ಮಂಗಳೂರು: ಕಲಾಪ ಬಹಿಷ್ಕರಿಸಿ ವಕೀಲರ ಧರಣಿ
ಮಂಗಳೂರು, ಮಾ.31: ಕಾನೂನು ಆಯೋಗವು ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ 'ವಕೀಲರ (ತಿದ್ದುಪಡಿ)ಮಸೂದೆ 2017' ವಕೀಲರ ವೃತ್ತಿಗೆ ಮತ್ತು ಹಕ್ಕುಗಳಿಗೆ ಚ್ಯುತಿ ತರುತ್ತದೆ. ಹಾಗಾಗಿ ಈ ಮಸೂದೆ ಅಸಂವಿಧಾನಿಕ ಎಂದು ಆರೋಪಿಸಿ ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಶುಕ್ರವಾರ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ನ್ಯಾಯಾಲಯದ ಆವರಣದಲ್ಲಿ ವಕೀಲರು ಧರಣಿ ನಡೆಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಮಾತನಾಡಿ ಸಂವಿಧಾನದ ಮೇಲೆ ನಂಬಿಕೆ ಇಟ್ಟು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಿರುವ ವಕೀಲರ ಹಕ್ಕನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಭಾರತೀಯ ಕಾನೂನು ಆಯೋಗ ಇಂತಹ ಅಸಂವಿಧಾನಿಕ ಮಸೂದೆಯನ್ನು ಶಿಫಾರಸು ಮಾಡಿದೆ ಎಂದು ಟೀಕಿಸಿದರು.
ರಾಜ್ಯ ಪರಿಷತ್ ಮಾಜಿ ಉಪಾಧ್ಯಕ್ಷ ರವೀಂದ್ರನಾಥ್ ರೈ ಮಾತನಾಡಿ, ವಕೀಲರ (ತಿದ್ದುಪಡಿ)ಮಸೂದೆ 2017ರ ವಿರುದ್ಧ ವಕೀಲರು ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದರು.
ಸಂಘದ ಉಪಾಧ್ಯಕ್ಷೆ ಪುಷ್ಪಲತಾ ಯು.ಕೆ., ಕೋಶಾಧಿಕಾರಿ ಸುಜಿತ್ ಕುಮಾರ್, ಜತೆ ಕಾರ್ಯದರ್ಶಿ ರೂಪಾ ಕೆ., ಎಸ್ಪಿ ಚೆಂಗಪ್ಪ, ಕಾರ್ಯಕಾರಿಣಿ ಸದಸ್ಯರಾದ ಡೇನಿಯಲ್, ನವೀನ್, ಪ್ರೇಮನಾಥ್, ಶ್ರೀಕುಮಾರ್, ವಿನೋದ್ ಪಾಲ್, ಉದನೀಶ್, ಪ್ರಪುಲ್ಲಾ, ಪ್ರಮೋದ್, ರೇಖಾ, ಝೀಟಾ, ಇಸ್ಮಾಯೀಲ್, ಧನವಂತಿ, ಕಿಶೋರ್, ಸುನೀಲ್, ಕಿಶೋರ್ ಡಿಸಿಲ್ವ, ಮಯೂರ್ ಕೀರ್ತಿ ಪಾಲ್ಗೊಂಡಿದ್ದರು.