ಸಂಶೋಧನೆ, ಅನ್ವೇಷಣೆ ಗುಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಡಾ.ತಿರುಮಲೇಶ್

Update: 2017-03-23 13:53 GMT

ಉಡುಪಿ, ಮಾ.23: ರಾಷ್ಟ್ರಕವಿ ಗೋವಿಂದ ಪೈ ಅವರ ಸಂಶೋಧನೆ ಮತ್ತು ಅನ್ವೇಷಣೆಯ ಗುಣವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಕವಿ, ಕತೆಗಾರ, ವಿಮರ್ಶಕ ಡಾ.ಕೆ.ವಿ.ತಿರುಮಲೇಶ್ ಅವರು ಹೇಳಿದ್ದಾರೆ.

ಮಣಿಪಾಲ ವಿವಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ವತಿಯಿಂದ ನೀಡುವ 4ನೆ 'ರಾಷ್ಟ್ರಕವಿ ಎಂ.ಗೋವಿಂದ ಪೈ ಪ್ರಶಸ್ತಿ' ಯನ್ನು ಇಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಮಂಜೇಶ್ವರ ಗೋವಿಂದ ಪೈಗಳನ್ನು ನಾನು ಮುಖ:ತ ಭೇಟಿಯಾಗಿಲ್ಲ. ಭೇಟಿಯಾಗುವ ಪ್ರಯತ್ನಗಳು ಬೇರೆ ಬೇರೆ ಕಾರಣದಿಂದ ಕೈಗೂಡಿಲ್ಲ. ಆದರೆ ಅವರೊಂದಿಗೆ ಪತ್ರವ್ಯವಹಾರ ನಡೆಸಿದ್ದೇನೆ. ನನ್ನ ಹಲವು ಸಂಶಯಗಳಿಗೆ ಅವರಿಂದ ಪೋಸ್ಟ್‌ಕಾರ್ಡ್ ಮೂಲಕ ಉತ್ತರವನ್ನು ಪಡೆದಿದ್ದೇನೆ ಎಂದು ಮೂಲತ ಕಾಸರಗೋಡಿನವರಾಗಿದ್ದು, ಸದ್ಯ ಹೈದರಾಬಾದಿನಲ್ಲಿ ವಾಸವಾಗಿರುವ ಡಾ.ತಿರುಮಲೇಶ್ ತಿಳಿಸಿದರು.

ಅಭಿನಂದನಾ ಭಾಷಣ ಮಾಡಿದ ಬೆಂಗಳೂರಿನ ಸಾಹಿತಿ, ಅಂಕಣಕಾರ ಎಸ್.ದಿವಾಕರ್ ಮಾತನಾಡಿ, ಕನ್ನಡಕ್ಕೆ ಮೂವರು ಮಹಾಕವಿಗಳನ್ನು -ಎಂ. ಗೋವಿಂದ ಪೈ, ಪ್ರೊ.ಗೋಪಾಲಕೃಷ್ಣ ಅಡಿಗ, ಡಾ.ಕೆ.ವಿ.ತಿರುಮಲೇಶ್- ಕಾಸರಗೋಡನ್ನು ಒಳಗೊಂಡ ಅವಿಭಜಿತ ದ.ಕ.ಜಿಲ್ಲೆ ನೀಡಿದೆ ಎಂದರು.

ಇವರು ಅನೇಕ ಕ್ರಾಂತಿಕಾರಿ ಮಾರ್ಗಗಳನ್ನು, ನಡೆಗಳನ್ನು ತೋರಿಸಿದರು. ಕಾವ್ಯ ಭಾಷೆಗೆ ಹೊಸ ರೀತಿಯನ್ನು ರೂಪಿಸಿದರು. ಸುಲಭವಾಗಿ ಅರ್ಥವಾಗುವುದು ಕವನವಾಗುವುದಿಲ್ಲ. ಅದು ಅನುಭವವಾಗಬೇಕು ಎಂದು ದಿವಾಕರ್ ಹೇಳಿದರು.

