ಪಾಕ್ ಶಂಕಿತ ಉಗ್ರನನ್ನು ಹೊಡೆದುರುಳಿಸಿದ ಬಿಎಸ್ಎಫ್
ಅಮೃತಸರ, ಮಾ.27: ಅಂತರಾಷ್ಟ್ರೀಯ ಗಡಿಯಲ್ಲಿ ನುಸಳಲು ಯತ್ನ ನಡೆಸುತ್ತಿದ್ದ ಪಾಕಿಸ್ತಾನದ ಓರ್ವ ಶಂಕಿತ ಉಗ್ರನನ್ನು ಭಾರತದ ಗಡಿ ಭದ್ರತಾ ಪಡೆ ಹತ್ಯೆ ಮಾಡಿರುವ ಘಟನೆ ಗುರ್ದಾಸ್ಪುರದ ಪಹಾರಿಪುರ್ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಬೆಳಗ್ಗೆ 6:20ರ ಹೊತ್ತಿಗೆ ಗುರ್ದಾಸ್ಪುರದ ಪಹಾರಿಪುರ್ ಅಂತರಾಷ್ಟ್ರೀಯ ಗಡಿ ಭಾಗದಲ್ಲಿ ಗಡಿ ಭದ್ರತಾ ಪಡೆ ಗಸ್ತು ತಿರುಗುತ್ತಿದ್ದ ವೇಳೆ ಗಡಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ್ದರು.ಆತ ಅಕ್ರಮವಾಗಿ ಭಾರತದೊಳಗೆ ನುಸಳಲು
ಯತ್ನ ನಡೆಸಿದಾಗ ಬಿಎಸ್ಎಫ್ ಹಿಂದಕ್ಕೆ ಸರಿಯುವಂತೆ ಎಚ್ಚರಿಕೆ ನೀಡಿದರು. ಆದರೆ ಆತ ತನ್ನ ಪ್ರಯತ್ನದಿಂದ ಹಿಂದೆ ಸರಿಯಲಿಲ್ಲ ಎನ್ನಲಾಗಿದೆ. ಆಗ ಸೇನೆ ಗುಂಡಿನ ದಾಳಿ ನಡೆಸಿ ಆತನನ್ನು ಹತ್ಯೆ ಮಾಡಿತು ಎನ್ನಲಾಗಿದೆ.
ಘಟನೆ ನಡೆದ ಪ್ರದೇಶದ ಸುತ್ತಲೂ ಸೇನಾ ಪಡೆ ಜಮಾಯಿಸಿದ್ದು, ಸ್ಥಳದಲ್ಲಿ ಇನ್ನಷ್ಟು ಉಗ್ರರು ಅಡಗಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಬಿಎಸ್ಎಫ್ , ಕಾರ್ಯಾಚರಣೆಯನ್ನು ಮುಂದುವರಿಸಿದೆ ಎಂದು ಮೂಲಗಳು ತಿಳಿಸಿವೆ.