ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲು ಸಲಹೆ
ಮಣಿಪಾಲ, ಮಾ.24: ಪ್ರಸ್ತುತ ಪರಿಸ್ಥಿತಿಯಲ್ಲಿ ಬ್ಯಾಂಕುಗಳ ಡಿಜಿಟಲ್ ಬ್ಯಾಂಕ್ ಸೇವೆಯ ಕುರಿತು ಗ್ರಾಹಕರಿಗೆ ಹೆಚ್ಚಿನ ಮಾಹಿತಿಗಳನ್ನು ನೀಡುವಂತೆ ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಬಂಧಕರಾದ ಸುಜಾತ ಶ್ರೀಕಂಠಯ್ಯ ಜಿಲ್ಲೆಯ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ 10ರೂ. ಮುಖಬೆಲೆಯ ನಕಲಿ ನಾಣ್ಯಗಳು ಈಗ ಚಲಾವಣೆಯಲ್ಲಿಲ್ಲ ಎಂದವರು ಸ್ಪಷ್ಟಪಡಿಸಿದರು.
ಉಡುಪಿ ಜಿಪಂನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾಗಿರುವ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಪಂ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಬ್ಯಾಂಕುಗಳ ಪರಿಶೀಲನಾ ಸಮಿತಿಯ ಮೂರನೇ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಬ್ಯಾಂಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಆರ್ಬಿಐ ಇತ್ತೀಚೆಗೆ ಹೊರಡಿಸಿದ ವಿವಿಧ ಸುತ್ತೋಲೆಗಳ ಕುರಿತು ಮಾಹಿತಿ ನೀಡಿದ ಅವರು, ಕೇಂದ್ರ ಸರಕಾರ ಹಾಗೂ ಆರ್ಬಿಐನ ಮಹತ್ವಾಕಾಂಕ್ಷಿ ಯೋಜನೆಯಾದ ವಿತ್ತೀಯ ಸೇರ್ಪಡೆ ಕುರಿತು ವಿವರಗಳ್ನು ನೀಡಿದರು. ಬ್ಯಾಂಕುಗಳು ಉಪಸೇವಾ ಕ್ಷೇತ್ರದನ್ವಯ ಎಲ್ಲಾ ಹಳ್ಳಿಗಳಿಗೂ ಬ್ಯಾಂಕಿನ ಸೇವೆಯನ್ನು ಒದಗಿಸುತ್ತಿವೆ ಎಂದರು.
ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ವಿತ್ತೀಯ ಸೇರ್ಪಡೆಯನ್ವಯ ಜಿಲ್ಲೆಯಾದ್ಯಂತ ವಿವಿಧ ಗ್ರಾಪಂ ಕಚೇರಿಗಳಲ್ಲಿ ಸ್ಥಳೀಯ ಬ್ಯಾಂಕುಗಳ ಸಹಕಾರ ದೊಂದಿಗೆ ಆಧಾರ್ ನೋಂದಣಿ, ಬ್ಯಾಂಕ್ ಖಾತೆಗೆ ಜೋಡಣೆ ಕಾರ್ಯಕ್ರಮ ಗಳನ್ನು ನಡೆಸಲಾಗುತ್ತಿದೆ. ಪೆನ್ಶನ್ ಖಾತೆಗಳಿಗೂ ಆಧಾರ್ ಸಂಖ್ಯೆ ಜೋಡಣೆ ಮಾಡುವ ಕಾರ್ಯ ಶೀಘ್ರಗತಿಯಲ್ಲಿ ಆಗಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಬ್ಯಾಂಕುಗಳ ಪ್ರಗತಿಯ ಅಂಕಿ-ಅಂಶಗಳನ್ನು ಪ್ರಸ್ತುತ ಪಡಿಸಿದ ಸಿಂಡಿಕೇಟ್ ಬ್ಯಾಂಕಿನ ಉಡುಪಿ ವಿಭಾಗೀಯ ಕಚೇರಿ ಕ್ಷೇತ್ರೀಯ ಪ್ರಬಂಧಕ ಎಸ್.ಎಸ್. ಹೆಗ್ಡೆ, ಜಿಲ್ಲೆಯ ಬ್ಯಾಂಕುಗಳು ಕಳೆದ ಡಿಸೆಂಬರ್ ಕೊನೆಗೆ 20366 ಕೋಟಿ ರೂ. ಠೇವಣಿ ಹಾಗೂ 9750 ಕೋಟಿ ರೂ.ಮುಂಗಡವನ್ನು ಹೊಂದಿವೆ. ಜಿಲ್ಲೆಯು ವಾರ್ಷಿಕವಾಗಿ ಠೇವಣಿಯಲ್ಲಿ ಶೇ.17.88 ಹಾಗೂ ಮುಂಗಡದಲ್ಲಿ ಶೇ.12.03ರ ಪ್ರಗತಿ ಸಾಧಿಸಿದೆ. ಸಾಲ ಠೇವಣಿಯ ಅನುಪಾತ ಡಿಸೆಂಬರ್ ಅಂತ್ಯಕ್ಕೆ ಶೇ.47.9 ಆಗಿದ್ದು, ಸೆಪ್ಟೆಂಬರ್ಗೆ ಹೋಲಿಸಿದಾಗ ಶೇ.4.2ರಷ್ಟು ಇಳಿಕೆ ಕಂಡುಬಂದಿದೆ. ನೋಟುಗಳ ಅಪವೌಲ್ಯೀಕರಣದ ವೇಳೆ ಹೆಚ್ಚಿನ ಠೇವಣಿ ಹರಿದುಬಂದಿರುವುದು ಪ್ರಮುಖ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟರು.
2016-17 ನೇ ಸಾಲಿನ ಡಿಸೆಂಬರ್ ಕೊನೆಗೆ ಜಿಲ್ಲೆಯ ಬ್ಯಾಂಕುಗಳು 4855.17 ಕೋಟಿ ರೂ. ಸಾಲ ನೀಡಿ, ವಾರ್ಷಿಕ ಗುರಿ 7014.70 ಕೋಟಿ ರೂ.ಗಳಲ್ಲಿ ಶೇ.26.20ರಷ್ಟು ಪ್ರಗತಿ ಸಾಧಿಸಿದೆ. ಇದರಲ್ಲಿ 1397.02 ಕೋಟಿ ಕೃಷಿ ಕ್ಷೇತ್ರಕ್ಕೂ, 1768.88 ಕೋಟಿ ರೂ. ಕಿರು, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಿಗೂ, 66.10 ಕೋಟಿ ರೂ.ಶಿಕ್ಷಣ ಕ್ಷೇತ್ರಕ್ಕೂ, 238.97 ಕೋಟಿ ಗ್ರಹ ನಿರ್ಮಾಣ ಕ್ಷೇತ್ರಕ್ಕೂ, 310.48 ಕೋಟಿ ಇತರ ಆದ್ಯತಾರಂಗದ ಉದ್ದೇಶಗಳಿಗೂ ಸಾಲ ನೀಡಲಾಗಿದೆ ಎಂದು ಹೆಗ್ಡೆ ವಿವರಿಸಿದರು.
