ಪೋಲಿಸ್ ದೌರ್ಜನ್ಯಕ್ಕೆ ಜಿಲ್ಲಾ ಅಝ್ಹರೀಸ್ ಖಂಡನೆ
ಪೋಲಿಸ್ ದೌರ್ಜನ್ಯಕ್ಕೆ ಜಿಲ್ಲಾ ಅಝ್ಹರೀಸ್ ಖಂಡನೆ
ಮಂಗಳೂರು, ಎ.5: ಪ್ರಕರಣವೊಂದರಲ್ಲಿ ಸಿಸಿಬಿ ಪೋಲೀಸರಿಂದ ಬಂಧನಕ್ಕೊಳಗಾದ ಖುರೈಶಿ ಎಂಬ ಯುವಕನನ್ನು ವಿಚಾರಣೆಯ ನೆಪದಲ್ಲಿ ಕಾನೂನು ಉಲ್ಲಂಘಿಸಿ ವಾರ ಕಾಲ ಪೊಲೀಸರು ಕಿಡ್ನಿ ನಿಷ್ಕ್ರಿಯಗೊಳ್ಳುವಷ್ಟರ ಮಟ್ಟಿಗೆ ಅಮಾನವೀಯವಾಗಿ ದೌರ್ಜನ್ಯ ನಡೆಸಿದ್ದು ಖಂಡನಾರ್ಹ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಅಝ್ಹರೀಸ್ ಆಗ್ರಹಿಸಿದೆ.
ಕರಾವಳಿ ಜಿಲ್ಲೆಯಲ್ಲಿ ನಿರಂತರವಾಗಿ ಮುಸ್ಲಿಂ ಯುವಕರನ್ನು ಗುರಿಯಾಗಿಸಿ ಯಾವುದೋ ಒಂದು ಪ್ರಕರಣದ ಹೆಸರಿನಲ್ಲಿ ಬಂಧಿಸಿ, ಇನ್ಯಾವುದೋ ಪ್ರಕರಣಗಳಲ್ಲಿ ಸಿಲುಕಿಸುವ ಷಡ್ಯಂತ್ರ ನಿರಂತರವಾಗಿ ನಡೆಯುತ್ತಿದೆ. ಅದರ ಕುರಿತು ಪ್ರತಿಭಟಿಸುವವರನ್ನು ಬಲಪ್ರಯೋಗಿಸಿ ಅವರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಇಲ್ಲಿ ನಿರಂತರವಾಗಿ ನಡೆಯುತ್ತಿರುವಾಗ ಆಡಳಿತ ಪಕ್ಷ ಕುರುಡುತನ ಪ್ರದರ್ಶಿಸುವುದು ಖಂಡನೀಯ.
ಒಂದು ಕುಟುಂಬದ ಆಧಾರ ಸ್ಥಂಭವಾಗಬೇಕಿದ್ದ ಕುರೈಶಿಯನ್ನು ವಿಚಾರಣೆಯ ನೆಪದಲ್ಲಿ ಅಮಾನುಷವಾಗಿ ದೌರ್ಜನ್ಯವೆಸಗಿದ ಅಧಿಕಾರಿಗಳ ವಿರುದ್ಧ ರಾಜ್ಯ ಸರಕಾರ ತನಿಖೆಗೊಳಪಡಿಸಿ ಆ ಯುವಕನಿಗೆ ಸೂಕ್ತ ಪರಿಹಾರವನ್ನು ನೀಡಬೇಕಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ರಾಜ್ಯ ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.
ಮುಸ್ಲಿಂ ಯುವಕರು ಅಪರಾಧಿಗಳಾಗಿದ್ದರೆ ಕಾನೂನು ಪ್ರಕಾರ ಅವರನ್ನು ಶಿಕ್ಷೆಗೊಳಪಡಿಸಲಿ. ಅದಲ್ಲದೆ ಅವರ ಮೇಲೆ ಅಮಾನುಷವಾಗಿ ದೌರ್ಜನ್ಯ ನಡೆಸುವುದು ಖಂಡನಾರ್ಹ. ರಾಜ್ಯ ಸರಕಾರ ಇದೇ ರೀತಿ ಮೌನ ವಹಿಸಿದರೆ ಕರಾವಳಿ ಭಾಗದಲ್ಲಿ ಇನ್ನಷ್ಟು ಮುಸ್ಲಿಂ ಯುವಕರು ಅನ್ಯಾಯವಾಗಿ ಬಲಿಪಶು ಆಗುತ್ತಲೇ ಇರುವರು. ರಾಜಕೀಯದ ಹೆಸರಿನಲ್ಲಿ ಇಲ್ಲಿನ ಮುಸ್ಲಿಂ ಯುವಕರ ಮೇಲೆ ನಡೆಯುವ ದೌರ್ಜನ್ಯ ನಿರಂತರವಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸಂಭಂದಪಟ್ಟವರು ಕ್ರಮ ಜರಗಿಸಿ ನ್ಯಾಯ ಒದಗಿಸಬೇಕೆಂದು ಅಧ್ಯಕ್ಷರಾದ ನಝೀರ್ ಅಝ್ಹರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.