ಕನಕದಾಸ ಸಂಶೋಧನ ಕೇಂದ್ರಕ್ಕೆ ಸದಸ್ಯರಾಗಿ ಡಾ.ನಿಕೇತನ ನೇಮಕ
Update: 2017-03-21 18:15 IST
ಉಡುಪಿ, ಮಾ.21: ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಕಾರ್ಯಾನುಷ್ಠಾನ ಮಂಡಳಿಯ ಅಧಿಕಾರೇತರ ಸದಸ್ಯರಾಗಿ ಉಡುಪಿಯ ಪ್ರಾಧ್ಯಾಪಕಿ, ಲೇಖಕಿ ಹಾಗೂ ಮಹಿಳಾ ಪರ ಚಿಂತಕಿ ಡಾ.ನಿಕೇತನ ಅವರನ್ನು ನೇಮಿಸಲಾಗಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆದೇಶದಂತೆ ಕನ್ನಡ ಸಂಸ್ಕೃತಿ ಇಲಾಖೆಯು ಮಂಡಳಿಯನ್ನು ಪುನರ್ರಚಿಸಿ ಈ ಆದೇಶ ಹೊರಡಿಸಲಾಗಿದೆ. ಮಂಡಳಿಯಲ್ಲಿ ಡಾ.ನಿಕೇತನರೊಂದಿಗೆ ಇತರ ಆರು ಮಂದಿ ಸದಸ್ಯರನ್ನು ನೇಮಕ ಮಾಡಲಾಗಿದೆ.
ಡಾ.ನಿಕೇತನ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಸಂಯೋಜಕರು ಮತ್ತು ಸಹಪ್ರಾಧ್ಯಾಪಕರಾಗಿದ್ದಾರೆ. ಹಲವು ಗ್ರಂಥಗಳನ್ನು ರಚಿಸಿರುವ ಅವರು ಕನ್ನಡ ಹಾಗೂ ತುಳು ಸಾಹಿತ್ಯ ವಲಯದಲ್ಲಿ ತನ್ನನ್ನು ಗುರುತಿಸಿಕೊಂಡಿದ್ದಾರೆ. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.