ತಿರುಮಲೇಶ್ ಅವರ ಕಾವ್ಯಗಳಲ್ಲಿ ಬೆರಗುಗೊಳಿಸುವ ರೂಪಕಗಳಿವೆ. ಅವುಗಳು ಓದುಗನನ್ನು ಬೆಚ್ಚಿ ಬೀಳಿಸುವ ರೂಪಕಗಳು. ತಿರುಮಲೇಶ್ ನಮ್ಮ ಉಳಿದ ವಿಮರ್ಶಕರಿಗಿಂತ ಭಿನ್ನ ವಿಮರ್ಶಕರಾಗಿದ್ದಾರೆ. ಅವರು ಕಾವ್ಯವನ್ನು ವಿವಿಧ ಮಗ್ಗುಲುಗಳಿಂದ ನೋಡುತ್ತಾರೆ. ಅಡಿಗ ಹಾಗೂ ಬೇಂದ್ರೆ ಅವರ ಬಗ್ಗೆ ಬರೆದ ವಿಮರ್ಶೆ ಇದಕ್ಕೊಂದು ಉದಾಹರಣೆಯಾಗಿದೆ. ತಿರುಮಲೇಶರ ಕಾವ್ಯ ಸಹೃದಯರನ್ನು ಬಯಸುವ ಕಾವ್ಯವಾಗಿದೆ ಎಂದವರು ವಿವರಿಸಿದರು.

 ಟಿ.ವಿಮಲಾ ವಿ.ಪೈ ಪ್ರಾಯೋಜಿತ 'ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ' ಯನ್ನು ಡಾ.ಕೆ.ವಿ.ತಿರುಮಲೇಶ್ ಅವರಿಗೆ ನೀಡಿ ಸನ್ಮಾನಿಸಲಾಯಿತು. ತಿರುಮಲೇಶ್ ಪತ್ನಿ ನಿರ್ಮಲಾ ಅವರನ್ನು ಸಹ ಗೌರವಿಸಲಾಯಿತು.

ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ವಾಂಸ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಶುಭಾಶಂಸನೆ ಮಾಡಿದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ವರದೇಶ್ ಹಿರೇಗಂಗೆ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ಸಹ ಸಂಯೋಜನಾಧಿಕಾರಿ ಡಾ.ಅಶೋಕ ಆಳ್ವ ವಂದಿಸಿದರೆ, ಡಾ.ಪಾದೇಕಲ್ಲು ವಿಷ್ಣು ಭಟ್ ಕಾರ್ಯಕ್ರಮ ನಿರ್ವಹಿಸಿದರು.

ಅನಂತರ ಡಾ.ಕೆ.ವಿ.ತಿರುಮಲೇಶ್ ಅವರೊಂದಿಗೆ 'ನನ್ನ ಸಾಹಿತ್ಯ'ದ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಇದಕ್ಕೆ ಮೊದಲು ನಡೆದ ಕವಿತಾ ಗೋಷ್ಠಿ ಯಲ್ಲಿ ಸಂಧ್ಯಾದೇವಿ, ಲಕ್ಷ್ಮೀಶ ಚೊಕ್ಕಾಡಿ, ಮೆಲ್ವಿನ್ ರೊಡ್ರಿಗಸ್, ಹರಿಯಪ್ಪ ಪೇಜಾವರ, ಡಾ.ಮಹಾಲಿಂಗ ಭಟ್ ಕೆ., ಜ್ಯೋತಿ ಮಹಾದೇವ್ ಅವರು ಕೆ.ವಿ.ತಿರುಮಲೇಶ್ ಅವರ ಕವಿತೆಗಳನ್ನು ಓದಿದರು. ಪೃಥ್ವೀರಾಜ್ ಕವತ್ತಾರ್ ಕಾರ್ಯಕ್ರಮ ನಿರೂಪಿಸಿದರು.

 ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಮ್ ಅಧ್ಯಕ್ಷತೆಯಲ್ಲಿ ನಡೆದ ಚಿಂತನಗೋಷ್ಠಿಯಲ್ಲಿ ವಿಮರ್ಶಕ ಪ್ರೊ.ಮುರಲೀಧರ ಉಪಾಧ್ಯ ಅವರು ಱಕನ್ನಡದ ಆದ್ಯ ಸಂಶೋದನ ವಿದ್ವಾಂಸ ರಾಷ್ಟ್ರಕವಿ ಗೋವಿಂದ ಪೈೞವಿಷಯದ ಕುರಿತು ಉಪನ್ಯಾಸ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News