ಸಿಆರ್‌ಪಿಎಫ್ ವಾಹನಗಳ ಮೇಲೆ ಉಗ್ರರ ದಾಳಿ,ಓರ್ವ ಯೋಧ ಸಾವು

Update: 2017-04-03 16:08 GMT

ಶ್ರಿನಗರ,ಎ.3: ಶ್ರೀನಗರದ ಪಂತಾ ಚೌಕ್‌ನಲ್ಲಿ ಸೋಮವಾರ ಸಿಆರ್‌ಪಿಎಫ್ ವಾಹನಗಳ ಸಾಲಿನ ಮೇಲೆ ಶಂಕಿತ ಉಗ್ರರು ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಕರ್ನಾಟಕದವವರೆಂದು ಶಂಕಿಸಲಾಗಿರುವ ಓರ್ವ ಯೋಧ ಹುತಾತ್ಮರಾಗಿದ್ದು,ಇತರ ಐವರು ಗಾಯಗೊಂಡಿದ್ದಾರೆ.

 ಸಿಆರ್‌ಪಿಎಫ್ ಯೋಧರನ್ನು ಜಮ್ಮುವಿನಿಂದ ಶ್ರೀನಗರಕ್ಕೆ ಸಾಗಿಸುತ್ತಿದ್ದ ನಾಗರಿಕ ವಾಹನದ ಮೇಲೆ ಪಂತಾ ಚೌಕ್ ಪ್ರದೇಶದ ಸೆಂಪೋರಾ ಎಂಬಲ್ಲಿ ದಾಳಿ ನಡೆದಿದ್ದು, ಯೋಧರು ಪ್ರತಿದಾಳಿ ನಡೆಸಿದ್ದರು. ಈ ವೇಳೆ 10ರ ಹರೆಯದ ಓರ್ವ ಬಾಲಕಿ ಸೇರಿದಂತೆ ಇಬ್ಬರು ನಾಗರಿಕರೂ ಗಾಯಗೊಂಡಿದ್ದಾರೆ. ಗಾಯಾಳು ಯೋಧರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದರು. ಅವರ ಪೈಕಿ ಹೆಡ್‌ಕಾನ್‌ಸ್ಟೇಬಲ್ ಬಸಪ್ಪ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು ಎಂದು ಸಿಆರ್‌ಪಿಎಫ್ ವಕ್ತಾರ ಬಿ.ಚೌಧುರಿ ಸುದ್ದಿಸಂಸ್ಥೆಗೆ ತಿಳಿಸಿದರು.

ಮೃತ ಹೆಡ್‌ಕಾನ್‌ಸ್ಟೇಬಲ್ ಕರ್ನಾಟಕದವರು ಎಂದು ಶಂಕಿಸಲಾಗಿದೆ. ಘಟನೆಯ ವೇಳೆ ಉಂಟಾಗಿದ್ದ ಗೊಂದಲದ ಲಾಭವನ್ನು ಪಡೆದ ಉಗ್ರರು ಸ್ಥಳದಿಂದ ಪರಾರಿಯಾದ್ದಾರೆ.

 ಎ.9ರಂದು ನಡೆಯಲಿರುವ ಲೋಕಸಭಾ ಉಪಚುನಾವಣೆಯ ಬಂದೋಬಸ್ತ್ ಕರ್ತವ್ಯಕ್ಕೆಂದು ಸಿಆರ್‌ಪಿಎಫ್ ಯೋಧರು ತೆರಳುತ್ತಿದ್ದಾಗ ಈ ದಾಳಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News