ಹಸಿದವರು ಇಲ್ಲಿ ನಿಂತರೆ ಸಾಕು... ಕೈ ಸೇರಲಿದೆ ಅನ್ನದ ಪೊಟ್ಟಣ

Update: 2017-03-27 18:31 GMT
  • ಇದು ‘ವೈಟ್ ಡೌಸ್ ಹೋಮ್’ನ ಸೇವೆ
  • ದಿನಂಪ್ರತಿ 200 ಮಂದಿಗೆ ಉಚಿತ ಊಟ

ಮಂಗಳೂರು, ಮಾ.27: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ಸಮೀಪದ ವೃತ್ತದ ಬಳಿ ಸುಮಾರು 200 ಮಂದಿ ದಿನಾ ಸಂಜೆ 7ಕ್ಕೆ ಸಾಲಾಗಿ ನಿಂತಿರುತ್ತಾರೆ. ಅಲ್ಲಿ ನಿರುದ್ಯೋಗಿಗಳಿದ್ದಾರೆ, ಕಾರ್ಮಿಕರಿದ್ದಾರೆ, ಭಿಕ್ಷುಕರಿದ್ದಾರೆ, ಅವರಿಗೆ ವಯಸ್ಸಿನ ಹಂಗಿಲ್ಲ, ಲಿಂಗದ ಭೇದವಿಲ್ಲ, ಜಾತಿ-ಧರ್ಮದ ಪ್ರಶ್ನೆಯಿಲ್ಲ. ಯಾರಿಗೆ ಹಸಿವು ಇದೆಯೋ? ಅವರು ಅಲ್ಲಿ ನಿಲ್ಲಬಹುದು. 

ಸುಮಾರು 7:15ರ ವೇಳೆಗೆ ‘ವೈಟ್ ಡೌಸ್’ ಎಂದು ಬರೆಯಲಾದ ವ್ಯಾನೊಂದು ಬಂದು ಅಲ್ಲಿ ನಿಲ್ಲುತ್ತದೆ. ಕೈ ಚಾಚಿದವರಿಗೆ ಒಂದೊಂದು ಪೊಟ್ಟಣವನ್ನು ಅದರಲ್ಲಿರುವ ಸಿಬ್ಬಂದಿ ವರ್ಗ ನೀಡುತ್ತಾರೆ. ಅರ್ಧ ಗಂಟೆಯೊಳಗೆ ಸುಮಾರು 200 ಮಂದಿ ಪೊಟ್ಟಣಗಳನ್ನು ಕೈಗೆತ್ತಿಕೊಂಡು ಖುಷಿಯಿಂದ ಹಾದಿ ಹಿಡಿಯುತ್ತಾರೆ. ಈ ದೃಶ್ಯ ಇಂದು ನಿನ್ನೆಯದಲ್ಲ. ಸುಮಾರು 22 ವರ್ಷಗಳಿಂದ ಈ ಸೇವೆ ನಿರಂತರವಾಗಿ ನಡೆಯುತ್ತಿದೆ. ಇದು ಮಂಗಳೂರಿನ ಕೊರ್ರಿನ್ ರಸ್ಕೀನ್‌ರ ಕನಸಿನ ಕೂಸು. ಅಗರ್ಭ ಶ್ರೀಮಂತೆಯಾದ ಇವರು 1995ರಲ್ಲಿ ‘ವೈಟ್ ಡೌಸ್ ಹೋಮ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಬೀದಿಬದಿಗಳಲ್ಲಿ ಅಲೆದಾಡುವ ಮಾನಸಿಕ ರೋಗಿಗಳು, ನಿರ್ಗತಿಕರನ್ನು ಕರೆತಂದು ಸೂಕ್ತ ಚಿಕಿತ್ಸೆ ನೀಡಿ, ಆರೈಕೆ ಮಾಡಿ, ಉಪಚರಿಸಿ ಅವರು ಯಥಾಸ್ಥಿತಿಗೆ ತಲುಪಿದ ಬಳಿಕ ಅವರ ವಿಳಾಸ ಪತ್ತೆ ಹಚ್ಚಿ ವಾರಸುದಾರರಿಗೆ ತಲುಪಿಸುವ ಮಹತ್ಕಾರ್ಯ ಮಾಡುತ್ತಿದ್ದಾರೆ. ಈಗಾಗಲೇ ಸಾವಿರಾರು ಮಂದಿ ‘ವೈಟ್ ಡೌಸ್ ಹೋಮ್’ ಸೇರಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇವರ ಈ ಸೇವೆಯನ್ನು ಪರಿಗಣಿಸಿ 2015ರಲ್ಲಿ ದ.ಕ. ಜಿಲ್ಲಾಡಳಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಅಂದಹಾಗೆ, ಇದೀಗ ನಗರದ ಮಠದಕಣಿ ಯಲ್ಲಿರುವ ಮಹಿಳಾ ಹೋಮ್‌ನಲ್ಲಿ 62 ಮತ್ತು ಜೈಲು ರಸ್ತೆಯ ಬಳಿಯಿರುವ ಪುರುಷರ ಹೋಮ್‌ನಲ್ಲಿ 58 ಹಾಗೂ ಕೆಎಂಸಿ ಆಸ್ಪತ್ರೆಯಲ್ಲಿ 20 ಮಂದಿಯ ಸಹಿತ 140 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ದಾರಿಯಲ್ಲಿ ಅಲೆದಾಡುತ್ತಾ ಸಿಕ್ಕಿ ಬಿದ್ದ ಮಾನಸಿಕ ರೋಗಿಗಳೇ ಹೆಚ್ಚು.

