ಅಮಿತ್ ಶಾ ಹಾಗೂ ಇತರ 13 ಮಂದಿಯನ್ನು ಕರೆಸಿ: ನ್ಯಾಯಾಲಯಕ್ಕೆ ಮಾಜಿ ಸಚಿವೆ ಮಾಯಾ ಕೊಡ್ನಾನಿ ಮನವಿ
ಅಹ್ಮದಾಬಾದ್, ಮಾ.31: ಗೋಧ್ರಾ ಹತ್ಯಾಕಾಂಡದ ಬಳಿಕ 2002ರಲ್ಲಿ ನಡೆದ ನರೋಡಾ ಗಾಮ್ ಹತ್ಯಾಕಾಂಡದ ಸಂಬಂಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಇತರ 13 ಮಂದಿ ಬಿಜೆಪಿ ಮುಖಂಡರಿಗೆ ಸಮನ್ಸ್ ನೀಡಬೇಕು ಎಂದು ಗುಜರಾತ್ನ ಮಾಜಿ ಸಚಿವೆ ಮತ್ತು ಬಿಜೆಪಿ ನಾಯಕಿ ಮಾಯಾ ಕೊಡ್ನಾನಿ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಪ್ರಕರಣದಲ್ಲಿ ತನ್ನ ಪರ ವಾದ ಮಂಡಿಸಲು ಪೂರಕವಾಗುವಂತೆ ಈ ಮುಖಂಡರನ್ನು ನ್ಯಾಯಾಲಯಲ್ಲಿ ಪ್ರಶ್ನಿಸಬೇಕಾಗುತ್ತದೆ ಎಂದು ಈ ತಿಂಗಳ ಆರಂಭದಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಗುರುವಾರ ನ್ಯಾಯಾಲಯ ಈ ಸಂಬಂಧ ಕೊಡ್ನಾನಿ ಪರ ವಕೀಲ ಅಮಿತ್ ಪಟೇಲ್ ಅವರನ್ನು, "ಈ ಹಂತದಲ್ಲಿ ಈ ಮನವಿ ಸಲ್ಲಿಸಿರುವುದು ಎಷ್ಟು ಪ್ರಸ್ತುತ ಎಂದು ಕೇಳಿದೆ. ಪ್ರಕರಣದ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಲಾಗಿದೆ.
ಈ ತಿಂಗಳ ಆರಂಭದಲ್ಲಿ ಕೊಡ್ನಾನಿಯವರು 14 ಮಂದಿಗೆ ಸಮನ್ಸ್ ನೀಡುವಂತೆ ಕೋರಿ ಅಪರಾಧ ದಂಡಸಂಹಿತೆಯ ಸೆಕ್ಷನ್ 233(3) ಅನ್ವಯ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಕೇಳಿರುವ ಸ್ಪಷ್ಟನೆಗೆ ಸೋಮವಾರ ನ್ಯಾಯಾಲಯದ ಮುಂದೆ ವಾದ ಮಂಡಿಸುವುದಾಗಿ ಅವರು ತಿಳಿಸಿದ್ದಾರೆ.
ಸೆಕ್ಷನ್ 233(3)ಯ ಅನ್ವಯ, "ಆರೋಪಿ ಯಾವುದೇ ಸಾಕ್ಷಿ ಅಥವಾ ಪುರಾವೆಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ಕೋರಿದರೆ, ನ್ಯಾಯಾಧೀಶರು ಸಮನ್ಸ್ ನೀಡಬೇಕಾಗುತ್ತದೆ. ಯಾವ ಆಧಾರದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂಬುದಕ್ಕೆ ಸಕಾರಣ ದೊರಕದಿದ್ದರೆ ಮಾತ್ರ ಅರ್ಜಿ ರದ್ದು ಮಾಡಲು ಅವಕಾಶ ಇರುತ್ತದೆ.