ಉಡುಪಿ: ಚೈತನ್ಯ ಜಯಂತಿ ಉತ್ಸವ ಉದ್ಘಾಟನೆ
ಉಡುಪಿ, ಮಾ.19: ಬದುಕಿನ ಎಲ್ಲ ದುಃಖಗಳು ದೂರ ಆಗಲು ನಾಮ ಸಂಕೀರ್ತನೆ ಯಜ್ಞ ಮಾಡಬೇಕು. ಇದನ್ನು ಜಗತ್ತಿಗೆ ಸಾರಿದವರು ಚೈತನ್ಯರು ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಪರ್ಯಾಯ ಪೇಜಾವರ ಮಠ ಮತ್ತು ಬೆಂಗಳೂರು ಇಸ್ಕಾನ್ ವತಿ ಯಿಂದ ರವಿವಾರ ರಾಜಾಂಗಣದಲ್ಲಿ ಆಯೋಜಿಸಲಾದ ಚೈತನ್ಯ ಜಯಂತಿ ಉತ್ಸವವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ನಮ್ರತೆ, ನಿರಂಹಕಾರ, ಸಹನೆ, ಇದರ ಜೊತೆಗೆ ಇತರರಿಗೆ ಗೌರವ ಕೊಡುತ್ತ ಭಗವಂತನ ನಾಮಸಂಕೀರ್ತನೆ ಮಾಡುತಿರಬೇಕು ಎಂಬ ಅಮೂಲ್ಯ ಸಂದೇಶವನ್ನು ಜಗತ್ತಿಗೆ ನೀಡಿದರು. ಭಕ್ತಿಯು ಜಾತಿ, ದೇಶಕ್ಕೆ ಸೀಮಿತವಲ್ಲ ಎಂಬ ಮಧ್ವರ, ಚೈತನ್ಯರ ಸಂದೇಶವನ್ನು ಜಗತ್ತಿನಾದ್ಯಂತ ಪ್ರಚಾರ ಪಡಿಸಿದ ಕೀರ್ತಿ ಇಸ್ಕಾನ್ಗೆ ಸಲ್ಲಬೇಕು ಎಂದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಇಸ್ಕಾನ್ ಬೆಂಗಳೂರು ಅಧ್ಯಕ್ಷ ಮಧುಪಂಡಿತದಾಸ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ನೇಶನಲ್ ಲಾ ಸ್ಕೂಲ್ ಕುಲಪತಿ ಪ್ರೊ.ಆರ್. ವೆಂಕಟರಾವ್, ವಿದ್ವಾಂಸ ಡಾ.ಪ್ರಭಂಜನ ವ್ಯಾಸನಕೆರೆ ಬೆಟ್ಟು ಮಾತನಾಡಿದರು.
ಮುಖ್ಯಅತಿಥಿಗಳಾಗಿ ಲಾ ಸ್ಕೂಲ್ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಪ್ರೊ.ಟಿ.ವಿ.ಸುಬ್ಬರಾವ್, ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ವೆಂಕಟೇಶ್ ಉಪಸ್ಥಿತರಿದ್ದರು.
ಚೆನ್ನೈ ಹರೆಕೃಷ್ಣ ಆಂದೋಲನದ ಮುಖ್ಯಸ್ಥ ಸ್ತೋಕ ಕೃಷ್ಣದಾಸ್ ಸ್ವಾಗತಿಸಿದರು. ಡಾ. ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.