ಈ ಮೂಲಕ ಒಟ್ಟು ಆದ್ಯತಾ ರಂಗಕ್ಕೆ ನಿಗದಿಪಡಿಸಿದ ಗುರಿ 5,637.74 ಕೋಟಿ ರೂ.ಗೆ ಪ್ರತಿಯಾಗಿ 3781.45 (ಶೇ67)ಕೋಟಿ ಸಾಲ ವಿತರಣೆ ಮಾಡಲಾಗಿದೆ. ಇದೇ ಅವಧಿಯಲ್ಲಿ ಆದ್ಯತೇತರ ರಂಗಕ್ಕೆ ವಾರ್ಷಿಕ ಅವಧಿಗೆ ನಿಗದಿಪಡಿಸಿದ ಗುರಿ 1,376.96 ಕೋಟಿರೂ.ಗೆ ಪ್ರತಿಯಾಗಿ ಬ್ಯಾಂಕುಗಳು 1073.72 ಕೋಟಿ ರೂ. ಸಾಲ ವಿತರಣೆ ಮಾಡಿವೆ ಎಂದರು.
ನಬಾರ್ಡ್ನ ಸಹಾಯಕ ಮಹಾ ಪ್ರಂಬಂಧಕ ಎಸ್.ರಮೇಶ್ ಜಿಲ್ಲಾ ಮುಂಗಡ ಯೋಜನೆಯ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿದರು. ಬ್ಯಾಂಕುಗಳು ಕೃಷಿರಂಗದ ಬಗ್ಗೆ ಇನ್ನೂ ಹೆಚ್ಚಿನ ಗಮನ ಹರಿಸಲು ಬ್ಯಾಂಕುಗಳಿಗೆ ಅವರು ಕರೆ ನೀಡಿದರು. ಶಿಕ್ಷಣ ಹಾಗೂ ಇತರ ಆದ್ಯತಾರಂಗ ಇನ್ನೂ ಹೆಚ್ಚು ಸಾಧಿಸಬೇಕಾಗಿದೆ ಎಂದು ಹೇಳಿದ ಅವರು ಜಿಲ್ಲೆಯ ಸಾಲ ಮತ್ತು ಠೇವಣಿಯ ಅನುಪಾತ ಕೂಡಾ ಹೆಚ್ಚಿಸಬೇಕಾದ ಅಗತ್ಯವಿದೆ ಎಂದರು.
ಅತಿಥಿಗಳನ್ನು ಸ್ವಾಗತಿಸಿದ ಜಿಲ್ಲೆಯ ಲೀಡ್ ಬ್ಯಾಂಕ್ ಮುಖ್ಯಪ್ರಬಂಧಕ ಫ್ರಾನ್ಸಿಸ್ ಬೋರ್ಜಿಯಾ ಬ್ಯಾಂಕುಗಳ ಪ್ರಗತಿಯನ್ನು ಸಭೆಗೆ ಮಂಡಿಸಿ ಕೊನೆಗೆ ವಂದಿಸಿದರು.
2017-18ನೆ ಸಾಲಿನ ಜಿಲ್ಲಾ ಸಾಲ ಯೋಜನೆಯನ್ನು ಜಿಲ್ಲಾಧಿಕಾರಿ ಹಾಗೂ ಜಿಪಂನ ಸಿಇಓ ಆಗಿರುವ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಸಭೆಯಲ್ಲಿ ಬಿಡುಗಡೆಗೊಳಿಸಿದರು. ಇದರಂತೆ ಮುಂದಿನ ಆರ್ಥಿಕ ವರ್ಷದಲ್ಲಿ ಜಿಲ್ಲೆಯ ಬ್ಯಾಂಕುಗಳು ಒಟ್ಟು 7340 ಕೋಟಿ ರೂ.ಗಳ ಸಾಲವನ್ನು ನೀಡಬೇಕಾಗಿದೆ. ಇದರಲ್ಲಿ ಆದ್ಯತಾ ರಂಗಕ್ಕೆ 6520 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಅದರಲ್ಲೂ ಕೃಷಿ ಕ್ಷೇತ್ರಕ್ಕೆ ಒಟ್ಟು 3024 ಕೋಟಿ ರೂ. ಸಾಲ ನೀಡುವ ಗುರಿಯನ್ನು ಬ್ಯಾಂಕುಗಳಿಗೆ ನಿಗದಿ ಪಡಿಸಲಾಗಿದೆ