  • ಹಸಿದವರಿಗೆ ಅನ್ನ

ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡು ವುದರ ಜೊತೆಗೆ ನಗರದ ವಿವಿಧೆಡೆ ತೆರಳಿ ಆಹಾರವಿಲ್ಲದೆ ಪರದಾಡುವವರನ್ನು ಹುಡುಕಿ ಕೊಂಡು ಆಹಾರ ಕೊಡಲಾರಂಭಿಸಿದ ‘ವೈಟ್ ಡೌಸ್’ ಬಳಿಕ ರೈಲು ನಿಲ್ದಾಣದ ಬಳಿಯೇ ಹೆಚ್ಚು ಮಂದಿ ಅಲೆದಾಡುವುದನ್ನು ಕಂಡು ಅಲ್ಲೇ ಆಹಾರ ವಿತರಿಸುತ್ತಿವೆ. ‘ವೈಟ್ ಡೌಸ್’ ನಲ್ಲಿ ಚಿಕಿತ್ಸೆ ಪಡೆಯುವವರಿಗೆ ಯಾವ ಆಹಾರವನ್ನು ನೀಡಲಾಗುತ್ತದೆಯೋ ಅದನ್ನು ರೈಲು ನಿಲ್ದಾಣದ ಬಳಿ ಹಸಿದು ಸಾಲಾಗಿ ನಿಲ್ಲುವವರಿಗೆ ನೀಡಲಾಗುತ್ತದೆ. ಅಂದರೆ, ಅನ್ನದ ಜೊತೆ ಪ್ರತೀ ರವಿವಾರ ಕೋಳಿ ಮಾಂಸದ ಪದಾರ್ಥ, ಮಂಗಳವಾರ ಮತ್ತು ಶುಕ್ರವಾರ ಮೊಟ್ಟೆ ಸಾರು, ಬುಧವಾರ ಮೀನಿನ ಸಾರು, ಸೋಮವಾರ ಮತ್ತು ಶನಿವಾರ ತರಕಾರಿ ಸಾರು ನೀಡಲಾಗುತ್ತದೆ. ಗುರುವಾರ ಸ್ಥಳೀಯ ದೇವಸ್ಥಾನದಲ್ಲಿ ಊಟ ಲಭಿಸುವ ಕಾರಣ ಅಂದು ಯಾರಿಗೂ ನೀಡಲಾಗುತ್ತಿಲ್ಲ.

ಅದೊಂದು ದಿನ ನಾನು ರಸ್ತೆ ಬದಿಯ ತ್ಯಾಜ್ಯದ ರಾಶಿಯಿಂದ ಹಳಸಿದ ಅನ್ನವನ್ನು ತಿನ್ನುವ ವ್ಯಕ್ತಿಯೊಬ್ಬರನ್ನು ಕಂಡೆ. ಆ ದೃಶ್ಯ ನನ್ನ ಮನಸ್ಸನ್ನು ಅಪಾರವಾಗಿ ಕಲಕಿತು. ಅಂದೇ ಹಸಿದ ಹೊಟ್ಟೆಯನ್ನು ತಣಿಸುವ ನಿರ್ಧಾರಕ್ಕೆ ಬಂದೆ. ಕುಟುಂಬದ ಸದಸ್ಯರ ಜೊತೆ ಚರ್ಚಿಸಿ ‘ವೈಟ್ ಡೌಸ್’ ಸ್ಥಾಪಿಸಿದೆ. ಆ ಮೂಲಕ ರಸ್ತೆಯಲ್ಲಿ ಅಲೆದಾಡುವ ಮಾನಸಿಕ ರೋಗಿಗಳ ಆರೈಕೆಗೆ ಮುಂದಾದೆ. ನಮ್ಮಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳಿದವರಲ್ಲಿ ಹೊರ ರಾಜ್ಯದವರೇ ಹೆಚ್ಚು. ಅಂದರೆ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಕೇರಳ ಹೀಗೆ ನಾನಾ ಕಡೆ ಜನರು ಚಿಕಿತ್ಸೆ ಪಡೆದಿದ್ದಾರೆ.

ಕೋರ್ರಿನ್ ರಸ್ಕೀನ್ ಸಂಸ್ಥಾಪಕಿ,

‘ವೈಟ್ ಡೌಸ್ ಹೋಮ್’ ಮಂಗಳೂರು.

