ತಣ್ಣೀರುಬಾವಿ ಬೀಚ್ ನಲ್ಲಿ ನೀರುಪಾಲಾಗಿದ್ದ ಯುವಕನ ಮೃತದೇಹ ಪತ್ತೆ

Update: 2017-03-29 07:53 GMT

ಮಂಗಳೂರು, ಮಾ.29: ಪಣಂಬೂರಿನ ತಣ್ಣೀರುಬಾವಿ ಬೀಚ್‌ನಲ್ಲಿ ಈಜಲೆಂದು ಸಮುದ್ರಕ್ಕೆ ಧುಮುಕಿ ನೀರುಪಾಲಾಗಿದ್ದ ಕಾವೂರು ಬೊಂದೇಲ್‌ನ ನಿವಾಸಿ ಅಬೂಬಕರ್ ಎಂಬವರ ಪುತ್ರ ಸಫ್ವಾನ್ (19)ರ ಮೃತದೇಹ ಬುಧವಾರ ಬೆಳಗ್ಗೆ ಪತ್ತೆಯಾಗಿದೆ.

ಕುಟುಂಬ ಸದಸ್ಯರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಮಂಗಳವಾರ ಸಂಜೆ ತಣ್ಣೀರುಬಾವಿ ಬೀಚ್‌ಗೆ ಬಂದಿದ್ದ ಸಫ್ವಾನ್ ತನ್ನ ಸ್ನೇಹಿತ ಹಫೀಝ್‌ನೊಂದಿಗೆ ಈಜಲೆಂದು ನೀರಿಗೆ ಧುಮುಕಿದ್ದ. ಈ ಪೈಕಿ ಸಫ್ವಾನ್ ನೀರುಪಾಲಾಗಿ ನಾಪತ್ತೆಯಾಗಿದ್ದ. ಮಂಗಳವಾರ ಸಂಜೆಯಿಂದಲೇ ಪಣಂಬೂರು ಠಾಣಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಮುಳುಗು ತಜ್ಞರು ಮತ್ತು ಕರಾವಳಿ ಪಡೆ, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಫ್ವಾನ್ ಪತ್ತೆಗೆ ಪ್ರಯತ್ನವನ್ನು ಮುಂದುವರಿಸಿದ್ದರು. ರಾತ್ರಿ ಸುಮಾರು 1 ಗಂಟೆಯವರೆಗೂ ಪತ್ತೆ ಕಾರ್ಯಾಚರಣೆ ಮುಂದುವರಿದಿತ್ತು. ಬುಧವಾರ ಬೆಳಗ್ಗೆ ಸುಮಾರು 6:15ಕ್ಕೆ ಸಫ್ವಾನ್‌ರ ಮೃತದೇಹ ಪತ್ತೆಯಾಗಿದೆ ಎಂದು ಪಣಂಬೂರು ಪೊಲೀಸರು ತಿಳಿಸಿದ್ದಾರೆ.

ನೆರವಿಗೆ ಬಾರದ ಕೋಸ್ಟ್ ಗಾರ್ಡ್
ಸಂಜೆ ಸುಮಾರು 7 ಗಂಟೆಗೆ ನೀರುಪಾಲಾಗಿದ್ದ ಸಫ್ವಾನ್‌ನನ್ನು ಪತ್ತೆ ಹಚ್ಚುವಲ್ಲಿ ಕೋಸ್ಟ್‌ಗಾರ್ಡ್‌ನವರು ನೆರವಿಗೆ ಬಂದಿಲ್ಲ ಎಂದು ಆರೋಪಿಸಲಾಗಿದೆ. ಘಟನೆ ನಡೆದ ಬೆನ್ನಿಗೇ ಕೋಸ್ಟ್ ಗಾರ್ಡ್‌ನವರಿಗೆ ಮಾಹಿತಿ ನೀಡಲಾಗಿತ್ತು. ಆದರೂ ಅವರು ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News