ಸಾರ್ವಜನಿಕರ ಅಹವಾಲು ಆಲಿಸಲು ನೇರ ಪೋನ್ ಇನ್: ಜಿಲ್ಲಾಧಿಕಾರಿ ಎದುರು 44 ದೂರು, ಪರಿಹಾರಕ್ಕೆ ಕ್ರಮ
ಉಡುಪಿ, ಮಾ.27:ಸಾರ್ವಜನಿಕರ ಕುಂದುಕೊರತೆಗಳನ್ನು ಖುದ್ದಾಗಿ ಆಲಿಸಿ ಪರಿಹಾರ ಒದಗಿಸಲು ನೇರ ಪೋನ್ ಇನ್ ಕಾರ್ಯಕ್ರಮ ಸೋಮವಾರ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಬೆಳಗ್ಗೆ 10ರಿಂದ 11 ಗಂಟೆಯವರೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು 44 ದೂರುಗಳನ್ನು ಆಲಿಸಿ ಪರಿಹಾರ ಕೊಡಲು ಕ್ರಮಕೈಗೊಳ್ಳಲಾಯಿತು. ಇವುಗಳಲ್ಲಿ ಒಂದು ದೂರು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದ್ದಾಗಿದೆ. ಅಲ್ಲದೇ, ಸಾರ್ವಜನಿಕ ದೂರು ನಿವಾರಣಾ ಮತ್ತು ಉಸ್ತುವಾರಿ ವ್ಯವಸ್ಥೆಗಾಗಿ ಉಡುಪಿ ಜಿಲ್ಲಾಡಳಿತದ ಅಧಿಕೃತ ವೆಬ್ಸೈಟ್ನಲ್ಲಿ ಪಬ್ಲಿಕ್ ಗ್ರಿವೆನ್ಸ್ಸ್ ಲಿಂಕ್ನ್ನು ಸೇರ್ಪಡೆಗೊಳಿಸಲಾಗಿದೆ. ಸಾರ್ವಜನಿಕರ ದೂರು ನಿವಾರಿಸಲು ಪ್ರಥಮ ಆದ್ಯತೆಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ಕಳುಹಿಸಲು ಪ್ರತಿಯೊಂದು ಇಲಾಖೆಗೂ ಪ್ರತ್ಯೇಕ ಯೂಸರ್ ಐಡಿ ಮತ್ತು ಪಾಸ್ವರ್ಡ್ಗಳನ್ನು ನೀಡಲಾಗಿದೆ. ಇದಕ್ಕೆ ಉತ್ತರಿಸಲು ಸಮಯಮಿತಿಯನ್ನು ನಿಗದಿಗೊಳಿಸಲಾಗಿದೆ.
ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನತೆ, ಕುಡಿಯುವ ನೀರು, ಕಂದಾಯ ಇಲಾಖೆ ಸಮಸ್ಯೆ, ಸ್ಮಶಾನ ಭೂಮಿ, ಕ್ರಷರ್ ಸಮಸ್ಯೆ, ಬಿಎಸ್ಎನ್ಎಲ್ ದೂರವಾಣಿ ಸಮಸ್ಯೆ, ಬೈಂದೂರು ವ್ಯಾಪ್ತಿಯಲ್ಲಿ ಧೂಳಿ ನಿಂದಾಗಿ ಆರೋಗ್ಯ ಹದಗೆಡುತ್ತಿರುವ ಬಗ್ಗೆ, ಬೈಂದೂರಿನ ಉಪ್ಪುಂದದಲ್ಲಿ ಹೊಳೆಗೆ ಅಣೆಕಟ್ಟು ಕಟ್ಟಿರುವುದನ್ನು ಉಳಿಸಿಕೊಡಿ ಎಂದು ಜಿಲ್ಲಾಧಿಕಾರಿಗಳನ್ನು ಕೋರಿದರು. ಚಾಂತಾರಿನ ದೇವಾಲಯದ ಅರ್ಚಕರ ತಸ್ತೀಕ್ ಬಟವಾಡೆ ಯಾಗದಿರುವ ವಿಷಯ, ಕಟಪಾಡಿಯಲ್ಲಿ ಬೋರ್ವೆಲ್ ಕೊರೆದು ಶಾಲೆಗಳಲ್ಲಿ ನೀರು ಬತ್ತಿ ಉಂಟಾದ ಸಮಸ್ಯೆ ಕುರಿತು ಆ ಊರಿನ ಜನತೆ ಜಿಲ್ಲಾಧಿಕಾರಿಗಳ ಗಮನಸೆಳೆದರು.
ಕುಂದಾಪುರದ ಗ್ರಾಮಾಂತರ ವ್ಯಾಪ್ತಿಯಲ್ಲಿ ಹಳೆ ಬಸ್ಸುಗಳನ್ನು ಓಡಿಸುವ ಬಗ್ಗೆ, ಮಠದಕೆರೆಯ ಹೂಳೆತ್ತಲು, ಅಕ್ರಮ ಮರಳುಗಾರಿಕೆ ಸಮಸ್ಯೆಯೂ ಪೋನ್ ಇನ್ ವೇಳೆ ಪ್ರತಿಧ್ವನಿಸಿತು. ಹಕ್ಕುಪತ್ರ ಬೇಡಿಕೆ, ಪಾದಾಚಾರಿ ರಸ್ತೆ, ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ, ಜೂಜಾಟ, ಕಸ ವಿಲೆ ಬಗ್ಗೆಯೂ ಸಾರ್ವಜನಿಕರು ದೂರವಾಣಿ ಮೂಲಕ ಸಮಸ್ಯೆ ತಿಳಿಸಿ ಪರಿಹರಿಸಲು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.