 ನಿರ್ಗತಿಕರಿಗೆ ಮಾಸಿಕ ಪಡಿತರ, ಮನೆ ಕಟ್ಟಲು ಮತ್ತು ದುರಸ್ತಿಗೆ ನೆರವು, ಶಿಕ್ಷಣ, ವೈದ್ಯಕೀಯ ನೆರವು, ಆಹಾರ ವಿತರಣೆ, ಮದುವೆಗೆ ಧನ ಸಹಾಯ ಹೀಗೆ ‘ವೈಟ್ ಡೌಸ್’ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಾ ಬಂದಿವೆ. ನಗರದ ಬೆಂದೂರ್ ಚರ್ಚ್ ಸಮೀಪ ‘ವೈಟ್ ಡೌಸ್’ನ ಮುಖ್ಯ ಕಚೇರಿಯಿದ್ದು, ಸದ್ಯ ಮಹಿಳಾ ಮತ್ತು ಪುರುಷರ ಚಿಕಿತ್ಸಾ ಕೇಂದ್ರವು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿವೆ. ಮಂಗಳೂರು ಬಿಷಪರು ಮರೋಳಿಯಲ್ಲಿ 49 ಸೆಂಟ್ಸ್ ಜಾಗವನ್ನು ‘ವೈಟ್ ಡೌಸ್’ ನೀಡಿದ್ದು, ಅಲ್ಲಿ 8 ಕೋ.ರೂ. ವೆಚ್ಚದಲ್ಲಿ ಹೊಸ ಕಟ್ಟಡ ತಲೆ ಎತ್ತಲಿದೆ.

ಜೆರಾಲ್ಡ್ ಫೆರ್ನಾಂಡಿಸ್

ವ್ಯವಸ್ಥಾಪಕರು, ವೈಟ್ ಡೌಸ್.

ನಾನು ಹೊಟೇಲ್ ಕಾರ್ಮಿಕ. ಕೆಲಸ ಅರಸಿಕೊಂಡು ಮೂರು ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದೆ. ಆದರೆ, ಕೆಲಸ ಸಿಗಲಿಲ್ಲ. ಕೈಯಲ್ಲಿ ಕಾಸೂ ಇಲ್ಲ. ಆಹಾರವಿಲ್ಲದೆ ತುಂಬಾ ನಿಶ್ಶಕ್ತಿ ಹೊಂದಿದ್ದೇನೆ. ಈವತ್ತು ಊರಿಗೆ ಹೋಗಬೇಕೆಂದಿದ್ದೆ. ಅಷ್ಟರಲ್ಲಿ ಇಲ್ಲೊಬ್ಬರು ಉಚಿತ ಊಟ ಸಿಗುತ್ತದೆ ಅಂದರು. ಅದರಂತೆ ಸಾಲಿನಲ್ಲಿ ನಿಂತಿದ್ದೇನೆ. ಊಟ ಸಿಕ್ಕಿದೊಡನೆ ಹೇಗೋ ರೈಲು ಹತ್ತಿ ಊರು ಸೇರುತ್ತೇನೆ.

ಅನೀಶ್, ಕೇರಳ ಕಣ್ಣೂರು (ನಿರುದ್ಯೋಗಿ)

ನಾನು ಕಳೆದ 8 ವರ್ಷಗಳಿಂದ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದೇನೆ. ದುಡಿದ ಹಣ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ. ಪ್ರತೀದಿನ ಸಂಜೆ 7ಕ್ಕೆ ಇಲ್ಲಿ ಬಂದು ನಿಲ್ಲುತ್ತೇನೆ. ಒಬ್ಬರು ‘ಅಮ್ಮ’ ನಮಗೆ ಆಹಾರ ತಂದು ಕೊಡುತ್ತಾರೆ. ನಾವದನ್ನು ಪ್ರಸಾದ ಅಂತ ಭಾವಿಸಿ ತಿನ್ನುತ್ತೇವೆ. ರಾತ್ರಿ ಊಟಕ್ಕೆ 30-40 ರೂ. ಕೊಡಬೇಕು. ಹೀಗೆ ಇಲ್ಲಿ ಉಚಿತ ಅನ್ನ ಸಿಗುವುದರಿಂದ ಉಳಿತಾಯದ ಹಣವನ್ನು ಮನೆಗೆ ಕಳುಹಿಸಿಕೊಡುತ್ತಿದ್ದೇನೆ.

ರಮೇಶ್, ಹಾಸನ (ಕೂಲಿ ಕಾರ್ಮಿಕ)

ನಾನು ಎರಡು ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಮಂಗಳೂರಿಗೆ ಬಂದೆ. ಮೊದಲು ಕೆಲಸ ಸಿಗಲಿಲ್ಲ. ಆವಾಗ ನನಗೆ ಇಲ್ಲಿ ಸಿಗುವ ಅನ್ನವೇ ಹಸಿವು ತಣಿಸಿತ್ತು. ಈಗ ಕೆಲಸ ಇದೆ. ಆದರೆ ಯಾಕೋ ಇಲ್ಲಿನ ಊಟವನ್ನು ಬಿಡಲಾಗುತ್ತಿಲ್ಲ.

ಶರೀಫ್  , ಗದಗ (ಕೂಲಿ ಕಾರ್ಮಿಕ)

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News