರಣವನ್ನು ನಿರ್ಮಿಸಿಕೊಳ್ಳುವ ಕಥೆಯನ್ನು ರಂಗದಲ್ಲಿ ನಟರ ಮೂಲಕ ಪ್ರಸ್ತುತ ಪಡಿಸಲಾಗಿದೆ.ಬಿಡುಗಡೆ ಸಂದರ್ಭದಲ್ಲಿ ಬಶೀರ್ ಹೇಳುವ ....ನಾನೆ ತೋಟ ನಾನೆ ಹೂ.....ಬಿಡುಗಡೆಯ ಸ್ವಾತಂತ್ರ ಯಾರಿಗೆ ಬೇಕು ಎಂದು ಒಲ್ಲದ ಮನಸ್ಸಿನಿಂದ ಜೈಲಿನಿಂದ ಬಿಡುಗಡೆಯಾಗಿ ತೆರಳುವುದು,ಕೊನೆಯಲ್ಲಿ ನಾರಾಯಣಿ ನಿನಗೆ ಶುಭವಾಗಲಿ ...ಶುಭಹಾರೈಕೆ ಯೊಂದಿಗೆ ನಾಟಕ ಕೊನೆಗೊಳ್ಳುತ್ತದೆ.

    ಜೈಲಿನಲ್ಲಿ ಹೆಣ್ಣು ಮತ್ತು ಗಂಡು ಖೈದಿಗಳ ನಡುವೆ ದೈತ್ಯ ಗೋಡೆಗಳ ಆವರಣ ಇದ್ದರೂ ಅವುಗಳ ನಡುವೆ ಇದ್ದ ಬಶೀರ್ ಮತ್ತು ನಾರಾಯಣಿ ನಡುವೆ ಪ್ರೀತಿ ಹುಟ್ಟುತ್ತದೆ.ಜೈಲಿನೊಳಗೂ ಈ ಪ್ರೆಮ ಹಿತಕರವಾದ ಸ್ವತಂತ್ರ ಭಾವನೆಯನ್ನು ಮೂಡಿಸುತ್ತದೆ.ಜೈಲಿನಿಂದ ಹೊರ ಬರುವ ಸಮಯ ಬಂದಾಗ ಆ ಸ್ವತಂತ್ರವೇ ಬಶೀರ್‌ಗೆ ಬಂಧನವಾಗಿ ಭಾಸವಾಗುವುದನ್ನು ಸಹಮತ ತಂಡ ನೆರಳು-ಬೆಳಕುಗಳ ಸಹಾಯದೊಂದಿಗೆ ಭಾವತೀರೇಕಗಳಿಲ್ಲದೆ ಕಥೆಯ ಆಶಯಕ್ಕೆ ಧಕ್ಕೆಯಾಗದಂತೆ ಮನೋಜ್ಞವಾಗಿ ರಂಗದ ಮೇಲೆ ತಂದಿದ್ದಾರೆ.

ನಾಟಕದಲ್ಲಿ ನಾಯಕನ ಪಾತ್ರಗಳನ್ನು ಸಾಮೂಹಿಕವಾಗಿ ನಟರು ಅಭಿನಯಿಸುವ ಮೂಲಕ ಗೋಡೆಗಳು ನಾಟಕ ಸಾಮೂಹಿಕ ಅಭಿನಯದ ನಾಟಕವಾಗಿ ಮೂಡಿ ಬಂದಿದೆ.(ನಾಯಕ-ನಾಯಕಿ ಪ್ರಧಾನ ನಾಟಕಗಳಿಗಿಂತ ಭಿನ್ನವಾಗಿ)ಕಥೆಯ ಆಶಯಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ನಟರ ಪ್ರಯತ್ನ ಸಾಗಿರುವುದು ಉತ್ತಮ ಬೆಳವಣಿಗೆ.

ಆಸಕ್ತರು ವಿದ್ಯಾರ್ಥಿಗಳನ್ನೊಳಗೊಂಡ ಹವ್ಯಾಸಿ ರಂಗ ಕಲಾವಿದರನ್ನೊಳಗೊಂಡ ಸಹಮತ ತಂಡದಲ್ಲಿ ಹರೀಶ್ ಕಾಣೆ ಕೋಡಿ ಬೆಳಕು ನಿರ್ವಹಣೆ ನಡೆಸಿದ್ದಾರೆ.

    ನಾಟಕದ ಹೆಸರು ಸೂಚಿಸುವ ‘ಗೋಡೆಗಳು’ ಮನುಷ್ಯ ಸಂಬಂಧಗಳ ನಡುವೆ ಅಡ್ಡಿಯಾಗಿ ನಿಂತಿರುವ ಜಾತಿ,ಧರ್ಮ,ಭಾಷೆ,ದೇಶಗಳ ಅಂತಸ್ತುಗಳ,ಅಹಂಗಳ ಪ್ರತೀಕವಾಗಿದೆ.ಈ ಎಲ್ಲೆಗಳನ್ನು ಮೀರಿದ ಮಾನವ ಸಂಬಂಧಗಳ ತುಡಿತ ಈ ಕಥೆಯ ಹಂದರದಲ್ಲಿದೆ.ಮಂಗಳೂರಿನ ಸಹಮತ ಫಿಲಂ ಸೊಸೈಟಿ,ರೊಶನಿ ನಿಲಯದ ಇಂಗ್ಲೀಷ್, ಹಿಂದಿ, ಕನ್ನಡ ಸಾಹಿತ್ಯ ಸಂಘದ ಆಶ್ರಯದಲ್ಲಿ ರೊಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ವಿಭಾಗ ಅರ್ಪಿಸುವ ಸತಿಶ್ ತಿಪಟೂರು ನಿರ್ದೇಶನದಲ್ಲಿ ಸಹಮತ ರಂಗತಂಡದ ಸದಸ್ಯರಿಂದ ನಾಟಕ ಪ್ರದರ್ಶನ ಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News