ಉಡುಪಿ ಗ್ರಾಮೀಣ ಅಂಚೆ ನೌಕರರಿಂದ ಧರಣಿ
ಉಡುಪಿ, ಮಾ.28: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಉಡುಪಿ ವಿಭಾಗದ ನೇತತ್ವದಲ್ಲಿ ಅಂಚೆ ನೌಕರರು ಮಂಗಳವಾರ ಉಡುಪಿಯ ಪ್ರಧಾನ ಅಂಚೆ ಕಚೇರಿ ಎದುರು ಧರಣಿ ನಡೆಸಿದರು.
ಸಂಘದ ಉಡುಪಿ ವಿಭಾಗದ ಅಧ್ಯಕ್ಷ ಬಸವ ಬಿಲ್ಲವ ಮಾತನಾಡಿ, ಗ್ರಾಮೀಣ ಅಂಚೆ ನೌಕರರಿಗೆ ಸಂಬಂಧಿಸಿದ ಕಮಲೇಶ್ ಚಂದ್ರ ವರದಿಯನ್ನು ಶೀಘ್ರವೇ ಅನುಷ್ಠಾನಗೊಳಿಸಬೇಕು. ಗ್ರಾಮೀಣ ಅಂಚೆ ನೌಕರರನ್ನು ಖಾಯಂಗೊಳಿಸಿ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ದಿನಕ್ಕೆ ಎಂಟು ಗಂಟೆ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ 2.65ಲಕ್ಷ ಹಾಗೂ ಉಡುಪಿ ಜಿಲ್ಲೆಯಲ್ಲಿ 525 ಗ್ರಾಮೀಣ ಅಂಚೆ ನೌಕರರಿದ್ದಾರೆ. ಇವರು ಪ್ರತಿದಿನ ಎಂಟು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಆದರೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಸರಕಾರದ ಯೋಜನೆಗಳನ್ನು ಹಳ್ಳಿಹಳ್ಳಿಗಳಿಗೆ ತಲುಪಿಸುವ ಕೆಲಸ ಮಾಡುವ ಅಂಚೆ ನೌಕರರನ್ನು ಸರಕಾರ ಸಂಪೂರ್ಣ ನಿರ್ಲಕ್ಷಿಸುತ್ತಿದೆ. ಆದುದರಿಂದ ಅಂಚೆ ನೌಕರರ ಗುಲಾಮ ಪದ್ಧತಿಯನ್ನು ತೆಗೆದುಹಾಕಬೇಕು ಎಂದರು.
ಧರಣಿಯಲ್ಲಿ ಕಾರ್ಯದರ್ಶಿ ಸಂತೋಷ್ ಮಧ್ಯಸ್ಥ, ಕೋಶಾಧಿಕಾರಿ ರಾಮನಾಥ ಮೊಲಿ, ಅನಿತಾ ಮಣಿಪುರ, ಪೂರ್ಣಿಮಾ, ವಾಸು, ಕೃಷ್ಣ , ನಾರಾಯಣ ಸಂತೆಕಟ್ಟೆ, ಹಾವಂಜೆ ರೈತ ಸಂಘದ ಶಂಕರ್, ರಂಗನಾಥ್ ಶೆಟ್ಟಿ, ಭಾಸ್ಕರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.