ಮೂಡುಬಿದಿರೆ: ಸರ್ವೇಯರ್ ಮನೆಯಿಂದ ನಗ-ನಗದು ಕಳವು

Update: 2017-03-27 06:16 GMT

ಮೂಡುಬಿದಿರೆ, ಮಾ.27: ಮೂಡುಬಿದಿರೆ ನಾಡಕಚೇರಿಯ ಸರ್ವೇಯರ್ ಚಂದ್ರಕುಮಾರ್ ಅವರ ಮನೆಗೆ ಕಳ್ಳರು ನುಗ್ಗಿ ಅಪಾರ ಪ್ರಮಾಣದ ನಗ-ನಗದು ಕಳವುಗೈದ ಘಟನೆ ರವಿವಾರ ತಡರಾತ್ರಿ ನಡೆದಿದೆ.

ಚಂದ್ರಕುಮಾರ್ ಅವರು ಇಲ್ಲಿನ ಗಂಟಾಲ್‌ಗಟ್ಟೆ ಜಂಕ್ಷನ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ನಿನ್ನೆ ಮನೆಯ ಹಾಲ್‌ನಲ್ಲಿ ಚಂದ್ರಕುಮಾರ್ ಅವರು ಪತ್ನಿ, ಇಬ್ಬರು ಮಕ್ಕಳೊಂದಿಗೆ ಮಲಗಿದ್ದರು. ಈ ವೇಳೆ ಮನೆಯೊಳಗೆ ನುಸುಳಿರುವ ಕಳ್ಳರು ಈ ಕೃತ್ಯ ಎಸಗಿದ್ದಾರೆ.

ಮನೆಯ ಕಪಾಟಿನಲ್ಲಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ 60 ಗ್ರಾಮ್ ಚಿನ್ನಾಭರಣ ಹಾಗೂ 7 ಸಾವಿರ ರೂ. ನಗದನ್ನು ಕದ್ದಿರುವ ಕಳ್ಳರು ಇದೇ ಪರಿಸರದ ಇನ್ನೂ ಎರಡು ಮನೆಗಳಿಗೆ ನುಗ್ಗಿದ್ದಾರೆ. ಆದರೆ ಆ ಮನೆಗಳಲ್ಲಿ ಯಾವುದೇ ವಸ್ತುಗಳನ್ನು ಕಳವುಗೈದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಚಂದ್ರಕುಮಾರ್ ಅವರ ಮನೆಯೊಳಗೆ ಮನೆಯ ಹಿಂಬದಿಯಲ್ಲಿರುವ ಅಡುಗೆಕೋಣೆಯ ಮೂಲಕ ಒಳಪ್ರವೇಶಿಸಿರುವ ಶಂಕೆ ಇದ್ದರೂ ಅಲ್ಲಿ ಯಾವುದೇ ಸಾಕ್ಷ ಲಭ್ಯವಾಗಿಲ್ಲ. ಇದೇವೇಳೆ ಅಡುಗೆ ಕೋಣೆಯ ಮೇಲ್ಬಾಗದಲ್ಲಿ ಎಕ್ಸಾಸ್ಟ್ ಫ್ಯಾನ್‌ಗೆಂದು ಕಿಂಡಿಯೊಂದನ್ನು ಬಿಡಲಾಗಿತ್ತು. ಆದರೆ ಅಲ್ಲಿ ಫ್ಯಾನ್ ಅಳವಡಿಸದೆ ಬಿಟ್ಟಿರುವುದರಿಂದ ಕಳ್ಳರಿಗೆ ಅದೇ ರಹದಾರಿಯಾಗಿರುವ ಸಾಧ್ಯತೆಗಳಿವೆ.

ತಡರಾತ್ರಿ ಹೊತ್ತಿನಲ್ಲಿ ಚಂದ್ರಕುಮಾರ್ ಎಚ್ಚರವಾದಾಗ ಕಳ್ಳರು ತಮ್ಮ ಕರಾಮತ್ತು ಪ್ರದರ್ಶಿಸಿ ಹೋಗಿಯಾಗಿತ್ತು. ಒಳಕೋಣೆಯಲ್ಲಿದ್ದ ಕಪಾಟಿನ ಬಾಗಿಲು ತೆರೆದ ಸ್ಥಿತಿಯಲ್ಲಿದ್ದು, ಅದರಲ್ಲಿದ್ದ ಬಟ್ಟೆ ಹಾಗೂ ಆಭರಣಗಳ ಪೆಟ್ಟಿಗೆಗಳು ಹಾಗೂ ಇನ್ನಿತರ ದಾಖಲೆ ಪತ್ರಗಳು ಚೆಲ್ಲಾಪಿಲ್ಲಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ.

ಈ ಬಗ್ಗೆ ಮಾದ್ಯಮಗಳೊಂದಿಗೆ ಮಾತನಾಡಿದ ಸರ್ವೇಯರ್ ಚಂದ್ರಕುಮಾರ್ ಕಳ್ಳರು ಹಾಲ್‌ನಲ್ಲಿ ಮಲಗಿದ್ದ ನಮಗೆ ಪ್ರಜ್ಞೆ ತಪ್ಪಿಸುವ ಯಾವುದಾದರೂ ರಾಸಾಯನಿಕ ಬಳಸಿರುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ನಮಗೆ ಎಚ್ಚರವಾಗುತ್ತಿತ್ತು ಎಂದಿದ್ದಾರೆ.

ಸ್ಥಳಕ್ಕೆ ಮೂಡುಬಿದಿರೆ ಎಸ್ಸೈ ದೇಜಪ್ಪ, ಸರ್ಕಲ್ ಇನ್‌ಸ್ಪೆಕ್ಟರ್ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಶ್ವಾನದಳವನ್ನೂ ಕರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News