ಜಾನುವಾರು ಕಳ್ಳತನ ಮಟ್ಟ ಹಾಕಲು ಡಿಸಿಗೆ ಮನವಿ
ಉಡುಪಿ, ಮಾ.22: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಜಾನುವಾರು ಕಳ್ಳತನವನನು ಮಟ್ಟ ಹಾಕುವಂತೆ ಉಡುಪಿ ಜಿಲ್ಲಾ ಕೃಷಿ ಸಂಘ ಮತ್ತು ಕೆಥೋಲಿಕ್ ಸಭಾ ಕಳತ್ತೂರು ಘಟಕ ಜಿಲ್ಲಾಧಿಕಾರಿ ಹಾಗೂ ಪೋಲೀಸ್ ಅಧೀಕ್ಷಕರಿಗೆ ಮನವಿ ಅರ್ಪಿಸಿ ಒತ್ತಾಯಿಸಿದೆ.
ಬೆಳಪು ಮಿಲಿಟರಿ ಕಾಲನಿ ಕೃಷಿಕ ಎಡ್ವರ್ಡ್ ಮೆಂಡೋನ್ಸಾರ 7 ತಿಂಗಳ ಗಬ್ಬದ ದನ ಮತ್ತು ಇನ್ನೊಂದು ಹಾಲು ಕರೆವ ದನವನ್ನು ಮಾ.9ರಂದು ರಾತ್ರಿ ಕೊಟ್ಟಿಗೆಯಿಂದಲೇ ಕಳವು ಮಾಡಲಾಗಿತ್ತು. ಬಳಿಕ ಈ ದನಗಳು ಸಿಕ್ಕಿದ್ದು, ಸೆರೆಸಿಕ್ಕ ಓರ್ವ ದನಗಳ್ಳ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ ಎಂದು ತಿಳಿಸಲಾಗಿದೆ.
ಕೃಷಿ ಕ್ಷೇತ್ರದ ವಿವಿಧ ಸಮಸ್ಯೆಗಳಿಂದ ಬಹಳಷ್ಟು ಮಂದಿ ಕೃಷಿಯಿಂದ ವಿಮುಖರಾಗುತ್ತಿರುವ ಈ ಕಾಲದಲ್ಲಿ ದನಗಳ್ಳರ ಕಾಟದಿಂದ ಹೈನುಗಾರಿಕೆ ಯನ್ನು ನಂಬಿ ಬದುಕುವವರಿಗೆ ರಕ್ಷಣೆ ಸಿಗಬೇಕಿದೆ. ಜಿಲ್ಲೆಯಲ್ಲಿ ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ಆಯಕಟ್ಟಿನ ಪ್ರದೇಶಗಳಲ್ಲಿ ಚೆಕ್ಪೋಸ್ಟ್ ಸ್ಥಾಪಿಸಿ, 24ಗಂಟೆಗಳ ತಪಾಸಣೆ ಇರುವಂತೆ ನೋಡಿಕೊಳ್ಳಬೇಕು. ದನಗಳ್ಳತನ, ತೆಂಗು-ಅಡಿಕೆ ಕೃಷಿ ಉತ್ಪನ್ನಗಳು, ಪಂಪು ಕಳ್ಳತನಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಜಾನುವಾರು ಕಳ್ಳರಿಗೆ ಜಾಮೀನುರಹಿತ ಹಾಗೂ ಕಠಿಣ ಶಿಕ್ಷೆಯಾಗಬೇಕು. ಇದರಲ್ಲಿ ಭಾಗಿಯಾದ ಎಲ್ಲಾ ಅಪರಾಧಿಗಳನ್ನು ಬಂಧಿಸಬೇಕು ಎಂದು ಜಿಲ್ಲಾ ಕೃಷಿಕ ಸಂಘಮತ್ತು ಕೆಥೋಲಿಕ್ ಸಭಾ ಕಳತ್ತೂರು ಘಟಕ ಒತ್ತಾಯಿಸಿದೆ.
ನಿಯೋಗದಲ್ಲಿ ರಾಮಕೃಷ್ಣ ಶರ್ಮ ಬಂಟಕಲ್ಲು, ಲಿಯೋ ಮೆಂಡೋನ್ಸಾ, ಎಡ್ವರ್ಡ್ ಮೆಂಡೋನ್ಸಾ, ಶ್ರೀನಿವಾಸ ಬಲ್ಲಾಳ್, ವೇಣುಗೋಪಾಲ ಎಂ., ದಿನೇಶ್ ಶೆಟ್ಟಿ ಹೆರ್ಗ, ಪ್ಲೋರಿನ್ ಮೆಂಡೋನ್ಸಾ, ಥೆರೆಸಾ ಮೆಂಡೋನ್ಸಾ, ಆಲೆನ್ ಥೌರ್, ಲೀನಾ ಥೌರ್, ಐರಿನ್ ಥೌರ್ ಮೊದಲಾದವರು ಉಪಸ್ಥಿತರಿದ್ದರು.