ವಿಕಲಚೇತನರಿಗೆ ಅನುಕಂಪದ ಬದಲು ಅನುಕೂಲ ಒದಗಿಸುವುದು ಅಗತ್ಯ: ಸಚಿವ ರೈ
ಮಂಗಳೂರು, ಮಾ.31: ವಿಕಲಚೇತನರಿಗೆ ಅನುಕಂಪ, ಸಹಾನುಭೂತಿಯ ಬದಲು ಅವರಿಗೆ ಆದ್ಯತೆಯ ನೆಲೆಯಲ್ಲಿ ಸಮಾಜದಲ್ಲಿ ಗೌರವಯುತವಾಗಿ ಜೀವಿಸಲು ಅಗತ್ಯವಾದ ಅನುಕೂಲಗಳನ್ನು ಒದಗಿಸುವುದು ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಿಸಿದ್ದಾರೆ. ಅವರು ಇಂದು ನಗರದ ಪುರಭವನದಲ್ಲಿ ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದ ವಿವಿಧ ಯೋಜನೆಗಳಡಿ ವಿಕಲಚೇತನರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡುತ್ತಿದ್ದರು. ಮಂಗಳೂರು ಮಹಾನಗರ ಪಾಲಿಕೆಯು ದುರ್ಬಲ ಸಮಾಜದ ಜನರಿಗೆ ಪ್ರಗತಿಪರ ದೃಷ್ಟಿಯಲ್ಲಿ ಉತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಅವರು ಈ ಸಂದರ್ಭ ಹೇಳಿದರು. ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ರವೂಫ್, ಸಬಿತಾ ಮಿಸ್ಕಿತ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸದಸ್ಯರಾದ ಅಪ್ಪಿ, ಮಹಾಬಲ ಮಾರ್ಲ, ಬಶೀರ್ ಅಹ್ಮದ್, ವಿನಯ್ರಾಜ್, ಪ್ರವೀಣ್ ಚಂದ್ರ ಆಳ್ವ, ರತಿಕಲಾ, ಪ್ರಕಾಶ್, ಕೇಶವ ಮರೋಳಿ, ಕವಿತಾ, ಅಖಿಲಾ ಆಳ್ವ, ಝುಬೈದಾ, ಶೈಲಜಾ, ಪುರುಷೋತ್ತಮ ಚಿತ್ರಾಪುರ, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 2016-17ನೆ ಸಾಲಿನ ಮಹಾನಗರ ಪಾಲಿಕೆಯ ಶೇ. 3ರ ವಿಕಲಚೇತನ ಕಲ್ಯಾಣ ಕಾರ್ಯಕ್ರಮ, ಶೇ. 7.25 ಇತರೆ ಬಡಜನರ ಕಾರ್ಯಕ್ರಮ, ಶೇ. 24.10 ಎಸ್ಸಿ- ಎಸ್ಟಿ ಮೀಸಲು ನಿಧಿಯಡಿ 952 ಫಲಾನುಭವಿಗಳಿಗೆ 88.71 ಲಕ್ಷ ರೂ.ಗಳ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಶೇ.7.25 ಯೋಜನೆಯಡಿ 60 ಜನರಿಗೆ ಆಟೋ ರಿಕ್ಷಾ ಖರೀದಿಗಾಗಿ 30 ಲಕ್ಷ ರೂ. ಧನಸಹಾಯ ಮಂಜೂರಾಗಿದ್ದು, 37 ಫಲಾನುಭವಿಗಳಿಗೆ ಬ್ಯಾಂಕ್ಗಳಿಂದ ಸಾಲ ಮಂಜೂರು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 1706 ಫಲಾನುಭವಿಗಳು 1.97 ಕೋಟಿ ರೂ. ಮೊತ್ತದ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದರು.